ಬೆಂಗಳೂರು; ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಬಜೆಟ್ ನಲ್ಲಿ ಬೆಂಗಳೂರಿಗೆ 8 ಸಾವಿರ ಕೋಟಿ ನೀಡಿದ್ದರು ಅನ್ನೋದು ಶುದ್ಧ ಸುಳ್ಳು ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನ ಬಿಜೆಪಿ ಶಾಸಕರು ಅನುದಾನ ಕೇಳುವುದರಲ್ಲಿ ತಪ್ಪು ಇಲ್ಲ. ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಬಜೆಟ್ ನಲ್ಲಿ ಬೆಂಗಳೂರಿಗೆ 8 ಸಾವಿರ ಕೋಟಿ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.ಇದು ಶುದ್ಧ ಸುಳ್ಳು.ಯಡಿಯೂರಪ್ಪ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಒಟ್ಟು ಕೊಟ್ಟಿದ್ದು 1600 ಕೋಟಿ, ಬಿಜೆಪಿ ಶಾಸಕರು 5000 ಕೋಟಿ ತೆಗೆದುಕೊಂಡರು. ಇದು ಯಡಿಯೂರಪ್ಪ ಬಜೆಟ್ ನಲ್ಲಿ ಕೊಟ್ಟಿದ್ದು ಅಲ್ಲ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅವಧಿಯದ್ದು. ಬಿಜೆಪಿ ಸರ್ಕಾರ ಬಂದ ಬಳಿಕ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಇದ್ದ ಅನುದಾನವನ್ನು ಕಡಿಮೆ ಮಾಡಿದರು. ನಮ್ಮ ಸರ್ಕಾರದಲ್ಲಿ ಸರಾಸರಿ 150 ಕೋಟಿ ಅವರಿಗೆ ಅನುದಾನ ಕೊಟ್ಟಿದ್ದೇವೆ. 2018ರ ಬಜೆಟ್ ನಲ್ಲಿ ಸಿದ್ದರಾಮಯ್ಯ 6000 ಕೋಟಿ ಅನುದಾನ ಕೊಟ್ಟಿದ್ದರು.ನಂತರ ಸಮ್ಮಿಶ್ರ ಸರ್ಕಾರ ಬಂದ ಬಳಿಕ ಕುಮಾರಸ್ವಾಮಿ ೧ ಸಾವಿರ ಕೋಟಿ ಸೇರಿಸಿ ೭ ಸಾವಿರ ಕೋಟಿ ಕೊಟ್ಟಿದ್ದರು ಎಂದರು.
ಬಿಜೆಪಿ ಅವಧಿಯಲ್ಲಿ ಟೌನ್ ಹಾಲ್ ಸೇರಿಸಿ 14 ಕಟ್ಟಡಗಳನ್ನು ಅಡವಿಟ್ಟಿದ್ದರು. ಅದನ್ನು ಬಿಡಿಸಿಕೊಂಡಿದ್ದು ನಾವು. ಬಿಬಿಎಂಪಿಯಲ್ಲಿ ೬ ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದರು. ಬಿಜೆಪಿಯವರು ನಾಲ್ಕು ವರ್ಷ ಆಡಳಿತ ನಡೆಸಿದರು. ಬೆಂಗಳೂರಿಗೆ ಅವರು ಯಾವುದಾದರೂ ಒಂದು ಕೊಡುಗೆ ಕೊಟ್ಟಿದ್ದಾರಾ?. ಬಿಜೆಪಿಯವರು ಬಿಬಿಎಂಪಿ ಚುನಾವಣೆ ಮಾಡಿಲ್ಲ ಅಂತಾರಲ್ಲಾ, ಅವರ ಅವಧಿಯಲ್ಲಿ ಯಾಕೆ ಚುನಾವಣೆ ಮಾಡಿಲ್ಲ? . ನಾವು ಬಂದ ಮೇಲೆ ಗ್ರೇಟರ್ ಬೆಂಗಳೂರು ಅಂತಾ ಏನೋ ಮುಂದಕ್ಕೆ ಹಾಕಿದ್ದಾರೆ. ಅವರು ಇಟ್ಟ ಸಾಲದಿಂದಲೇ ಹಣದ ಸಮಸ್ಯೆ ಆಗಿದೆ. ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿ ಮಾಡಿದ್ದು ಇವರೇ.ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗ ಬೇಡ ಅಂದಿದ್ದು ಬಿಜೆಪಿಯವರು ಎಂದು ಕಿಡಿಕಾರಿದ್ದಾರೆ.
ನಾವು ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಶಾಸಕರಿಗೆ ನೂರು ಕೋಟಿಗಿಂತ ಕಡಿಮೆ ಅನುದಾನ ಕೊಟ್ಟೇ ಇಲ್ಲ. ಬಿಜೆಪಿಯವರು ಬಂದ ಮೇಲೆ ಕಾಂಗ್ರೆಸ್ ಶಾಸಕರ ಅನುದಾನ ಕಡಿಮೆ ಮಾಡಿದರು. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಣ ಕಡಿಮೆ ಮಾಡಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪ ಅವರ ಬಜೆಟ್ ನಲ್ಲಿ ಹಣ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ-ಕುಮಾರಸ್ವಾಮೀಸಲು ಇಟ್ಟ ಹಣವನ್ನು ಬಿಜೆಪಿಯವರು ಕೊಟ್ಟಿದ್ದು ಸಿದ್ದರಾಮಯ್ಯ ಕಾಲದಲ್ಲಿ 400 ಕಿ.ಮೀ. ರಸ್ತೆ ನಿರ್ಮಾಣ ಆಗಿದೆ. ಪಾದಚಾರಿ ಮಾರ್ಗ, ರಸ್ತೆ ಅಗಲೀಕರಣ ಮಾಡಿದ್ದು ಕಾಂಗ್ರೆಸ್ ಅವಧಿಯಲ್ಲಿ. ಟೆಂಡರ್ ಶ್ಯೂರ್ ಕಾಮಗಾರಿ ಮಾಡಿದ್ದು ನಾವು. ಸಿಗ್ನಲ್ ಫ್ರೀ ಕಾರಿಡಾರ್ ಮಾಡಿದ್ದು ನಾವು. ವೈಟ್ ಟ್ಯಾಪಿಂಗ್ ಮಾಡಿದ್ದು ನಮ್ಮ ಸರ್ಕಾರದಲ್ಲಿ ಎಂದಿದ್ದಾರೆ.
8 ಕಡೆ ಸ್ಕೈವಾಕ್ ಮಾಡಿದ್ದು ನಾವು. ಬಸ್ ಶೆಲ್ಟರ್, ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ನಾವು. ಎಲ್ಲಾ ಕೆಲಸ ಆಗಿದ್ದು ನಮ್ಮ ಕಾಲದಲ್ಲಿ. ಘನ ತ್ಯಾಜ್ಯ ನಿರ್ವಹಣೆ 6 ಕಡೆ ಮಾಡಿದ್ದೆವು. ಇಂದಿರಾ ಕ್ಯಾಂಟಿನ್ ಮಾಡಿದ್ದು ನಾವು. ಕೆರೆಗಳ ಅಭಿವೃದ್ಧಿ ಮಾಡಿದ್ದು ನಾವು. ನಾನು ಸಿಎಂಗೆ ಮನವಿ ಮಾಡುತ್ತೇನೆ, ಬಿಜೆಪಿ ಶಾಸಕರಿಗೆ ಅನುದಾನ ನೀಡಲಿ. ಬಿಜೆಪಿ ಅವರು ಅಧಿಕಾರ ಬಿಟ್ಟು ಹೋಗುವಾಗ ಬಿಬಿಎಂಪಿಯಲ್ಲಿ 6 ಸಾವಿರ ಕೋಟಿ ಬಾಕಿ ಇಟ್ಟಿದ್ದರು. ಬಿಡಿಎದಲ್ಲಿ 2-3 ಸಾವಿರ ಕೋಟಿ ಸಾಲ ಇಟ್ಟಿದ್ದರು. ಬೆಸ್ಕಾಂನಲ್ಲಿ 2-3 ಸಾವಿರ ಕೋಟಿ ಬಾಕಿ ಇಟ್ಟಿದ್ದರು. ಬಿಜೆಪಿ ಅವರು ಸಾಲ ಇಟ್ಟು ಹೋಗಿರುವುದರಿಂದ ನಮಗೂ ಸಮಸ್ಯೆ ಆಯಿತು, ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 100 ಕೋಟಿ ಪ್ರತಿ ಕ್ಷೇತ್ರಕ್ಕೆ ಸಿಎಂ ಕೊಡಲಿ ಎಂದರು.
ಟೆಂಡರ್ ಗಳನ್ನು ಆಂಧ್ರದವರಿಗೆ ಕೊಡುತ್ತಿದ್ದಾರೆ ಎಂಬ ಮುನಿರತ್ನ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಮುನಿರತ್ನ ಅವರಿಗೆ ಹೇಗೆ ಮಾಹಿತಿ ಬಂತೋ ಗೊತ್ತಿಲ್ಲ. ಇನ್ನು ಟೆಂಡರ್ ಪ್ರಕ್ರಿಯೆ ಶುರುವಾಗಿಲ್ಲ. ಟೆಂಡರ್ ನಲ್ಲಿ ಯಾರು ಬೇಕಾದರೂ ಭಾಗಿಯಾಗಬಹುದು ಎಂದರು. ಗ್ರೇಟರ್ ಬೆಂಗಳೂರು ವರದಿ ಸ್ಪೀಕರ್ ಗೆ ವರದಿ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ವಿಧೇಯಕ ಬರಲಿದೆ, ಚರ್ಚೆ ಆಗಲಿದೆ. ಬಿಜೆಪಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ, ವೋಟು ಮಾತ್ರ ಬೇಕಾಗಿದೆ. ಗ್ರೇಟರ್ ಬೆಂಗಳೂರು ಆದರೆ ವಾರ್ಡ್ ಜಾಸ್ತಿ ಆಗಬಹುದು, 2-3 ಪಾಲಿಕೆ ಆಗಬಹುದು. ಈಗಿನ ಬೆಂಗಳೂರನ್ನು ಒಬ್ಬ ಮೇಯರ್, ಕಮೀಷನರ್ ಆಡಳಿತ ಮಾಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು ಎಂದು ತಿಳಿಸಿದರು.
ಡಯಾಲಿಸಿಸ್ ರೋಗಿಗಳಿಗೆ ಉಚಿತ ಬಸ್ ಪ್ರಯಾಣ ಕೊಡುವ ವಿಚಾರಕ್ಕೆ ಸಿಎಂಗೆ ಸ್ಪೀಕರ್ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಯಾರಿಗೆ ಬೇಕಾದರೂ ಉಚಿತ ಕೊಡಲು ರೆಡಿ. ಸರ್ಕಾರ ಹಣ ಕೊಡಬೇಕು ಅಷ್ಟೇ. ಅಂತಹ ರೋಗಿಗಳಿಗೆ ಉಚಿತ ಕೊಡಬೇಕು. ಬಜೆಟ್ ನಲ್ಲಿ ಸಿಎಂ ಏನು ಮಾಡುತ್ತಾರೆ ನೋಡೋಣ. ಸಾರಿಗೆ ಇಲಾಖೆಗೆ ಒಂದು ಸಾವಿರ ಕೋಟಿ ಮೇಲೆ ಹಣ ಬಾಕಿ ಕೊಡಬೇಕು. ಎಷ್ಟು ಕೊಡಬೇಕು ಅಂತ ನಾನು ನಾಳೆ ಹೇಳುತ್ತೇನೆ. ಬಜೆಟ್ ನಲ್ಲಿ ಬಾಕಿ ಹಣ ಕೊಡುವ ವಿಶ್ವಾಸ ಇದೆ ಎಂದರು.