ಬೆಂಗಳೂರು: ತುಘಲಕ್ ಸರ್ಕಾರ ರಾಜ್ಯದಲ್ಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಹುತೇಕ ಅಭಿವೃದ್ಧಿ ಸ್ಥಗಿತಗೊಂಡಿದೆ. ಜನರ ಸಂಕಷ್ಟ ಯಾರೂ ಕೇಳುವವರಿಲ್ಲ. ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಂದು ಕಿ.ಮೀ. ಕೂಡಾ ರಸ್ತೆ ಮಾಡಿಲ್ಲ. ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ತುಘಲಕ್ ಸರ್ಕಾರ ರಾಜ್ಯದಲ್ಲಿದೆ.ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸುವ ಕೆಲಸ ಮಾಡುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.
ಇನ್ನು ಅಳಂದ ಶಾಸಕ ಬಿ.ಆರ್. ಪಾಟೀಲ್ ಅಡಿಯೋ ವಿಚಾರದ ಬಗ್ಗೆ ಮಾತನಾಡಿದ ಅವರು ಬಿ.ಆರ್. ಪಾಟೀಲ್ ಹೇಳಿರುವುದು ಸತ್ಯ. ಹಣ ನೀಡದೇ ಯಾವ ಕೆಲಸವೂ ಆಗಿಲ್ಲ. ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಸರ್ಕಾರ ತಪ್ಪನ್ನು ಸರಿಪಡಿಸಿಕೊಂಡು ಹೋಗಬೇಕು ಎಂದರು. ಜೆಡಿಎಸ್ ನಿಂದ ರಾಜ್ಯ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು ಜೆಡಿಎಸ್ ಪ್ರವಾಸವನ್ನು ಸ್ವಾಗತ ಮಾಡುತ್ತೇನೆ. ಜೆಡಿಎಸ್ ಬೇರೆ ಅಲ್ಲ, ಬಿಜೆಪಿ ಬೇರೆ ಅಲ್ಲ. ದೇವೇಗೌಡರು ಅನೇಕ ಬಾರಿ ಇದನ್ನು ಹೇಳಿದ್ದಾರೆ. ಮೋದಿ ನಾಯಕತ್ವ ಬಗ್ಗೆ ಅವರು ವಿಶ್ವಾಸ ಇಟ್ಟಿದ್ದಾರೆ. ಈ ರಾಜ್ಯದಲ್ಲಿ ಇರುವ ಸರ್ಕಾರವನ್ನು ತೊಲಗಿಸಬೇಕು ಎಂದು ತಿಳಿಸಿದರು.
ಅಸಮಾಧಾನಿತರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಜೋಷಿ ಪ್ರಯತ್ನ ಸ್ವಾಗತಾರ್ಹ.ಅಸಮಾಧಾನಿತರ ಜೊತೆ ನಾನು ಮಾತನಾಡಲು ಸಿದ್ಧ. ಪ್ರತಿನಿತ್ಯ ಬಿಜೆಪಿ ಕಚೇರಿಗೆ ಬರುತ್ತೇನೆ. ವಾರಕ್ಕೊಮ್ಮೆ ಜಿಲ್ಲೆಗಳಿಗೆ ಹೋಗುತ್ತೇನೆ. ಇದರಿಂದ ಅಭಿವೃದ್ಧಿ ಕೆಲಸಕ್ಕೂ ಅನುಕೂಲ ಆಗಲಿದೆ ಎಂದರು. ಕೇಂದ್ರದಿಂದಲೇ ಟಿಕೆಟ್ ತರುತ್ತೇನೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ಇಲ್ಲ. ಅವರ ಹೇಳಿಕೆ ತಪ್ಪಿಲ್ಲ. ಕೇಂದ್ರ ಸಚಿವರಾಗಿ ಅವರು ಮಾತಾಡಿದ್ದಾರೆ.ಎಲ್ಲರು ಒಟ್ಟಾಗಿ ಹೋಗುತ್ತೇವೆ ಎಂಬ ಅರ್ಥದಲ್ಲಿ ಮಾತಾಡಿದ್ದಾರೆ ಅಷ್ಟೇ ಎಂದಿದ್ದಾರೆ.
ಇನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಬೆಳಗ್ಗೆ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ದ್ವಿಗುಣಗೊಳಿಸುವ ಬಗ್ಗೆ ಸಲಹೆ, ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಪ್ರಧಾನಿ ಮೋದಿ ದೇಶದ ಹಿಂದೂ, ಅಲ್ಪಸಂಖ್ಯಾತರು ಎಲ್ಲರಿಗೂ ನ್ಯಾಯ ಕೊಡುತ್ತಿದ್ದಾರೆ.ಕಿಸಾನ್ ಸಮ್ಮಾನ್ ಕೇವಲ ಹಿಂದೂಗಳಿಗೆ ಮಾತ್ರ ಹಣ ಜಮಾ ಆಗುತ್ತಿಲ್ಲ. ಸಿದ್ದರಾಮಯ್ಯ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ.ಖಂಡಿತಾ ಅವರಿಗೆ ಭಗವಂತ ಒಳ್ಳೆಯದು ಮಾಡಲು ಸಾಧ್ಯವಿಲ್ಲ.ಸಿಎಂ ಎನ್ನುವುದನ್ನು ಮರೆತು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿಗೆ ಜೆಡಿಎಸ್ ಶಾಸಕರ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿವೇಶನದ ವೇಳೆ ಜೆಡಿಎಸ್ ಶಾಸಕರ ಜೊತೆ ಚರ್ಚೆ ಮಾಡುತ್ತೇವೆ. ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆ ಕೂಡಾ ಚರ್ಚೆ ಮಾಡುತ್ತೇವೆ. ಸಮನ್ವಯ ಸಮಿತಿ ಮಾಡಲೇಬೇಕಾಗುತ್ತದೆ. ಅದಕ್ಕೆ ನಮ್ಮದು ಏನೂ ಅಭ್ಯಂತರ ಇಲ್ಲ ಎಂದಿದ್ದಾರೆ. ಅಳಂದ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅವರ ಹೈಕಮಾಂಡ್ ಗೆ ಕರ್ನಾಟಕವನ್ನು ಎಟಿಎಂ ಆಗಿ ಪರಿವರ್ತನೆ ಮಾಡಬೇಕಿದೆ. ಇದು ೧೦೦% ಭ್ರಷ್ಟಾಚಾರದ ಸರ್ಕಾರ ಅಂತಾ ಆಡಳಿತ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ.ಸಿಎಂ ಆದಿಯಾಗಿ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ.ಬಿ.ಆರ್. ಪಾಟೀಲ್ ಬಿಡುಗಡೆ ಮಾಡಿರುವ ಆಡಿಯೋ ಇದಕ್ಕೆ ಚಿಕ್ಕ ನಿದರ್ಶನ ಎಂದರು.
ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ನವರು ಹೆಣ್ಣುಮಗು ಎತ್ತಿಕೊಂಡು ಹೋಗಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಈ ರೀತಿಯ ಘಟನೆ ಆದಾಗ ದೊಡ್ಡ ದೊಡ್ಡ ಭಾಷಣ ಬಿಗಿಯುತ್ತಾರೆ. ಸಿಎಂ ಕ್ಷೇತ್ರದಲ್ಲಿ ಹೀಗಾದರೆ ಇನ್ನು ರಾಜ್ಯದಲ್ಲಿ ಏನಾಗಬೇಕು. ಹಿಂದೆ ಕಾನೂನು ತರುತ್ತೇವೆ ಅಂತಾ ಹೇಳಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಈಗ ಕಾನೂನು ತರುತ್ತೇವೆ ಅಂತಾ ಕಥೆ ಹೊಡೆಯುತ್ತಿದ್ದಾರೆ.ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತ ಕಾರಣ ಜನ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಅಸಮಾಧಾನಿತರ ಜೊತೆ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಅತೃಪ್ತಿ ಇದೆ ಅನ್ನುವುದು ನಿಜ, ಸತ್ಯ.ಅದನ್ನು ಹಲವಾರು ಬಾರಿ ಹೇಳಿದ್ದಾರೆ. ಇದು ಸ್ಥಳೀಯ ಸಮಸ್ಯೆ.ನಾನು, ಪ್ರಹ್ಲಾದ್ ಜೋಷಿ, ಎಲ್ಲಾ ಹಿರಿಯರು ಚರ್ಚೆ ಮಾಡಿ ಇದನ್ನು ಪರಿಹರಿಸಬೇಕು ಅಂತಾ ಚರ್ಚೆ ಮಾಡಿದ್ದೇವೆ. ಹಾಗಾಗಿ ನಿನ್ನೆ ಜೋಷಿ ನೇತೃತ್ವದಲ್ಲಿ ಸಭೆ ಮಾಡಿ ಚರ್ಚೆ ಮಾಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವುದನ್ನೂ ಸರಿ ಮಾಡುತ್ತೇವೆ. ಯಾವಾಗ ಬೇಕಾದರೂ ಜಿ.ಪಂ., ತಾ.ಪಂ. ಚುನಾವಣೆ ಆಗಬಹುದು.ನಾವು ಕೂಡಾ ಒಳಜಗಳ ಪರಿಹರಿಸಿಕೊಂಡು ಎಲ್ಲರೂ ಒಟ್ಟಾಗಿ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕು ಅಂತಾ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.