ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ 6 ದಿನ. ಡಿ ಬಾಸ್ ಜೈಲು ಸೇರುತ್ತಿದ್ದಂತೆ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನತ್ತ ಬರುತ್ತಿದ್ದಾರೆ. ಬಳ್ಳಾರಿ, ತುಮಕೂರು ಹೀಗೆ ಬೇರೆ ಬೇರೆ ಜಿಲ್ಲೆಗಳಿಂದ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನತ್ತ ಬಂದು ಭೇಟಿ ಸಾಧ್ಯವಾಗದೇ ನಿರಾಸೆಯಿಂದ ವಾಪಾಸ್ ಹೋಗಿದ್ದಾರೆ.
ಇದೀಗ ತಮ್ಮನ್ನು ಭೇಟಿ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಜೈಲಿನತ್ತ ಅಭಿಮಾನಿಗಳು ಬರುತ್ತಿದ್ದಾರೆ ಎಂಬ ವಿಚಾರ ಡಿ ಬಾಸ್ ದರ್ಶನ್ ಅವರಿಗೆ ಜೈಲಾಧಿಕಾರಿಗಳ ಮೂಲಕ ಗೊತ್ತಾಗಿದ್ದು, ಜೈಲಾಧಿಕಾರಿಗಳ ಮೂಲಕವೇ ಅಭಿಮಾನಿಗಳಿಗೆ ದರ್ಶನ್ ಸಂದೇಶ ರವಾನಿಸಿದ್ದಾರೆ, ನನ್ನ ಭೇಟಿಗಾಗಿ ಅಭಿಮಾನಿಗಳು ಯಾರೂ ಕೂಡ ಜೈಲಿನ ಬಳಿಗೆ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ನನ್ನ ಭೇಟಿಗಾಗಿ ಸಾವಿರಾರುಗಟ್ಟಲೇ ದೂರದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ನನಗಾಗಿ ಕಾಯೋದು, ಬಳಿಕ ನನ್ನನ್ನು ಭೇಟಿ ಮಾಡಲು ಸಾಧ್ಯವಾಗದೇ ನಿರಾಸೆಯಿಂದ ಹೋಗೋದು ಬೇಡ. ಹಾಗಾಗಿ ನನ್ನ ಭೇಟಿಗಾಗಿ ಯಾರೂ ಕೂಡ ಬರಬೇಡಿ ಎಂದು ದರ್ಶನ್ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನು ಮೊನ್ನೆ ದರ್ಶನ್ ಅಭಿಮಾನಿಯಾಗಿರುವ ವಿಕಲ ಚೇತನ ಯುವತಿಯೊಬ್ಬಳು ದರ್ಶನ್ ಅವರು ಕೊಡಿಸಿದ ಆಟೋದಲ್ಲಿ ಪೋಷಕರ ಜೊತೆ ಪರಪ್ಪನ ಅಗ್ರಹಾರ ಜೈಲು ಬಳಿ ಬಂದಿದ್ದಳು. ಅಲ್ಲದೇ ನೀರು ಆಹಾರ ಸೇವಿಸದೇ ದರ್ಶನ್ ಅವರನ್ನು ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದಳು.ಈ ವಿಚಾರ ದರ್ಶನ್ ಅವರ ಕಿವಿಗೆ ಬಿದ್ದಿದ್ದು ಅವರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಮೂರು ದಿನಗಳ ಹಿಂದೆ ಯಾದಗಿರಿಯಿಂದ ವಿಶೇಷ ಚೇತನ ಯುವಕ ಸೂರ್ಯಕಾಂತ ಎಂಬಾತ ಜೈಲು ಬಳಿ ಆಗಮಿಸಿದ್ದ. ಥ್ರೀ ವೀಲ್ಹರ್ ಬೈಕ್ ನಲ್ಲಿ ಬಂದಿದ್ದ ಆತ ದರ್ಶನ್ ಅವರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದ. ಆದರೆ ದರ್ಶನ್ ಅವರನ್ನು ಹಾಗೇ ಎಲ್ಲರಿಗೂ ನೋಡುವ ಅವಕಾಶ ಇಲ್ಲದೇ ಇರೋದರಿಂದ ಆ ಯುವಕ ನಿರಾಸೆಯಿಂದ ವಾಪಾಸ್ ಹೋಗಿದ್ದ ಎನ್ನಲಾಗಿದೆ. ಇನ್ನು ದರ್ಶನ್ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದು ಯಾರ ಜೊತೆನೂ ಮಾತನಾಡುತ್ತಿಲ್ಲ ಎನ್ನಲಾಗಿದೆ. ಮೊನ್ನೆಯಷ್ಟೇ ದರ್ಶನ್ ಅವರನನ್ನು ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಹಾಗೂ ಸ್ನೇಹಿತ ವಿನೋದ್ ಪ್ರಭಾಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪತ್ನಿ ಹಾಗೂ ಪುತ್ರನ ಮುಂದೆ ಡಿ ಬಾಸ್ ಕಣ್ಣೀರು ಹಾಕಿದ್ದರು ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಲಭ್ಯವಾಗಿವೆ 30 ಸಾಕ್ಷ್ಯಗಳು
ಇನ್ನು ಪ್ರಕರಣದಲ್ಲಿ ನಟ ದರ್ಶನ್ ಅವರು ಭಾಗಿಯಾಗಿದ್ದಾರೆ ಅನ್ನೋದಕ್ಕೆ ಪೊಲೀಸರಿಗೆ ಬರೋಬ್ಬರಿ 30 ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ.
ಪವಿತ್ರ ಗೌಡ ಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಮಾಡುತ್ತಿದ್ದ ಅನ್ನೋದು ಗೊತ್ತಾಗುತ್ತಿದ್ದಂತೆ ಆತನನ್ನು ಚಿತ್ರದುರ್ಗದಿಂದ ದರ್ಶನ್ ನಿದರ್ಶನದಂತೆ ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆಯಲ್ಲಿರುವ ದರ್ಶನ್ ಆಪ್ತ ವಿನಯ್ ಕಾರ್ ಶೆಡ್ ಗೆ ಕರೆದುಕೊಂಡು ಬರಲಾಗಿತ್ತು. ಅಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಇನ್ನು ಪ್ರಕರಣದಲ್ಲಿ ಡಿ ಬಾಸ್ ಭಾಗಿಯಾಗಿದ್ದಾರೆ ಎನ್ನೋದಕ್ಕೆ ರೇಣುಕಾಸ್ವಾಮಿಯನ್ನು ಕರೆ ತಂದಲ್ಲಿಂದ ಆತನನ್ನು ಕೊಲೆ ಮಾಡಿ ಶವ ಬಿಸಾಕೋವರೆಗೂ ಪೊಲೀಸರಿಗೆ ಬರೋಬ್ಬರಿ 30 ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದೆ.