ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಏರಿಕೆ ವಿರುದ್ಧ ವಿಪಕ್ಷ ಬಿಜೆಪಿ ಅಹೋರಾತ್ರಿ ಧರಣಿ ಮುಂದುವರೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಇಂದು ರಾಜ್ಯ ಸರ್ಜಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ ಮಾಡಿದ್ದರಿಂದ ಫ್ರೀಡಂ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೀಕ್ ಅವರ್ ಕಾರಣದಿಂದಾಗಿ ವಾಹನ ಸವಾರರು ಪರದಾಡಿದ್ರು. ಸಾವಿರಾರು ಸಂಖ್ಯೆಯಲ್ಲಿ ಫ್ರೀಡಂ ಪಾರ್ಕ್ ನತ್ತ ಕಾರ್ಯಕರ್ತರು ಬಸ್, ಟಿಂಪೋ, ಕಾರುಗಳಲ್ಲಿ ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇವತ್ತು ಸಿಎಂ ಕಾವೇರಿ ನಿವಾಸ ಮುತ್ತಿಗೆಗೂ ಬಿಜೆಪಿ ಯತ್ನಿಸುವ ಸಾಧ್ಯತೆ ಇದ್ದದ್ದರಿಂದ ಫ್ರೀಡಂ ಪಾರ್ಕ್ ಕಾರ್ನರ್ ನಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ನಾಲ್ಕೂ ಭಾಗದಲ್ಲೂ ಬ್ಯಾರಿಕೇಡ್ ಹಾಕಿ ಖಾಕಿ ಬಂದೋಬಸ್ತ್ ಒದಗಿಸಲಾಗಿತ್ತುಚ
ಬಿಜೆಪಿ ಅಹೋರಾತ್ರಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಬಿಜೆಪಿ ಕಾರ್ಯಕರ್ತರು ನಾವು ಹೋರಾಟಗಾರರು. ಕುರಿಗಳ ಮಧ್ಯೆ ಸೇರಿಕೊಂಡು ಒಂದಷ್ಟು ದಿನ ನಾವೂ ಕುರಿಗಳಾಗಿದ್ದೆವು. ಬಸವರಾಜಣ್ಣ ಬೇಜಾರು ಮಾಡಿಕೊಳ್ಳಬೇಡ ಎಂದು ಶಾಸಕ ಬೈರತಿ ಬಸವರಾಜ ಅವರಿಗೆ ವಿಶ್ವನಾಥ್ ಹೇಳಿದ್ದಾರೆ. ಈ ವೇಳೆ ಏನೂ ಅರ್ಥವಾಗದೇ ವಿಶ್ವನಾಥ್ ಮುಖ ನೋಡಿದ್ದಾರೆ ಬೈರತಿ ಬಸವರಾಜ. ಬಿಡು ನಾನೂ ನೀನು ಸಂಬಂಧಿಗಳು ಈಗ ಎಂದು ವಿಶ್ವನಾಥ್ ಹೇಳಿದ್ದಾರೆ.
ರಸ್ತೆ ಗುಂಡಿ ಮುಚ್ಚದಿದ್ದರೆ ಅದೇ ಗುಂಡಿಯಲ್ಲಿ ನಾವು ಸರ್ಕಾರವನ್ನು ಮುಚ್ಚುತ್ತೇವೆ. ಇನ್ನೂ ಮೂರು ವರ್ಷದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಕಾರ್ಯಕರ್ತರು ಕನಿಷ್ಠ 10 ಕೇಸ್ ಗಳನ್ನು ಹಾಕಿಸಿಕೊಳ್ಳಬೇಕು. ಯಡಿಯೂರಪ್ಪ ಕಾಲದಲ್ಲಿ ನಮ್ಮ ಸರ್ಕಾರ ವಿಜಯನಗರ ಸಾಮ್ರಾಜ್ಯ ಇದ್ದಂತೆ ಇತ್ತು. ನಾವು 100 ಕೋಟಿ ಅನುದಾನದ್ದು ಪತ್ರ ಇದ್ದರೆ 75 ಕೋಟಿ ಕೊಡುತ್ತಿದ್ದರು. ಕಾಂಗ್ರೆಸ್ ನವರಿಗೆ ಅನುದಾನ ಕಡಿಮೆ ಮಾಡುವಂತಿಲ್ಲ ಎಂದು ಹೇಳುತ್ತಿದ್ದರು. ನಿನ್ನೆ ಯಡಿಯೂರಪ್ಪನವರು ಬಂದು ಇಲ್ಲಿ ಕುಳಿತ ಜಾಗದಿಂದ ಅಲುಗಾಡಲಿಲ್ಲ.ಅವರೇನೂ ಮತ್ತೆ ಸಿಎಂ ಆಗುತ್ತಾರಾ? ಅವರು ಮತ್ತೆ ಸಿಎಂ ಆಗಲ್ಲ. ಮುಂದೆ ನಮ್ಮ ಸರ್ಕಾರ ಬರಬೇಕು, ಮುಖ್ಯಮಂತ್ರಿ ಯಾರಾಗಬೇಕು, ಮಂತ್ರಿ ಯಾರಾಗಬೇಕು ಅಂತಾ ಅಲ್ಲ ಎಂದರು.ಇನ್ನು ಲೋಕಸಭೆಯಲ್ಲಿ ವಕ್ಪ್ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದಕ್ಕೆ ಪ್ರತಿಭಟನಾ ಸ್ಥಳದಲ್ಲಿ ಸಿಹಿ ಹಂಚಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು,
ಏಪ್ರಿಲ್ 7ರಿಂದ ಜನಾಕ್ರೋಶ ಹೋರಾಟ ಆರಂಭವಾಗಲಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು; ಏಪ್ರಿಲ್ 7ರಿಂದ ಜನಾಕ್ರೋಶ ಹೋರಾಟ ಆರಂಭವಾಗಲಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಹೋರಾತ್ರಿ ಆಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಬೆಲೆ ಏರಿಕೆ ವಿರುದ್ಧ ಹೋರಾಟ, ಮುಸ್ಲಿಮರಿಗೆ 4% ಮೀಸಲಾತಿ, ಎಲ್ಲಾ ವಿಚಾರ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗಬೇಕು. ಏಪ್ರಿಲ್ 7ರಿಂದ ಜನಾಕ್ರೋಶ ಹೋರಾಟ ಆರಂಭವಾಗಲಿದೆ. ಸರ್ಕಾರ ಎಂತಹ ಭಂಡತನ ಅಂದರೆ ನಾವು ನಿನ್ನೆಯಿಂದ ಅಹೋರಾತ್ರಿ ಹೋರಾಟ ಆರಂಭ ಮಾಡಿದ್ದೇವೆ, ಹಿಂದಿನ ದಿನ ರಾತ್ರಿ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ. ಎರಡನೇ ಬಾರಿ ಸಿಎಂ ಆದ ಮೇಲೆ ಸಿದ್ದರಾಮಯ್ಯ ಆನೆ ನಡೆದಿದ್ದೇ ದಾರಿ ಅಂತ ಆಗಿದ್ದಾರೆ ಎಂದರು.
ನಾಗಮೋಹನ್ ದಾಸ್ ಸಮಿತಿ ವರದಿ ಬಗ್ಗೆ ಮಾತನಾಡಿದ ಅವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವುದು ಕಾಂಗ್ರೆಸ್ ಗುರಿಯಾಗಿತ್ತು. ಜನರ ಒಳಿತಿಗಾಗಿ ಅಲ್ಲ. ಜನ ಇಂತ ದರಿದ್ರ ಸರ್ಕಾರ ನೋಡಿರಲಿಲ್ಲ. ಗಾಂಧಿ ಕುಟುಂಬಕ್ಕೆ ಕರ್ನಾಟಕ ಅಡವಿಡಬೇಕು ಅಂತ ಮಾಡಿಕೊಂಡಿದ್ದಾರೆ. ನಮ್ಮ ಮೇಲೆ ಅಪಪ್ರಚಾರ ಮಾಡಿದರು.ಅದರ ಪರಿಣಾಮ ನಾವು ಇಂದು ವಿಪಕ್ಷದಲ್ಲಿದ್ದೇವೆ.ನಾವು ಅಂದು ಅದನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಅದು ನಮಗೆ ನೋವಿದೆ. ಹಿಂದೆ ನಮ್ಮ ಮೇಲೆ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದಾಗಿದೆ. ಬಿಜೆಪಿ ನಿರಂತರ ಹೋರಾಟ ಮೂಲಕ ಕಾಂಗ್ರೆಸ್ಗೆ ಪಾಠ ಕಲಿಸುತ್ತೇವೆ ಎಂದರು.
ಸಿಎಂ ವಿರುದ್ಧದ ತನಿಖೆಗೆ ಕೋರ್ಟ್ ಅನುಮತಿ ವಿಚಾರದ ಬಗ್ಗೆ ಮಾತನಾಡಿ ಮುಡಾ ವಿಚಾರವಾಗಿ ಪಾದಯಾತ್ರೆ ಮಾಡುವಾಗ ನಮ್ಮ ಮೇಲೆ ಅಪಪ್ರಚಾರ ಅಂದಿದ್ದರು.ಸೈಟು ಕೊಡಬೇಕು ಅಂದರೆ ಪರಿಹಾರ ಕೊಡಬೇಕು ಅಂದರು.ನಮ್ಮ ಪಾದಯಾತ್ರೆ ಆರಂಭವಾದಾಗ ಪತ್ರ ಬರೆದು ಸೈಟ್ ವಾಪಸ್ ನೀಡಿದರು ಎಂದ್ರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರ ವಿಚಾರದ ಬಗ್ಗೆ ಮಾತನಾಡಿ ವಕ್ಫ್ ಬೋರ್ಡ್ ಹೆಸರು ಹೇಳಿ ಲಕ್ಷಾಂತರ ಆಸ್ತಿ ಕಬಳಿಕೆ ಮಾಡಿದ್ದಾರೆ.ಹಲವಾರು ವರ್ಷಗಳಿಂದ ಏಕಾಏಕಿ ವಕ್ಫ್ ಹೆಸರು ಹೇಳಿ ದೇವಸ್ಥಾನ, ರೈತರ ಜಮೀನು ಕಬಳಿಕೆ ಮಾಡಿದ್ದಾರೆ.ಇದನ್ನು ಪ್ರಶ್ನೆ ಮಾಡುವಂತಿಲ್ಲ ಅಂದರೆ ಯಾವ ದೇಶದಲ್ಲಿದ್ದೇವೆ?.ನಿನ್ನೆ ಮುಸ್ಲಿಮರೂ ಕೂಡ ಸ್ವಾಗತ ಮಾಡಿದ್ದಾರೆ ಎಂದರು,