ಬೆಂಗಳೂರು; ಕರ್ನಾಟಕ ಪ್ರತಿಷ್ಟಿತ ಕುಟುಂಬವೊಂದಕ್ಕೆ ಇಂತಹ ಸ್ಥಿತಿ ಬರುತ್ತೆ ಅಂತಾ ಯಾರೂ ಕೂಡ ಊಹೆ ಮಾಡಿರಲಿಲ್ಲ. ಒಬ್ಬ ಮಗ ಜೈಲು ಸೇರಿದ ಬೆನ್ನಲ್ಲೇ ಅಪ್ಪನೂ ಜೈಲು ಸೇರ್ತಾರೆ ಇತ್ತ ಅಮ್ಮನೂ ಬಂಧನ ಭೀತಿಯಿಂದ ತಲೆಮರೆಸಿಕೊಳ್ತಾರೆ. ಅಪ್ಪ, ಅಮ್ಮನಿಗೆ ಬೇಲ್ ಸಿಕ್ತು ಅನ್ನುವಷ್ಟರಲ್ಲಿ ಮತ್ತೊಬ್ಬ ಮಗ ಜೈಲು ಸೇರ್ತಾನೆ. ನಿಜಕ್ಕೂ ಶಾಸಕ ರೇವಣ್ಣ ದಂಪತಿಯ ಪಾಡು ಯಾರಿಗೂ ಬೇಡ. ಮಕ್ಕಳು ಮಾಡಿದ ಘನಂದಾರಿ ಕೆಲಸಕ್ಕೆ ಇದೀಗ ಈ ವಯಸ್ಸಿನಲ್ಲಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಕಣ್ಣೀರು ಹಾಕುವಂತಾಗಿದೆ.
ನಿಮಗೆಲ್ಲಾ ಗೊತ್ತೆ ಇದೆ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೂರಜ್ ರೇವಣ್ಣ ಅವರಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತ್ತ ಪ್ರಜ್ವಲ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಹಾಗಾಗಿ ಸದ್ಯಕ್ಕೆ ಇಬ್ಬರಿಗೂ ಜೈಲೇ ಗತಿ.ಸದ್ಯ ಇಬ್ಬರೂ ಕೂಡ ಕ್ವಾರಂಟೈನ್ ಜೈಲಿನಲ್ಲಿದ್ದಾರೆ.
ಇನ್ನು ಜುಲೈ 1 ರಂದು ಭವಾನಿ ರೇವಣ್ಣ ಜೈಲಿಗೆ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿಯಾಗೋದಕ್ಕೆ ಆಗಮಿಸಿದ್ದರು. ಈ ವೇಳೆ ಕಾಲು ನೋವಿನಿಂದಾಗಿ ಕುಂಟುತ್ತಲೇ ಅವರು ಬಂದಿದ್ದರು.ಜುಲೈ 4 ರಂದು ರೇವಣ್ಣ ಅವರು ಮಗನನ್ನು ನೋಡಲು ಬಂದಿದ್ದರು. ಅಂದು ಇಬ್ಬರೂ ಬೇರೆ ಬೇರೆಯಾಗಿ ಬಂದಿದ್ದರು. ಆದರೆ ಇವತ್ತು ಪರಪ್ಪನ ಅಗ್ರಹಾರ ಜೈಲಿಗೆ ಭವಾನಿ ರೇವಣ್ಣ ದಂಪತಿ ಜೊತೆಯಾಗಿ ಬಂದಿದ್ದರು.ಇಬ್ಬರು ಮಕ್ಕಳನ್ನ ನೋಡಲು ತಂದೆ ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಆಗಮಿಸಿದ್ದರು.
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲುವಾಸದಲ್ಲಿದ್ದರೆ, ಇತ್ತ ಸಲಿಂಗಕಾಮ ಪ್ರಕರಣದಲ್ಲಿ ಸೂರಜ್ ರೇವಣ್ಣ ಜೈಲುವಾಸದಲ್ಲಿದ್ದಾರೆ. ಹೀಗಾಗಿ ಇಬ್ಬರು ಮಕ್ಕಳನ್ನ ನೋಡಲು ಭವಾನಿ ರೇವಣ್ಣ ದಂಪತಿ ಆಗಮಿಸಿದ್ದರು. ಇನ್ನು ಹೊಟ್ಟೆ ನೋವಿನಿಂದ ನಿನ್ನೆ ಸೂರಜ್ ರೇವಣ್ಣ ಜೈಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಮಗನನ್ನು ಭೇಟಿಯಾಗಲು ಜೈಲಿಗೆ ಬಂದ ರೇವಣ್ಣ
ಮೊದಲ ಬಾರಿಗೆ ಪುತ್ರನನ್ನು ಭೇಟಿಯಾಗಲು ಶಾಸಕ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ರೇವಣ್ಣ ಅವರ ಎರಡೂ ಮಕ್ಕಳು ಸದ್ಯ ಜೈಲಿನಲ್ಲಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನಲ್ಲಿದ್ದಾರೆ. ಅವರನ್ನು ಭೇಟಿಯಾದ ರೇವಣ್ಣ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ತಂದೆಯೂ ಕೂಡ ಮಗನ ಜೊತೆ ಜಾಮೀನು ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ನಿನ್ನೆ ರೇವಣ್ಣ ಹೊಳೆನರಸೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ನಾನು ಪ್ರಜ್ವಲ್ ಭೇಟಿಗೆ ಜೈಲಿಗೆ ಹೋಗಲ್ಲ ಎಂದಿದ್ದರು.ಭವಾನಿ ರೇವಣ್ಣ ಪ್ರಜ್ವರ್ ರೇವಣ್ಣ ಅವರ ತಾಯಿಯಾಗಿ ಮಗನನ್ನು ನೋಡಲು ಹೋಗಿದ್ದಾರೆ. ತಾಯಿ ಆಗಿ ಅದು ಅವರ ಕರ್ತವ್ಯ. ಆದರೆ ನಾನು ಜೈಲಿಗೆ ಹೋಗೋದಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಅಲ್ಲದೇ ಭವಾನಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರ ಬಳಿ ಏನು ಮಾತನಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಮಾತ್ರ ಹೋಗಲ್ಲ. ಹೋದರೆ ನಾನು ಪ್ರಜ್ವಲ್ ಗೆ ಏನೋ ಹೇಳಿ ಕೊಡಲು ಹೋಗಿದ್ದೇನೆ ಅನ್ನೋ ಅರ್ಥ ಹುಟ್ಟಿಕೊಳ್ಳುತ್ತೆ. ಹಾಗಾಗಿ ನಾನು ಹೋಗಲ್ಲ ಎಂದಿದ್ದರು.
ಇನ್ನು ನಮ್ಮ ಕುಟುಂಬದ ಮೇಲಿರುವ ಕೇಸ್ಗಳ ವಿಚಾರಣೆ ಕೋರ್ಟ್ನಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವಾಗ ನಾನು ಮಾತನಾಡುವುದು ಸರಿಯಲ್ಲ. ಹಾಗಾಗಿ ನಾನು ಈಗ ಏನೂ ಮಾತನಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ರೇವಣ್ಣ ಹೇಳಿದ್ದಾರೆ.ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರ ಬರುತ್ತೇವೆ ಎಂದು ರೇವಣ್ಣ ಹೇಳಿದ್ದರು.ಅದರ ಬೆನ್ನಲ್ಲೇ ಜುಲೈ 4 ರಂದು ರೇವಣ್ಣ ಪ್ರಜ್ವಲ್ ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರು.