ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಗಲಾಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸತ್ಯಶೋಧನಾ ಸಮಿತಿಯಿಂದ ವರದಿ ಸಲ್ಲಿಕೆ ಮಾಡಲಾಗಿದೆ. ಶಾಸಕ ಡಾ. ಅಶ್ವಥ್ ನಾರಾಯಣ ನೇತೃತ್ವದ ಸತ್ಯಶೋಧನಾ ಸಮಿತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ವರದಿ ಸಲ್ಲಿಕೆ ಮಾಡಿದೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ವರದಿ ಸಲ್ಲಿಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಕೆ.ಸಿ.ನಾರಾಯಣಗೌಡ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮೀ ಅಶ್ವಿನಿ ಗೌಡ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶ್ರೀ ಭಾಸ್ಕರ್ ರಾವ್, ಸೇರಿದಂತೆ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಇನ್ನು ವರದಿ ಸ್ವೀಕರಿಸಿದ ಬಳಿಕ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಡಾ. ಅಶ್ವಥ್ ನಾರಾಯಣ ನೇತೃತ್ವದ ಸತ್ಯ ಶೋಧನಾ ವರದಿ ಕೊಟ್ಟಿದೆ.ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಂಶಗಳನ್ನು ಪಡೆದುಕೊಂಡು ಬಂದಿದ್ದಾರೆ.ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಒಂದಾದ ಮೇಲೊಂದು ಘಟನೆಗಳು ನಡೆಯುತ್ತಿವೆ.ದಾವಣಗೆರೆ, ನಾಗಮಂಗಲ ಸೇರಿ ರಾಜ್ಯದ ಘಟನೆಗಳನ್ನು ನೋಡಿದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ, ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಮರೆತು ಹೋಗಿದೆ.ಪುಢಾರಿಗಳು, ದೇಶದ್ರೋಹಿಗಳ ಪರ ಸರ್ಕಾರದ ಮೃದು ಧೋರಣೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ವಿಪಕ್ಷವಾಗಿ ನಾವು ಕೈಕಟ್ಟಿ ಕೂತರೆ ದೇವರು ನಮ್ಮನ್ನು ಕ್ಷಮಿಸಲ್ಲ.ರಾಜ್ಯದಲ್ಲಿ ಅರಾಜಕತೆ ತಲೆದೋರಿದೆ.ನಾಗಮಂಗಲ ಘಟನೆ ಎನ್ ಐಎಯಿಂದಲೇ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಶಾಸಕ ಡಾ. ಅಶ್ವಥ್ ನಾರಾಯಣ ಮಾತನಾಡಿ ನಾಗಮಂಗಲಕ್ಕೆ ಭೇಟಿ ಕೊಟ್ಟು ನಷ್ಟಕ್ಕೆ ಒಳಗಾದ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇವೆ.ಕಾಲ ಕಾಲಕ್ಕೆ ನಡೆದ ತುಷ್ಠೀಕರಣದಿಂದಾಗಿ ಈ ಘಟನೆ ನಡೆದಿದೆ.ಆಪಾದನೆಗೆ ಒಳಗಾದ ವ್ಯಕ್ತಿಗಳ ವಿರುದ್ಧ ಕೇಸ್ ಗಳನ್ನು ವಾಪಸ್ ಪಡೆಯಲಾಗಿದೆ.ಪೊಲೀಸರ ಕೈಗಳನ್ನು ಕಟ್ಟಿ ಹಾಕಲಾಗಿದೆ.ಕಳೆದ ವರ್ಷ ಆಗಿದ್ದ ಘಟನೆಯ ಹಿನ್ನೆಲೆ ಇದ್ದರೂ ಕ್ರಮ ವಹಿಸಿಲ್ಲ.ಪೆಟ್ರೋಲ್ ಬಾಂಬ್, ಮಾಸ್ಕ್, ನಿರ್ದಿಷ್ಟ ಅಂಗಡಿಗಳಿಗೆ ಬೆಂಕಿ ಎಲ್ಲವೂ ಯೋಜಿತವಾಗಿದೆ. ತಲೆಮರೆಸಿಕೊಂಡಿರುವವರಿಗೆ, ಪಿಎಫ್ ಐ ನವರಿಗೆ, ಸಮಾಜ ವಿರೋಧಿ ಕೃತ್ಯಗಳಿಗೆ ನಾಗಮಂಗಲ ನೆಲೆ ಆಗಿದೆ. ಪಿಎಫ್ ಐ ಚಟುವಟಿಕೆಗಳಲ್ಲಿ ನಾಗಮಂಗಲದಲ್ಲಿ ಜನ ಆಗಿದ್ದಾಗ್ಗೆ ಭಾಗವಹಿಸುತ್ತಿದ್ದಾರೆ. ಎಂಟು ಜನ ಪೊಲೀಸ್ ಸಿಬ್ಬಂದಿಗೆ ಗಲಾಟೆಯಲ್ಲಿ ಗಾಯವಾಗಿದೆ.ಅಮಾಯಕರ ಮೇಲೆ ಕೇಸ್ ದಾಖಲಾಗಿದೆ.ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಮಕ್ಕಳು ಗಲಾಟೆ ಶುರು ಮಾಡಿದ್ದಾರೆ, ಅವರ ಮೇಲೆ ಕ್ರಮ ಇಲ್ಲ.ಎನ್ ಐಎ ತನಿಖೆ ಆಗಬೇಕು.ಸಮಾಜ ವಿರೋಧಿ ವ್ಯಕ್ತಿಗಳು ನಾಗಮಂಗಲದಲ್ಲಿ ನೆಲೆಯಾಗಿದ್ದಾರೆ. ಸರ್ಕಾರ ಏನೂ ಪರಿಹಾರ ಕೊಡುವ ಬಗ್ಗೆ ಕ್ರಮ ವಹಿಸಿಲ್ಲ.ಹಿಂದು ಸಮಾಜದ ವಿರೋಧವಾಗಿರುವ ವ್ಯಕ್ತಿಗಳಿಗೆ ತುಷ್ಠೀಕರಣ ಆಗಿದೆ. ಬೆಂಕಿ ಹಾಕಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ಎಂದಿದ್ದಾರೆ.
ಮಂಡ್ಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ; ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗಮಂಗಲದ ಮಂಡ್ಯ ಸರ್ಕಲ್ ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಸ್ಲಿಂ ಯುವಕರು ಹಿಂದೂ ಯುವಕರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಹಲವು ವಾಹನಗಳನ್ನು ಕೂಡ ಜಖಂಗೊಳಿಸಲಾಗಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಪುಂಡರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಾಟೆಯಲ್ಲಿ ಮುಸ್ಲಿಂ ಯುವಕರು ತಲವಾರು ಪ್ರದರ್ಶಿಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಸರ್ಕಲ್ ನಲ್ಲಿ ಮುಸ್ಲಿಂ ಯುವಕರ ಗುಂಪು ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ರಸ್ತೆ ಬದಿಯಲ್ಲಿದ್ದ ಅಂಗಡಿಗಳು ಧ್ವಂಸವಾಗಿವೆ.
ಇನ್ನು ಮೈಸೂರ್ ರೋಡಿನ ಗುಜರಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೈಸೂರು ರಸ್ತೆಯಲ್ಲಿರುವ ದರ್ಗಾದ ಬಳಿ ಬರುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ದರ್ಗಾ ಬಳಿ ತಮಟೆ ಬಡಿಯಬೇಡಿ, ಡೊಳ್ಳು ಬಾರಿಸಬೇಡಿ, ಶಬ್ದ ಮಾಡಬೇಡಿ ಎಂದು ಕಿರಿಕ್ ತೆಗೆದು ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.ಇನ್ನು ಕಲ್ಲು ತೂರಾಟ ಮಾಡಿದವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಿಂದೂಗಳು ನಾಗಮಂಗಲ ಪೊಲೀಸ್ ಠಾಣೆಯ ಎದುರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಗಣೇಶ ಮೂರ್ತಿಯನ್ನು ವಿಸರ್ಜಿಸಿದೇ ಠಾಣೆಯ ಮುಂದೆಯೇ ಇರಿಸಿ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಕಲ್ಲು ತೂರಾಟ ನಡೆದಿತ್ತು ಎನ್ನಲಾಗಿದೆ.
ಮುಸ್ಲಿಂ ಯುವಕರು ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವ ವೀಡಿಯೋಗಳು ಇದೀಗ ಸೋಷಿಯಸ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬರುತ್ತಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.