ಬೆಂಗಳೂರು; ಕಾಂತರಾಜ್ ವರದಿ ಸಂಪೂರ್ಣ ಅವೈಜ್ಞಾನಿಕ, ಜನಗಣತಿ ಕಾಯ್ದೆಯ ವಿರೋಧಿ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಜಾತಿ ಜನಗಣತಿ ವರದಿ ವಿಚಾರವಾಗಿ ವಿಶೇಷ ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿದ ಅವರು ಕಾಂತರಾಜ್ ವರದಿ ಸಂಪೂರ್ಣ ಅವೈಜ್ಞಾನಿಕ, ಜನಗಣತಿ ಕಾಯ್ದೆಯ ವಿರೋಧಿ. ಯಾವುದೇ ರಾಜ್ಯ ಹೆದ್ದಾರಿ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶ ಇಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಜಾತಿಗಳನ್ನು ಒಡೆದು ಎತ್ತಿ ಕಟ್ಟಲು ಗಣತಿ ಮಾಡಿಸಿದೆ ಎಂದರು.
ಪರಿಶಿಷ್ಟ, ಲಿಂಗಾಯತ, ಒಕ್ಕಲಿಗ ಸಮುದಾಯವನ್ನು ಕಡಿಮೆ ತೋರಿಸಿದ್ದಾರೆ. ಸಣ್ಣ ಸಣ್ಣ ಸಮುದಾಯವನ್ನ ಲೆಕ್ಕಕ್ಕೇ ಇಟ್ಟಿಲ್ಲ. ಕೇವಲ ಮುಸಲ್ಮಾನ ಸಮುದಾಯವನ್ನು ಹೆಚ್ಚು ತೋರಿಸಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ನಾವು ಜಾತಿ ಜಾತಿ ಮಧ್ಯೆ ಹೊಡೆದಾಡುವ ಬದಲು ಒಟ್ಟಾದರೆ ಮಾತ್ರ ನಾವು ಉಳಿಯುತ್ತೇವೆ. ಮುಸ್ಲಿಂ ೪% ಮೀಸಲಾತಿ ಮುಂದೆ 10% ಗೂ ಹೆಚ್ಚು ಮಾಡಲು ಸರ್ಕಾರ ತಯಾರಿ ಮಾಡಿದೆ. ನಮ್ಮನ್ನು ಒಡೆದು ನಮ್ಮನ್ನು ಕಡಿಮೆ ತೋರಿಸುವ ಷಡ್ಯಂತ್ರ ಕಾಂಗ್ರೆಸ್ ಮಾಡಿದೆ. ಸರ್ಕಾರ ಆಧಾರ್ ಲಿಂಕ್ ಆಗಿರುವ ಸರ್ವೇ ಮಾಡಿಸಬೇಕಿತ್ತು. ಬೆಂಗಳೂರಿನ ಎಸಿ ರೂಂ ನಲ್ಲಿ ಕುಳಿತು ಕೆಲವರು ಜಾತಿಗಳನ್ನು ತೆಗೆದು ಬೇರೆ ಬೇರೆ ಕಡೆ ಸೇರಿಸಿದ್ದಾರೆ. ಸರ್ಕಾರ ಕಾಂತರಾಜ್ ವರದಿಯನ್ನು ತಿರಸ್ಕಾರ ಮಾಡಬೇಕು. ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಅಭಿವೃದ್ಧಿ ಕೆಲಸ ಇಲ್ಲದ ಕಾರಣ ಸರ್ಕಾರ ಜಾತಿ ಗಣತಿ ಮುಂದೆ ಇಡುತ್ತಿದೆ. ಕುರ್ಚಿ ಕಿತ್ತಾಟ ಮುಚ್ಚಿ ಹಾಕಲು ಇದೆಲ್ಲಾ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಆಡಳಿತಕ್ಕೆ ಧಿಕ್ಕಾರ ಇರಲಿ ಎಂದರು.
ಲಿಂಗಾಯತ, ಒಕ್ಕಲಿಗರಿಂದ ವ್ಯಕ್ತಿಗತ ಸರ್ವೇ ವಿಚಾರದ ಬಗ್ಗೆ ಮಾತನಾಡಿದ ಅವರು ವ್ಯಕ್ತಿಗತ ಸರ್ವೇ ಸಲ್ಲದು. ನಾನು ಅದರ ಪರವಾಗಿಲ್ಲ. ಎಲ್ಲರೂ ಹೀಗೆ ಪ್ರತ್ಯೇಕ ಪ್ರತ್ಯೇಕ ಸರ್ವೇ ಮಾಡಿದರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ. ನಾವು ಪ್ರತ್ಯೇಕ ಸರ್ವೇ ಮಾಡದೇ ಒಗ್ಗಟ್ಟಾಗಿರಬೇಕು ಎಂದ ಅವರು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ಯಾವ ಮುಖ ಹೊತ್ತು ನೀವು ಫ್ರೀಡಂ ಪಾರ್ಕ್ ನಲ್ಲಿ ಕುಳಿತಿದ್ದೀರಿ?. ಯಾವ ಜಿಲ್ಲೆಗಳಿಗೆ ನೀವು ಹೋಗಿ ಸಭೆ ಮಾಡಿದ್ದೀರಿ?. ವಿಧಾನಸೌಧದಲ್ಲಿ ಕುಳಿತುಕೊಂಡು ಈ ರೀತಿಯ ನಾಟಕ ಆಡುತ್ತಿದ್ದಾರೆ. ಜಿಲ್ಲೆಗಳಿಗೆ ಹೋಗಲು ಶಕ್ತಿ ಇಲ್ಲ, ಧೈರ್ಯ ಇಲ್ಲ. ಜಿಲ್ಲೆಗಳಿಗೆ ಹೋದರೆ ಜನ ಹೊಡೆಯುತ್ತಾರೆ ಅಂತಾ ಈ ನಾಟಕ ಆಡುತ್ತಿದ್ದಾರೆ.ಹೆಲಿಕಾಫ್ಟರ್ ಬಿಟ್ಟು ಕೆಳಗೆ ಇಳಿಯಿರಿ, ರಸ್ತೆಯಲ್ಲಿ ಓಡಾಡಿ.ಜನಕ್ಕೆ ಉತ್ತರ ಕೊಡಬೇಕಾಗುತ್ತದೆ ಅಂತಾ ನಿದ್ದೆ ಮಾಡಿದಂತೆ ನಟಿಸುತ್ತಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಅವರು ಪರಮೇಶ್ವರ್ ಎಲ್ಲಿದ್ದಾರೋ ಗೊತ್ತಿಲ್ಲ. ಅವರಿಗೆ ಗೃಹ ಇಲಾಖೆ ಅರ್ಥವಾಗಿದೆಯೋ ಗೊತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲೀಸ್ ಅಧಿಕಾರಿಗಳ ಸಭೆಯನ್ನೂ ಮಾಡುತ್ತಿಲ್ಲ. ಸಿಎಂ ಆದರೂ ಈ ಬಗ್ಗೆ ಗಮನ ಹರಿಸಬೇಕಲ್ವಾ?.ಪ್ರಶ್ನೆ ಮಾಡಿದರೆ ಶಾಸಕರಿಗೆ ಅಮಾನತು ಶಿಕ್ಷೆ. ನಿಮಗೆ 136 ಸೀಟು ಗೆದ್ದ ಮೇಲೆ ಕೂಡಾ ಭಯ ಇದ್ಯಾ?. ದಾವಣಗೆರೆಯಲ್ಲಿ ಮಹಿಳೆಗೆ ಥಳಿತ ನೋಡಿದ ಮೇಲೆ ನಮಗೆ ಭಯ ಬಂದಿದೆ. ಕರ್ನಾಟಕದಲ್ಲಿ ಜಿಹಾದಿಗಳ ಕೈ ಮೇಲಾಗುತ್ತಿದೆ. ಅವರ ಕಾನೂನನ್ನು ಜಾರಿ ಮಾಡಲು ಪ್ರಯತ್ನ ಆಗುತ್ತಿದೆ. ಷರಿಯಾ ಕಾನೂನನ್ನು ಜಿಹಾದಿಗಳು ಅನುಷ್ಠಾನಕ್ಕೆ ತರುತ್ತಿದ್ದಾರೆ.ಸರ್ಕಾರ ಜಿಹಾದಿಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂದ್ರು. ದಾವಣಗೆರೆಯಲ್ಲಿ ಮಹಿಳೆಗೆ ಹಲ್ಲೆ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ ಎಂದು ಇದೇ ವೇಳೆ ತಿಳಿಸಿದ್ರು. ಈ ಸಂಬಂಧ ನಾನು ಮಹಿಳಾ ಆಯೋಗಕ್ಕೆ ಕೂಡಾ ಪತ್ರ ಬರೆಯುತ್ತೇನೆ ಎಂದರು.