ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಕೊಟ್ಟಿರುವ ಬಿಗ್ ಬಾಸ್ ರೆಸಾರ್ಟ್ ಟಾಸ್ಕ್ ನೋಡೋರಿಗೆ ಸಾಕಷ್ಟು ಮನೋರಂಜನೆ ಕೊಡ್ತಿದೆ. ಈ ಬಾರಿಯ ಸೀಸನ್ ನಲ್ಲಿ ಆಟಕ್ಕಿಂತ ಬರೀ ಜಗಳಾನೇ ಜಾಸ್ತಿ ಅನ್ನೋರ ಮಧ್ಯೆ ನಿನ್ನೆಯ ಟಾಸ್ಕ್ ನೋಡುಗರಿಗೆ ಕೊಂಚ ಖುಷಿ ಕೊಟ್ಟಿದ್ದಂತೂ ನಿಜ.
ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಆಟಕ್ಕಿಂತ ಬರೀ ಜಗಳಾನೇ ಜಾಸ್ತಿ ಅನ್ನೋ ಮಾತು ಆರಂಭದಿಂದಲೂ ಕೇಳಿ ಬರುತ್ತಲೇ ಇದೆ. ತಮ್ಮ ನಿಜವಾದ ಟ್ಯಾಲೆಂಟ್ ಏನು ಅನ್ನೋದನ್ನು ಆಟದಲ್ಲಿ ತೋರಿಸೋದನ್ನು ಬಿಟ್ಟು ಬರೀ ಜಗಳ ಆಡೋದರಲ್ಲಿ ತೋರಿಸ್ತಾ ಸಮಯ ಕಳೆಯುತ್ತಿದ್ದಾರೆ ಅಂತಾ ಕೋಪ ವೀಕ್ಷಕರಲ್ಲಿ ಆರಂಭದಿಂದಲೂ ಇದೆ. ಟಾಸ್ಕ್ ಗಳು ವೈಯಕ್ತಿಕ ದ್ವೇಷ ಸಾಧನೆಯ ಸರಕುಗಳಾಗಿ ಬದಲಾಗುತ್ತಿರೋದು ನೋಡುಗರಲ್ಲಿ ಕಿರಿಕಿರಿ ಮೂಡಿಸಿದೆ.
ನಿನ್ನೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಬಿ ರೆಸಾರ್ಟ್ ಟಾಸ್ಕ್ ಅನ್ನು ನೀಡಿದ್ರು. ಭವ್ಯ ಅವರನ್ನು ಒಂದು ತಂಡದ ನಾಯಕಿಯಾಗಿ ಹಾಗೇ ಇನ್ನೊಂದು ತಂಡದ ನಾಯಕಿಯಾಗಿ ಚೈತ್ರಾ ಅವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಭವ್ಯ ಅವರ ತಂಡದಲ್ಲಿ ತ್ರಿವಿಕ್ರಂ, ಮೋಕ್ಷಿತಾ, ಧನ್ ರಾಜ್, ರಜತ್ ಇದ್ರೆ ಹನುಮಂತು, ಐಶ್ವರ್ಯಾ ಶಿಂಧೋಗಿ, ಉಗ್ರಂ ಮಂಜು, ಗೌತಮಿ ಜಾಧವ್ ಚೈತ್ರಾ ತಂಡದಲ್ಲಿದ್ರು. ಅದರಂತೆ ಭವ್ಯಾ ಅವರ ತಂಡದ ಸದಸ್ಯರು ಬಿಗ್ ಬಾಸ್ ರೆಸಾರ್ಟ್ ನ ಸಿಬ್ಬಂದಿಯಾದ್ರೆ, ಚೈತ್ರಾ ತಂಡದವರು ಬಿಗ್ ಬಾಸ್ ರೆಸಾರ್ಟ್ ಗೆ ಬಂದ ಗೆಸ್ಟ್ ಗಳು. ಇನ್ನು ಗೆಸ್ಟ್ ಗಳು ಏನೇ ಬೈದ್ರು ಏನೇ ಕೆಲಸ ಹೇಳಿದ್ರು ಸಿಬ್ಬಂದಿ ತಂಡದವರು ಕೋಪ ಮಾಡಿಕೊಳ್ಳುವಂತಿರಲಿಲ್ಲ. ಇದು ಟಾಸ್ಕ್ ನ ನಿಯಮ. ನಗು ನಗುತ್ತಲೇ ಕೆಲಸ ಮಾಡಬೇಕಿತ್ತು. ಮೋಕ್ಷಿತಾ ಮ್ಯಾನೇಜರ್ ಆಗಿದ್ರು ತುಂಬಾ ಚೆನ್ನಾಗಿ ನಿಭಾಯಿಸಿದ್ರು ಅನ್ನೋದು ವೀಕ್ಷಕರ ಅಭಿಪ್ರಾಯ.
ಇತ್ತ ಟಾಸ್ಕ್ ಶುರುವಾಗುತ್ತಿದ್ದಂತೆ ಗೆಸ್ಟ್ ಆಗಿ ಬಂದ ಚೈತ್ರಾ ಟೀಮ್ ನ ಸದಸ್ಯರು ಟಾಸ್ಕ್ ಅನ್ನು ಮರೆತು ವೈಯಕ್ತಿಕ ದ್ವೇಷ ಸಾಧನೆಗೆ ಆರಂಭಿಸಿದ್ರು ಅನ್ನೋದು ನೋಡುತ್ತಲೇ ಗೊತ್ತಾಯಿತು. ಉಗ್ರಂ ಮಂಜು ಅಂತೂ ಅತಿರೇಕವಾಗಿ ವರ್ತಿಸಿದ್ರು. ರಜತ್ ಮೇಲೆ ತಮಗಿದ್ದ ಕೋಪವನ್ನು ತೀರಿಸಿಕೊಳ್ಳಲು ಇದೇ ಸರಿಯಾದ ಅವಕಾಶ ಎಂದು ಅರಿತ ಗೌತಮಿ ಹಾಗೂ ಗೆಸ್ಟ್ ತಂಡದ ಕ್ಯಾಪ್ಟನ್ ಚೈತ್ರಾ ಕುಂದಾಪುರ ಬೇಕಾದಂತೆ ರಜತ್ ಅವರನ್ನು ಕುಣಿಸಿದ್ರು. ಇನ್ನು ಸಿಬ್ಬಂದಿ ತಂಡದವರು ಕೂಡ ತೆರೆಮರೆಯಲ್ಲಿ ಗೆಸ್ಟ್ ತಂಡದ ಸದಸ್ಯರಿಗೆ ಯಾವ ರೀತಿ ಟಕ್ಕರ್ ಕೊಡಬಹುದು ಅದೆಲ್ಲವನ್ನು ಕೂಡ ಕೊಡುತ್ತಲೇ ಇದ್ರು. ಅದರಲ್ಲೂ ಉಗ್ರಂ ಮಂಜು ಜ್ಯೂಸ್ ವಿಚಾರಕ್ಕೆ ಗ್ಲಾಸ್ ಒಡೆದು ಹಾಕಿದ್ದು ಅತಿರೇಕದ ವರ್ತನೆಗೆ ಸಾಕ್ಷಿಯಾಯಿತು. ರೆಸಾರ್ಟ್ ಕಿಚನ್ ಕ್ಲೋಸ್ ಮಾಡುವ ಸಮಯದಲ್ಲೂ ಅದು ಬೇಕು ಇದು ಬೇಕು ಅಂತಾ ಅತಿಥಿ ತಂಡದವರು ಭವ್ಯಾ ಅವರ ತಂಡವನ್ನು ಕಾಡಿಸಿದ್ರು.
ಅದರಲ್ಲೂ ಬಟ್ಟೆ ತೊಳೆಯುವ ಟಾಸ್ಕ್ ಅಂತೂ ಸಿಕ್ಕಾಪಟ್ಟೆ ಮಜವಾಗಿತ್ತು. ಅತಿಥಿಗಳಾಗಿ ಬಂದ ಚೈತ್ರಾ ಹಾಗೂ ಐಶ್ವರ್ಯಾ ಅವರ ಬಟ್ಟೆ ತೊಳೆಯುವ ಕೆಲಸವನ್ನು ತ್ರಿವಿಕ್ರಂ ಹಾಗೂ ರಜತ್ ಅವರಿಗೆ ಕೊಡಲಾಗಿತ್ತು. ಮೊದಲೇ ಚೈತ್ರಾ ಅವರ ಮೇಲೆ ಸಿಕ್ಕಾಪಟ್ಟೆ ಕೋಪ ಇರುವ ರಜತ್ ಆ ಕೋಪವನ್ನು ಬಟ್ಟೆ ಮೇಲೆ ತೀರಿಸಿಕೊಂಡ್ರು. ಚೈತ್ರಾ ಸೀರೆ ಇನ್ನೇನು ಹರಿಯುತ್ತೆ ಅನ್ನೋ ರೇಂಜಿಗೆ ಅದನ್ನು ಬಡಿದ್ರು. ಚೈತ್ರಾ ಎಷ್ಟೇ ಕಿರುಚಾಡಿದ್ರು ರಜತ್ ಆಕೆಯ ಮೇಲಿನ ಕೋಪವನ್ನು ಸಿಕ್ಕ ಸಿಕ್ಕ ಕಡೆ ಎಲ್ಲಾ ಹೇಗೆ ತೀರಿಸಿಕೊಳ್ಳಬಹುದು ಹಾಗೇ ತೀರಿಸಿಕೊಂಡ್ರು. ಅದರಲ್ಲೂ ಚೈತ್ರಾ ಹಾಗೂ ಉಗ್ರಂ ಮಂಜು ಅವರು ಕೆಲವೊಂದು ಕೆಲಸವನ್ನು ಸಿಬ್ಬಂದಿ ತಂಡದವರ ಮೇಲೆ ವೈಯಕ್ತಿಕ ದ್ವೇಷ ಸಾಧನೆಗೆ ಬಳಸಿಕೊಂಡಿದ್ದು ಕ್ಲಿಯರ್ ಆಗಿ ಗೊತ್ತಾಗುತ್ತಿತ್ತು. ನಾವು ಕೂಡ ಮುಂದೆ ಸಿಬ್ಬಂದಿಗಳಾಗುತ್ತೇವೆ. ನಮಗೂ ಈ ಸ್ಥಿತಿ ಬರುತ್ತೆ ಅನ್ನೋದನ್ನು ಮರೆತು ಚೈತ್ರಾ ತಂಡ ವರ್ತಿಸಿತು. ಆದರೆ ಗೆಸ್ಟ್ ಗಳನ್ನು ಭವ್ಯಾ ಹಾಗೂ ಮಾನ್ಯೇಜರ್ ಮೋಕ್ಷಿತಾ ನಿಭಾಯಿಸಿದ ರೀತಿಗೆ ಹ್ಯಾಟ್ಸಾಫ್ ಹೇಳಲೇ ಬೇಕು. ಅದರಲ್ಲೂ ಏನೇ ಆದ್ರೂ ಮೋಕ್ಷಿತಾ ಎಲ್ಲವನ್ನು ನಗುತ್ತಲೇ ಮಾಡಿದರು. ಎಲ್ಲದಕ್ಕೂ ಸಿಡುಕುವ ಭವ್ಯ ನಗುತ್ತಲೇ ಎಲ್ಲವನ್ನು ನಿಭಾಯಿಸಿದ್ರು. ಸಿಬ್ಬಂದಿ ಟೀಮ್ ನಾವು ಯಾವಾಗ ಗೆಸ್ಟ್ ಆಗ್ತಿವಿ ಇವರ ಮೇಲೆ ಹೇಗೆ ಸೇಡು ತೀರಿಸಿಕೊಳ್ತೀವಿ ಅಂತಾ ಸದ್ಯಕ್ಕೆ ಕಾಯುತ್ತಿದೆ. ಸಿಬ್ಬಂದಿ ಟೀಂ ನವರು ತಾವು ಗೆಸ್ಟ್ ಆದಾಗ ಯಾರು ಸೈಲೆಂಟ್ ಆಗಿರ್ತಾರೋ ಗೊತ್ತಿಲ್ಲ ಆದ್ರೆ ರಜತ್ ಮಾತ್ರ ಚೈತ್ರಾ ಅವರನ್ನು ರುಬ್ಬೋದು ಪಕ್ಕಾ… ಈಗ ಮಾಡಿದ್ದಕ್ಕಿಂತ 10 ಪಟ್ಟು ಚೈತ್ರಾ ಅವರಿಗೆ ರಜತ್ ವಾಪಾಸ್ ಕೊಟ್ಟೇ ಕೊಡ್ತಾರೆ. ನಿನ್ನೆ ರಜತ್ ಸಿಕ್ಕಾಪಟ್ಟೆ ಮನೋರಂಜನೆ ಕೊಟ್ಟಿದ್ದಂತೂ ಸತ್ಯ. ಮುಂದೆ ಅವರ ತಂಡ ಗೆಸ್ಟ್ ಆದಾಗ ಯಾವ ರೀತಿ ಮನೋರಂಜನೆ ಸಿಗುತ್ತೆ ಅಂತಾ ನೋಡುದಕ್ಕೆ ವೀಕ್ಷಕರು ಕಾಯುತ್ತಿದ್ದಾರೆ.