ಬೆಂಗಳೂರು; ದರ್ಶನ್ ಅಭಿಮಾನಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇತ್ತ ಜೈಲು ಸೇರುತ್ತಿದ್ದಂತೆ ದರ್ಶನ್ , ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದರೆ ಇತ್ತ ದರ್ಶನ್ ಸೇರಿದಂತೆ ಐವರು ಆರೋಪಿಗಳನ್ನು ತುಮಕೂರು ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಒಪ್ಪಿಗೆಯನ್ನು ನೀಡಿದೆ ಎನ್ನಲಾಗಿದೆ.
ದರ್ಶನ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳಾದ ರವಿಶಂಕರ್, ನಂದೀಶ್, ಕೇಶವಮೂರ್ತಿ, ನಿಖಿಲ್ ನಾಯಕ್ ನನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಜೈಲು ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಜೈಲಾಧಿಕಾರಿಗಳ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಐವರನ್ನು ಶೀಘ್ರದಲ್ಲೇ ತುಮಕೂರು ಜೈಲಿಗೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಜೂನ್ 22 ರಂದು ದರ್ಶನ್ ಸೇರಿದಂತೆ ಒಟ್ಟು 4 ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆ ಅವರನ್ನು 24ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಜುಲೈ 4 ರವರೆಗೆ ಅಂದ್ರೆ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು. ಬಳಿಕ ಬಿಗ ಭದ್ರತೆಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ ಕಳೆದ ಮೂರು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಗೆ ವಿಚಾರಣಾಧೀರ ಕೈದಿ ಸಂಖ್ಯೆ 6106 ನ್ನು ನೀಡಲಾಗಿದೆ. ಧನರಾಜ್ಗೆ 6107, ವಿನಯ್ಗೆ 6108, ಪ್ರದೂಶ್ಗೆ 6109 ನ್ನು ನೀಡಲಾಗಿದೆ. ಇನ್ನು ದರ್ಶನ್ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಸಾಮಾನ್ಯವಾಗಿ ಬೇರೆ ಕೈದಿಗಳಿಂದ ಅಪಾಯ ಎದುರಾಗುವ ಕೈದಿಗಳಿದ್ದಾಗೆ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಅಂತಹ 3 ಬ್ಯಾರಕ್ ಗಳಿದ್ದು ಮೂರನೇ ಬ್ಯಾರಕ್ ನಲ್ಲಿ ದರ್ಶನ್ ರನ್ನು ಇರಿಸಲಾಗಿದೆ. ದರ್ಶನ್ ಯಾರ ಜೊತೆಯೂ ಮಾತನಾಡದೇ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೀಗ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎನ್ನಲಾಗಿದೆ.