ಬೆಂಗಳೂರು; ಪಾಳೇಗಾರಿಕೆಯನ್ನೂ ಹಂಗಿಸುವಂತೆ ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ದ.ಕ. ಜಿಲ್ಲೆಯಲ್ಲಿ ಗಡಿಪಾರು ನೋಟೀಸ್ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ ಮಹಾರಾಜರು ಹಿಂದೇ ರಾಜ್ಯ, ದೇಶವನ್ನಾಳುವ ವೇಳೆ ಪಾಳೇಗಾರಿಕೆ ಇತ್ತು. ಆ ಪಾಳೇಗಾರಿಕೆಯನ್ನೂ ಹಂಗಿಸುವಂತೆ ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸುತ್ತಿದೆ.ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವಾಗ ಸರ್ಕಾರದ ಹುಳುಕು ಮುಚ್ಚಿ ಹಾಕಲು ಈ ರೀತಿಯ ಘಟನೆ ನಡೆಯುತ್ತಿದೆ.ಹಿಂದೂ ಕಾರ್ಯಕರ್ತರಿಗೆ ಸರ್ಕಾರ ಅಪಮಾನ ಮಾಡುತ್ತಿದೆ. ಸುಹಾಸ್ ಶೆಟ್ಟಿ ನಿವಾಸಕ್ಕೆ ಹೋಗಲು ಗೃಹ ಸಚಿವರು ಮುಂದಾದಾಗ ಕೆಲವು ದುಷ್ಟ ಶಕ್ತಿಗಳು ಅವರನ್ನು ತಡೆದರು.ಮಹಿಳೆಯರು ಕೂಡಾ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿದ್ದರು. ಅವರನ್ನು ಬಂಧಿಸುವ ಕೆಲಸ ಇನ್ನೂ ಅಗಿಲ್ಲ. ಮಧ್ಯ ರಾತ್ರಿ ಹೋಗಿ ಪೊಲೀಸರು ಹಿಂದೂ ಕಾರ್ಯಕರ್ತರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಪೊಲೀಸರ ಮೂಲಕ ಕರಾವಳಿಯಲ್ಲಿ ಸರ್ಕಾರ ಇದನ್ನು ಮುಂದುವರಿಸಿದರೆ ಬಿಜೆಪಿ ಕೈ ಕಟ್ಟಿ ಕೂರಲ್ಲ. ನಿನ್ನೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಕೂಡಾ ಮಾತಾಡಿದ್ದೇನೆ. ಮುಂದೆ ಆಗಬಹುದಾದ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದಿದ್ದಾರೆ.
ಹೇಮಾವತಿ ನೀರಿನ ಹೋರಾಟ ವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದ ಅವರು ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ.ಆಡಳಿತ ವ್ಯವಸ್ಥೆ ಹದಗೆಡಲು ಸರ್ಕಾರದ ಷಡ್ಯಂತ್ರವೇ ಕಾರಣ. ರಾಜ್ಯ ಸರ್ಕಾರದ ದುಂಡಾವರ್ತನೆಯ ಸೊಕ್ಕನ್ನು ಮುರಿಯಲು ಬಿಜೆಪಿ ಸಿದ್ಧ ಇದೆ. ಅದನ್ನು ಮುಂದಿನ ದಿನಗಳಲ್ಲಿ ನಾವು ತೋರಿಸುತ್ತೇವೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡ ಮನುಷ್ಯರು ನಾವಲ್ಲ ಎಂದಿದ್ದಾರೆ.
ಇಂದು ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಅವರು ಬಹಳ ವರ್ಷಗಳ ನಂತರ ನಮ್ಮ ಆರ್ ಸಿಬಿ ತಂಡ ಫೈನಲ್ಗೆ ಬಂದಿದೆ. ರಾಯಲ್ ಚಾಲೆಂಜರ್ಸ್ ಗೆ ಶುಭ ಕೋರುತ್ತೇನೆ.ದೇಶದ ಅತಿ ಹೆಚ್ಚು ಜನ ಆರ್ ಸಿಬಿ ಪರ ಇದ್ದಾರೆ. ನಿಶ್ಚಿತವಾಗಿ ನಮ್ಮ ಆಸೆ ಈಡೇರಿಸುತ್ತಾರೆ. ಫೈನಲ್ ನಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದರು.
ಕಮಲಹಾಸನ್ ವಿರುದ್ಧ ಸರ್ಕಾರದ ಹಲವು ಸಚಿವರು ಮೌನ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರದ ನಿಲುವು ಹೇಗಿದೆ ಅಂದರೆ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಅನ್ನುವಂತಿದೆ. ಕಮಲ ಹಾಸನ್ ಒಬ್ಬ ಖ್ಯಾತ ನಟ. ತಮಿಳು ಭಾಷೆ ಬಗ್ಗೆ ಅವರ ಪ್ರೀತಿ ಅರ್ಥ ಆಗುತ್ತದೆ. ಆದರೆ ಅದರ ನೆಪದಲ್ಲಿ ಕನ್ನಡಕ್ಕೆ ಅಪಮಾನ ಮಾಡುವುದು ಖಂಡಿತ ಸರಿಯಲ್ಲ.ಈಗಲೂ ಕಾಲ ಮಿಂಚಿಲ್ಲ, ಅವಿವೇಕತನ ಬಿಟ್ಟು ಈಗಲಾದರೂ ಕಮಲಹಾಸನ್ ಕನ್ನಡಿಗರ ಕ್ಷಮೆಯಾಚಿಸಲಿ ಎಂದಿದ್ದಾರೆ.