ಬೆಂಗಳೂರು: ಜನಿವಾರ ತೆಗೆಸಿದ್ದು ಯಾರಿಗಾದರೂ ನೋವನ್ನು ತರುವ ವಿಷಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಲ್ಬುರ್ಗಿಯಲ್ಲಿ ನೀಟ್ ಎಕ್ಸಾಮ್ ವೇಳೆ ಜನಿವಾರ ತೆಗೆಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಖಂಡಿತವಾಗಿ ಈ ತರಹ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು. ಯಾರು ಮಾಡಿದ್ದಾರೆ ಯಾಕೆ ಮಾಡಿದ್ದಾರೆ ನೋಡುತ್ತೇವೆ. ಈ ತರಹ ಜನಿವಾರ ತೆಗೆಸಿದ್ದನ್ನ ಯಾರೂ ಒಪ್ಪುವುದಿಲ್ಲ ಸರಿಯೂ ಅಲ್ಲ. ಇದರ ಬಗ್ಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿತ್ತು. ಯಾರು ಮಾಡಿದ್ದಾರೆ ಗಮನದಲ್ಲಿಟ್ಟುಕೊಂಡು ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಾನೂ ಕೂಡ ಇಲಾಖೆಗೆ ಆಗ್ರಹ ಮಾಡ್ತಾ ಇದ್ದೇನೆ. ಜನಿವಾರ ತೆಗೆಸಿದ್ದು ಯಾರಿಗಾದರೂ ನೋವನ್ನು ತರುವ ವಿಷಯ. ಅವಮಾನ ಮಾಡುವಂಥದ್ದು ಆಗಬಾರದು. ಈ ವಿಷಯ ಒಮ್ಮೆ ಆದ ನಂತರ ಇಡೀ ರಾಜ್ಯಾದ್ಯಂತ ಸೂಕ್ತ ನಿರ್ದೇಶನ ನೀಡಲಾಗಿತ್ತು. ಗೊತ್ತಿದ್ದು ಮಾಡಿದ್ದಾರೋ ಗೊತ್ತಿಲ್ಲದೆ ಮಾಡಿದ್ದಾರೋ ಪರಿಶೀಲನೆ ಆಗುತ್ತದೆ ಎಂದಿದ್ದಾರೆ.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮಂಗಳೂರಿನಲ್ಲಿ ಬಿಜೆಪಿಯವರು ಅತ್ಯಂತ ಕೆಟ್ಟ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿ ಶಾಸಕ ನಿನ್ನೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ. ಬಿಜೆಪಿಯವರು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಪ್ರಚೋದನೆ ಮಾಡಬೇಕು ವೈಷಮ್ಯ ಬೆಳೆಯಬೇಕು ಅಷ್ಟೇ ಬಿಜೆಪಿಯವರ ಉದ್ದೇಶ. ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಭಾಗಿಯಾದವರನ್ನು ಒಂದೇ ದಿನದಲ್ಲಿ ಹಿಡಿದು ಹಾಕಿದ್ದಾರೆ. ಯಾವ ಹಿಂಜರಿಕೆಯೂ ಇಲ್ಲದೇ ಎಲ್ಲರನ್ನೂ ಬಂಧಿಸಲಾಗಿದೆ. ಇನ್ನೂ ಒಂದಷ್ಟು ಜನರ ಬಂಧನ ಆಗಬಹುದು. ವಿ ಸೋಮಣ್ಣ ಸರ್ಕಾರ ನಿಷ್ಕ್ರಿಯ ಆದ್ರೆ ಎನ್ಐಎ ಬರುತ್ತದೆ ಎಂದಿದ್ದಾರೆ. ಸರ್ಕಾರ ನಿಷ್ಕ್ರಿಯ ಆಗುವ ಪ್ರಶ್ನೆಯೇ ಬರುವುದಿಲ್ಲ, ನಾವು ಬಹಳ ಸಕ್ರಿಯರಾಗಿದ್ದೇವೆ.ಎಷ್ಟೆಲ್ಲ ವೇಗವಾಗಿ ತನಿಖೆ ಮಾಡ್ತಿದ್ದೇವೆ ಅರೆಸ್ಟ್ ಮಾಡ್ತಿದ್ದೇವೆ. ಗೃಹ ಸಚಿವರೂ ಮಂಗಳೂರಲ್ಲಿ ಸಭೆ ಮಾಡಿದರು.ಇಷ್ಟೆಲ್ಲ ಸಕ್ರಿಯ ಆಗಿರುವಾಗ ಬಿಜೆಪಿಯವರಿಗೆ ಶಾಂತಿ ನೆಲೆಸಬಾರದು. ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ಪ್ರಚೋದನಕಾರಿ ವಾತಾವರಣ ಹಾಗೆ ಉಳಿಬೇಕು ಎಂಬುದು ಬಿಜೆಪಿ ಉದ್ದೇಶ ಎಂದಿದ್ದಾರೆ.
ಹರೀಶ್ ಪೂಂಜ ಕೋಮು ಪ್ರಚೋದನಾಕಾರಿ ಭಾಷಣದ ಬಗ್ಗೆ ಮಾತನಾಡಿದ ಅವರು ಸೀರಿಯಲ್ ಒಫೆಂಡರ್. ಅವರ ಮೇಲೆ ಎಫ್ಐಆರ್ ಆಗಿದೆ. ಪ್ರತಿ ಸಲ ಸ್ಟೇಷನ್ ಗೆ ಹೋಗಿ ನುಗ್ತಾರೆ, ಬಾಯಿಗೆ ಬಂದಂತೆ ಮಾತಾಡ್ತಾರೆ. ತಮ್ಮನ್ನು ಯಾರೂ ಮುಟ್ಟಕ್ಕಾಗಲ್ಲ ಅಂದುಕೊಂಡಿದ್ದಾರೆ ಹರೀಶ್ ಪೂಂಜ. ಧರ್ಮದ ಹೆಸರು ದುರುಪಯೋಗ ಮಾಡಿಕೊಂಡು ಕೆಟ್ಟ ರಾಜಕಾರಣ ಮಾಡ್ತಿದ್ದಾರೆ. ಎಲ್ಲ ಪ್ರಕರಣಗಳಲ್ಲಿ ನಾವು ಯಾರನ್ನೂ ಕ್ಷಮಿಸುವುದಿಲ್ಲ. ಅಶ್ರಫ್ಕೊಲೆ ಕೇಸಲ್ಲೂ ೨೦ ಜನ ಅರೆಸ್ಟ್ ಆಗಿದೆ. ಪೊಲೀಸ್ ಇಲಾಖೆ ತನ್ನ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿದೆ. ಶಾಸಕರೂ ಜನಪ್ರತಿನಿಧಿಗಳೂ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.
ಹಿಂದೂ ಮುಖಂಡರಿಗೆ ಥ್ರೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಥ್ರೆಟ್ ಹಾಕ್ತಿದ್ದಾರೋ ಎರಡೂ ಕಡೆಯಿಂದ ನಡೆಯುತ್ತಿದೆ. ಎರಡೂ ಕಡೆಯ ಧರ್ಮದವರಿಂದ ಥ್ರೆಟ್ ಆಗುತ್ತಿದೆ. ಆದರೆ ಸುದ್ದಿ ಆಗುವಂಥದ್ದು ಇವರ ಕಡೆಯವರದ್ದು ಮಾತ್ರ. ಅವರ ಕಡೆಯವರದ್ದು ಸುದ್ದಿಯೇ ಆಗುವುದಿಲ್ಲ ಪಾಪ. ಅಶ್ರಫ್ ಹತ್ಯೆಯಾಯಿತು, ಅದರ ಬಗ್ಗೆ ದೊಡ್ಡ ಸುದ್ದಿ ಆಗಲೇ ಇಲ್ಲ. ಸುಹಾಸ್ ಶೆಟ್ಟಿ ಕೊಲೆ ಆಯ್ತು ದೊಡ್ಡ ಸುದ್ದಿ ಆಗಲೇ ಇಲ್ಲ. ಅಶ್ರಫ್ ಜಾಗದಲ್ಲಿ ಹಿಂದೂ ಇದ್ದಿದ್ದರೆ ದೊಡ್ಡ ಸುದ್ದಿ ಆಗುತ್ತಿತ್ತು. ಇವತ್ತಿನ ಪರಿಸ್ಥಿತಿ ಆ ತರಹ ಇದೆ. ರೌಡಿ ಶೀಟರ್ ಕ್ರಿಮಿನಲ್ ಎಲಿಮೆಂಟ್ಸ್ ಗಳು ಇಂಥ ಕೆಲ ಹಿಂದೂ ಸಂಘಟನೆಗಳನ್ನು ಸೇರಿಕೊಂಡಿದ್ದಾರೆ. ದಂಧೆ ಮಾಡಲು ಬೆಟ್ಟಿಂಗ್ ಮಾಫಿಯಾ ಸ್ಯಾಂಡ್ ಮಾಫಿಯಾ ಮಟ್ಕಾ ದಂಧೆ ನಡೆಸಲು ಸಂಘಟನೆ ಸೇರಿಕೊಂಡಿದ್ದಾರೆ. ಧರ್ಮದ ಹೆಸರು ದುರುಪಯೋಗ ಮಾಡಿಕೊಂಡು ಅನೈತಿಕ ಚಟುವಟಿಕೆ ಮಾಡಲು ರಕ್ಷಣೆ ಆಗುತ್ತಿದೆ. ಸುಹಾಸ್ ಶೆಟ್ಟಿ ರೌಡಿ ಶೀಟರ್, ಒಬ್ಬ ಹಿಂದೂ – ಒಬ್ಬ ಮುಸ್ಲೀಮನನ್ನು ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದಾನೆ. ಅದನ್ನು ಯಾರೂ ಮಾತಾಡುವುದಿಲ್ಲ. ಹಿಂದೂ ಕಾರ್ಯಕರ್ತ ಅಂದ್ರೆ ಏನರ್ಥ? ಹಿಂದೂ ಎನ್ನುವುದು ಸಂಘಟನೆ ಅಲ್ಲ ಹಿಂದೂ ಒಂದು ಧರ್ಮ. ಹಿಂದೂ ಪರ ಸಂಘಟನೆ ಎನ್ನಿ, ನಾನೂ ಹಿಂದೂವೆ, ಸುಹಾಸ್ ನನ್ನ ಕಾರ್ಯಕರ್ತನಾ?. ಹಿಂದೂ ಕಾರ್ಯಕರ್ತ, ಹಿಂದೂ ಕಾರ್ಯಕರ್ತ ಎನ್ನಲಾಗುತ್ತಿದೆ. ಸುಹಾಸ್ ಶೆಟ್ಟಿ ಬ್ಯಾಕ್ ಗ್ರೌಂಡ್ ಸರಿ ಇರಲಿಲ್ಲ. ಸಫ್ವಾನ್ ಮತ್ತು ಸುಹಾಸ್ ಮಧ್ಯೆ ಡಿಫರೆನ್ಸ್ ಇತ್ತು ಅದೆಲ್ಲವೂ ಕೊಲೆಗೆ ಕಾರಣವಾಗಿರಬಹುದು ಎಂದಿದ್ದಾರೆ.