ಮನೆ Latest News ಸದ್ಯಕ್ಕಂತೂ ದರ್ಶನ್ ಗೆ ಜೈಲೂಟವೇ ಫಿಕ್ಸ್ ; ಡಿ ಬಾಸ್ ರಿಟ್ ಅರ್ಜಿಯ ವಿಚಾರಣೆ ಜುಲೈ...

ಸದ್ಯಕ್ಕಂತೂ ದರ್ಶನ್ ಗೆ ಜೈಲೂಟವೇ ಫಿಕ್ಸ್ ; ಡಿ ಬಾಸ್ ರಿಟ್ ಅರ್ಜಿಯ ವಿಚಾರಣೆ ಜುಲೈ 18ಕ್ಕೆ ಮುಂದೂಡಿಕೆ

0

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಜೈಲಿನ  ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

ಈಗಾಗಲೇ ದರ್ಶನ್ ಅವರು ಜೈಲು ಸೇರಿ 19 ದಿನಗಳು ಕಳೆದಿವೆ. ಜೈಲು ಸೇರಿದಾಗಿನಿಂದ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.ಯಾರ ಜೊತೆಯೂ ಮಾತನಾಡದೇ ತಮ್ಮ ಪಾಡಿಗೆ ಸಮಯ ಕಳೆಯುತ್ತಿದ್ದಾರೆ.ಬೇಜಾರಾದರೆ ಹಿಂದಿ ಸಿನಿಮಾ, ಸ್ಫೋರ್ಟ್ಸ್ ಚಾನೆಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಜೈಲಿನ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಭೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಲಗಲು ಹಾಸಿಗೆ ಇಲ್ಲದ ಕಾರಣ ನೆಲದಲ್ಲೇ ಮಲಗುತ್ತಿದ್ದು ನಿದ್ದೆಯಿಲ್ಲದೇ ಬಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಪರವಾಗಿ ಅವರ ವಕೀಲರು ದರ್ಶನ್ ಗೆ ಮನೆಯೂಟ, ಮಲಗಲು ಹಾಸಿಗೆ ಹಾಗೂ ಸಮಯ ಕಳೆಯಲು ಓದಲು ಪುಸ್ತಕ ಒದಗಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಇಂದು ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ  ಇದೇ ವಾದ ಮಂಡಿಸಿದ ದರ್ಶನ್‌ ಪರ ವಕೀಲರು ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್‌ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು.  ಆಗ ನ್ಯಾಯಾಧೀಶರು ಈ ಪ್ರಕರಣವನ್ನು ಕೂಡ ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು ಎಂದು ಹೇಳಿ ನಟ ದರ್ಶನ್ ಅವರ  ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಮುಂದೂಡಿದರು. ಜುಲೈ 18 ಕ್ಕೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು ಅಂದು ಏನಾಗುತ್ತೆ ಕಾದು ನೋಡ್ಬೇಕು. ಇನ್ನೊಂದು ಕಡೆ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಜುಲೈ 18ಕ್ಕೆ ಮುಕ್ತಾಯವಾಗಲಿದ್ದು ಅಂದೇ ಅವರನ್ನು ನ್ಯಾಯಾಧೀಶರ ಮುಂದೆ ಜೈಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.

ನಿನ್ನೆ ಮನೆಯೂಟ, ಹಾಸಿಗೆ, ಪುಸ್ತಕಕ್ಕಾಗಿ ರಿಟ್ ಅರ್ಜಿ ಸಲ್ಲಿಸಿದ ದರ್ಶನ್

ಐಷಾರಾಮಿ ಜೀವನ ಮಾಡುತ್ತಿದ್ದ ನಟ ದರ್ಶನ್ ಇದೀಗ ದಿನಗಳನ್ನು ಕಳೆಯೋದಕ್ಕೆ ಪೇಚಾಡುತ್ತಿದ್ದಾರೆ. ಜೈಲಿನ ಉಪ್ಪು, ಹುಳಿ, ಖಾರವಿಲ್ಲದ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಅದರಿಂದ ಅವರಿಗೆ ಭೇದಿ ಉಂಟಾಗಿದೆ ಎನ್ನಲಾಗಿದ್ದು, ನನಗೆ ಜೈಲಿನ ಊಟ ಸೇರ್ತಿಲ್ಲ. ಮನೆ ಊಟ ಮಾಡೋದಕ್ಕೆ ಅವಕಾಶ ಕೊಡಿ ಅಂತಾ ದರ್ಶನ್  ತಮ್ಮ ವಕೀಲರ ಮೂಲಕ  ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಜೈಲೂಟ ಸೇವಿಸಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸರಿಯಾಗಿ ಊಟ, ನಿದ್ದೆ ಏನೂ ಮಾಡೋದಕ್ಕೂ ಆಗುತ್ತಿಲ್ಲ. ಹಾಗಾಗಿ ಅವರಿಗೆ ಮನೆ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ನೀಡುವಂತೆ ದರ್ಶನ್‌ ವಕೀಲರು  ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.ಇನ್ನು ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ ಅವರಿಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಇದರಿಂದ ಭೇದಿ ಉಂಟಾಗುತ್ತಿದೆ. ಅಲ್ಲದೇ ಫುಡ್‌ ಪಾಯ್ಸನ್‌ ಕೂಡ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆಂದು, ಹೈಕೋರ್ಟ್ ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ದರ್ಶನ್‌ ಪರವಾದ ವಕೀಲರು ಉಲ್ಲೇಖ ಮಾಡಿದ್ದಾರೆ.

ದರ್ಶನ್ ಅವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಮನೆ ಊಟ, ಮಲಗಲು ಹಾಸಿಗೆ, ಸಮಯ ಕಳೆಯಲು  ಓದಲು ಪುಸ್ತಕವನ್ನು ನೀಡಬೇಕು. ಈ ಸಂಬಂಧ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ರಿಟ್  ಅರ್ಜಿಯಲ್ಲಿ ದರ್ಶನ್ ಪರವಾದ ವಕೀಲರು ಮನವಿ ಮಾಡಿದ್ದಾರೆ.

ಇದರ ಮಧ್ಯೆ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟನ್ನು ಸಲ್ಲಿಸಿಲ್ಲ. ಹಾಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದನ್ನೇ ಕಾದು ಕೂತಿದ್ದಾರೆ ಆರೋಪಿಗಳ ಪರವಾದ ವಕೀಲರು. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಅದರಲ್ಲಿರುವ ಅಂಶಗಳ ಆಧಾರದ ಮೇಲೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲು ಆರೋಪಿಗಳ ಪರವಾದ ವಕೀಲರು ಪ್ಲ್ಯಾನ್ ಮಾಡಿದ್ದು, ಅದರಂತೆ ಸದ್ಯಕ್ಕೆ ವಕೀಲರು ಕಾದ ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಚಾರ್ಜ್ ಶೀಟ್ ಪೊಲೀಸರು ಸಲ್ಲಿಸುತ್ತಿದ್ದಂತೆ ಆರೋಪಿಗಳ ಪರವಾದ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.