ಮನೆ Latest News ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ; ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲು

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ; ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲು

0

ಬೆಂಗಳೂರು; ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದಲ್ಲ ಒಂದು ಸಂಕಷ್ಟಗಳು ತಪ್ಪುವ ಲಕ್ಷಣಗಳು ಕಾಣಿಸುತ್ತಿಲ್ಲ. ಮೊನ್ನೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರೋದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡ  ಬೆನ್ನಲ್ಲೇ  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಿಸುವಂತೋ ಮೈಸೂರು ಲೋಕಾಯುಕ್ತ ಎಸ್ಪಿಗೆ ಆದೇಶ ನೀಡಿತ್ತು. ಅಲ್ಲದೇ ಎಫ್ ಐ ಆರ್ ದಾಖಲಿಸಿ, ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿತ್ತು. ಅದರಂತೆ ಇಂದು ಸಿಎಂ  ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ.

ಇನ್ನು  ಈ ಎಫ್ ಐಆರ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಎ1, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಎ2, ಪಾರ್ವತಿ ಅವರ ಸೋಹದರ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಎ3, ಇವರಿಗೆ ಜಮೀನು ಮಾರಾಟ ಮಾಡಿದ ದೇವರಾಜು ಎ4 ಹಾಗೂ ಇತರರನ್ನು ಎ5 ಎಂದು ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಬುಧವಾರವೇ ಕೋರ್ಟ್ ಆದೇಶ ನೀಡಿದ್ದರೂ ಇಂದು ಎಫ್ ಐಆರ್ ದಾಖಲು ಮಾಡಲಾಗಿದೆ. ಯಾವ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲು ಮಾಡಬೇಕೆಂಬ ಗೊಂದಲ ಇದ್ದ ಕಾರಣ ನಿನ್ನೆ ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನು ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇಂದು ಎಫ್ ಐಆರ್ ದಾಖಲಿಸಲ್ಪಟ್ಟ ಬಳಿಕ ಸಂಬಂಧಿಸಿದ ದಾಖಲೆ ಪತ್ರಗಳನ್ನು  ಲೋಕಾಯುಕ್ತ ಅಧಿಕಾರಿ ಬೆಂಗಳೂರಿನ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.ಇದೀಗ ಎಫ್ ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ಎಫ್ಐಆರ್ ಪ್ರತಿ ಪಡೆದು ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೇ ಜಾಮೀನು ಪಡೆಯಬೇಕಾಗಿದ್ದು, ಎಫ್ಐಆರ್ ರದ್ದು ಮಾಡಲು ಹೈಕೋರ್ಟ್ ಗೆ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ

ಇತ್ತ ಎಫ್ ಐಆರ್ ದಾಖಲಾದ ಬೆನ್ನಲ್ಲೇ ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ. ಆರೋಪ ಬಂದಾಗ ಮಾಜಿ ಸಿಎಂಗಳಾದ ಬಿ.ಎಸ್. ಯಡಯೂರಪ್ಪ ಮತ್ತು ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ಟಿದ್ದು, ಇನ್ನೂ ರಾಜೀನಾಮೆ ನೀಡದೇ ಇದ್ದರೆ ಅದು ಸಿದ್ಧರಾಮಯ್ಯನವರ ಭಂಡತನ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.‌ ಎಫ್ ಐಆರ್ ದಾಖಲಾದರೂ ಸಿಎಂ ಸ್ಥಾನದಲ್ಲಿ ಮುಂದುವರಿದಿರುವುದು ಕರ್ನಾಟಕದ ಇತಿಹಾಸದಲ್ಲೇ ಮೊದಲು ಎಂದೂ ಅಶೋಕ್ ಟೀಕಿಸಿದ್ದಾರೆ.ಇನ್ನು ಎಫ್ ಐಆರ್ ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ನಿನ್ನೆಯೇ ಸಿಎಂ ಸಿದ್ದರಾಮಯ್ಯ ಅವರು ಅವರ ಆಪ್ತರು, ಕಾನೂನೂ ತಜ್ಞರು ಹಾಗೂ ಹಿರಿಯ ಸಚಿವರೊಂದಿಗೆ ಕಾನೂನು ಹೋರಾಟದ ಬಗ್ಗೆ ಸಭೆ ನಡೆಸಿದ್ದಾರೆ. ಇದೀಗ ಎಫ್ ಐಆರ್ ದಾಖಲಾಗಿದ್ದು ಸಿಎಂ ರಾಜೀನಾಮೆ ಕೊಡ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ. ಆದರೆ ಸಿಎಂ ಮಾತ್ರ ನಾನು ತಪ್ಪೇ ಮಾಡಿಲ್ಲ ಇನ್ನು ರಾಜೀನಾಮೆ ಕೊಡುವ ಮಾತೇ ಬರಲ್ಲ ಎಂದಿದ್ದಾರೆ.