ಮನೆ Latest News ಎಂಟು ದಿನಗಳ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಅಂತ್ಯ

ಎಂಟು ದಿನಗಳ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಅಂತ್ಯ

0

ಮೈಸೂರು; ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ-ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಅಂತ್ಯವಾಗಿದೆ. ಇಂದು ಪಾದಯಾತ್ರೆ ಕೊನೆಯ ದಿನವಾದ ಹಿನ್ನೆಲೆ ಮೈಸೂರಿನ ಮಹಾರಾಜ ಮೈದಾನದಲ್ಲಿ ಸಾರ್ವಜನಿಕ ಪ್ರತಿಭಟನಾ ಸಮಾವೇಶ ನಡೆಯಿತು.

ಇನ್ನು ಸಮಾವೇಶಕ್ಕೂ ಮುನ್ನ ಬಿಜೆಪಿ ನಾಯಕರು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ , ಸಂಸದ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಮುಖಂಡರು  ಭಾಗಿಯಾಗಿದ್ದರು.

ಮೈಸೂರಿನ ಮಹಾರಾಜ ಮೈದಾನದಲ್ಲಿ ಸಮಾವೇಶದ ವೇಳೆ ಜೆಡಿಎಸ್ ಪಕ್ಷದ ಶಾಲಿಗಾಗಿ ಕಾರ್ಯಕರ್ತರು ಕಿತ್ತಾಡಿಕೊಂಡ ಘಟನೆ ನಡೆದಿದೆ. ಅಲ್ಲದೇ ಮೈಸೂರು ಚಲೋ ಸಾರ್ವಜನಿಕ ಸಮಾವೇಶ ಮುಗಿಯುವ ಮೊದಲೇ ಪೆಂಡಾಲ್ ಖಾಲಿಯಾಗಿತ್ತು.ಕೇಂದ್ರ ಸಚಿವ ಕುಮಾರಸ್ವಾಮಿ ಭಾಷಣದ ವೇಳೆ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಇನ್ನು ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಣಿಸಿಕೊಂಡಿಲ್ಲ.ಮಂಡ್ಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರೊಂದಿಗಿನ ಸಂಘರ್ಷದ ಬಳಿಕ ಪಾದಯಾತ್ರೆಯಿಂದ ಪ್ರೀತಂ ಗೌಡ ದೂರ ಉಳಿದಿದ್ದರು. ಸಮಾವೇಶದಲ್ಲೂ ಕೂಡ ಭಾಗಿಯಾಗಿರಲಿಲ್ಲ.

ಎಂಟು ದಿನಗಳ ಕಾಲ ಒಟ್ಟು 135 ಕಿ.ಮೀ. ಪಾದಯಾತ್ರೆ ನಡೆಯಿತು. ಈ ಪಾದಯಾತ್ರೆಯಿಂದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಂಸದೆ ಸುಮಲತಾ ಅಂಬರೀಷ್ ಅಂತರ ಕಾಯ್ದುಕೊಂಡಿದ್ದಾರೆ ಒಂದು ದಿನ ಮಾತ್ರ ಪಾದಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾಣಿಸಿಕೊಂಡಿದ್ದರು.

ಇನ್ನು ಇಂದು ಪಾದಯಾತ್ರೆ ಆರಂಭಕ್ಕೂ ಮುನ್ನ ತಮಟೆ ಬಾರಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಡ್ಯಾನ್ಸ್ ಮಾಡಿದ್ರು. ಮೈಸೂರಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದೆಯಾತ್ರೆ ಆರಂಭಕ್ಕೂ ಮುನ್ನ ಪೂಜೆ ಸಲ್ಲಿಸಿದ್ರು. ಮಠದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿ ದೀರ್ಘ ನಮಸ್ಕಾರ ಹಾಕಿದ್ದಾರೆ ವಿಜಯೇಂದ್ರ.

ಅಲ್ಲದೇ  ಪಾದಯಾತ್ರೆಗೂ ಮುನ್ನ ಶಾಸಕರಾದ ಡಾ. ಅಶ್ವಥ್ ನಾರಾಯಣ, ಎಸ್.ಆರ್. ವಿಶ್ವನಾಥ್, ಭಾಗೀರಥಿ ಮುರುಳ್ಯ, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ ಸಂಸದ ಮುನಿಸ್ವಾಮಿ ಡ್ಯಾನ್ಸ್ ಮಾಡಿದ್ದಾರೆ.ಶಾಸಕ ಅಶ್ವಥ್ ನಾರಾಯಣ ಅವರನ್ನು ಎಳೆದುಕೊಂಡು ಶಾಸಕ ವಿಶ್ವನಾಥ್ ಡ್ಯಾನ್ಸ್ ಮಾಡಿಸಿದದ್ದಾರೆ.

 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಸಂಸದ ಯದುವೀರ ಒಡೆಯರ್ ಅವರಿಗೆ ಕ್ರೇನ್ ಮೂಲಕ ಸೇಬಿನ ಹಾರ ಹಾಕಲಾಯಿತು. ರಾಘವೇಂದ್ರ ಸ್ವಾಮಿ ಮಠದ ಮುಂದೆ ಕೈಯಲ್ಲಿ ಕರ್ಪೂರ ಹೊತ್ತಿಸಿ ನಿಖಿಲ್ ಕುಮಾರಸ್ವಾಮಿಗೆ ಆರತಿ ಬೆಳಗಿದ್ದಾರೆ ಅಭಿಮಾನಿ. ಇನ್ನು  ಚಾಮರಾಜ ಜೋಡಿ ರಸ್ತೆಯಲ್ಲಿ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿಗೆ ಕ್ರೇನ್ ಮೂಲಕ ಬಾದಾಮಿ ಹಾರ ಹಾಕಿದ್ದಾರೆ.ಕ್ರೇನ್ ಮೂಲಕ ಕೆಳಗಿಳಿಸಿ ಹಾಕುವ ಮುನ್ನವೇ ಹಾರ ಎಳೆದು ಕಿತ್ತು ಹಾಕಿದ್ದಾರೆ ಕಾರ್ಯಕರ್ತರು.ಹಾಕುವ ಮೊದಲೇ ತುಂಡಾಗಿ ಬಿದ್ದಿದೆ ಬಾದಾಮಿ ಹಾರ. ಮೈಸೂರು ಚಲೋ ಪಾದಯಾತ್ರೆ ಅಂತಿಮ ದಿನ ಹಿನ್ನೆಲೆ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಣಿಸಿಕೊಂಡರು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ  ಮುಖಂಡರುಗಳಿಗೆ ಮೂರು ಜೆಸಿಬಿಗಳ ಮೂಲಕ ಪಾದಯಾತ್ರೆಗೆ ಪುಷ್ಪವೃಷ್ಟಿ, ಎರಡು ಕ್ರೇನ್ ಗಳ ಮೂಲಕ ಸೇಬು ಮತ್ತು ಮೂಸಂಬಿ ಹಾರ ಹಾಕಿದ್ದಾರೆ.