ಬೆಂಗಳೂರು: ಖರ್ಗೆಯವರು ಹೇಳಿದ ಮೇಲೆ ಅದಕ್ಕೆ ನಾವು ಗೌರವ ಕೊಡ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಗೊಂದಲ ಇಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಖರ್ಗೆಯವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಖರ್ಗೆಯವರು ಹೇಳಿದ ಮೇಲೆ ಅದಕ್ಕೆ ನಾವು ಗೌರವ ಕೊಡ್ತೇವೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ, ಯಾವ ಸೂಚನೆ ಕೊಡ್ತಾರೋ ಗೊತ್ತಿಲ್ಲ. ಅವರು ಇಲ್ಲೇ ಗೊಂದಲ ಬಗೆಹರಿಸಿಕೊಳ್ಳಬೇಕು ಅಂತ ಹೇಳಿದ್ದಾರೆ. ಹಾಗೆ ಹೇಳಿದ ಮೇಲೆ ಇಲ್ಲೇ ಗೊಂದಲ ಬಗೆಹರಿಸಿಕೊಳ್ಳಬೇಕು.ಖರ್ಗೆಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನನ್ನ ದೃಷ್ಟಿಯಲ್ಲಿ ಗೊಂದಲ ಇರಬಾರದು.ಗೊಂದಲ ಇದ್ರೆ ಅದನ್ನು ಬಗೆಹರಿಸಿಕೊಂಡು ಆಡಳಿತ ಕೊಡಬೇಕು. ಗೊಂದಲ ಆಡಳಿತದ ಮೇಲೂ ಪರಿಣಾಮ ಬೀರಬಹುದು. ಅಧಿಕಾರಿಗಳಿಗೂ ಒಂದು ಸಂದೇಶ ಹೋಗಬೇಕು. ಗೊಂದಲದಿಂದ ಆಡಳಿತ ಯಂತ್ರಕ್ಕೆ ಹೊಡೆತ ಎಂದು ಪರೋಕ್ಷವಾಗಿ ಪರಮೇಶ್ವರ್ ಹೇಳಿದ್ದಾರೆ.
ದಲಿತ ಸಿಎಂ ಪರ ಸ್ವಾಮೀಜಿಗಳು, ಸಂಘಟನೆಗಳು ಧ್ವನಿ ಎತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಅದೆಲ್ಲ ಅವರ ಭಾವನೆ, ಅವರ ಅನಿಸಿಕೆ. ಅದು ತಪ್ಪು ಅಂತ ನಾನು ಹೇಗೆ ಹೇಳಕ್ಕಾಗುತ್ತೆ. ಅವರು ಅವರ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣ ಮಸೂದೆಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರನ್ನೋ ಟಾರ್ಗೆಟ್ ಮಾಡಿ ಈ ಮಸೂದೆ ತಂದಿಲ್ಲ.ಯಾರು ದ್ವೇಷ ಭಾಷಣ ಮಾಡ್ತಾರೋ ಅವರಿಗೆ ಇದು ಅನ್ವಯ ಆಗುತ್ತೆ.ಯಾರನ್ನೋ ಉದ್ದೇಶ ಇಟ್ಕೊಂಡು ಇದನ್ನು ತಂದಿಲ್ಲ.ಕಾನೂನಿಗೆ ಗೌರವ ಕೊಡಬೇಕು. ದ್ವೆಷ ಭಾಷಣಗಳನ್ನು ಹತ್ತಿಕ್ಕಬೇಕು ಅಂತ ಸುಪ್ರೀಂಕೋರ್ಟ್ ಆದೇಶ ಕೊಟ್ಟಿದೆ. ಅನೇಕ ಘಟನೆಗಳು ನಡೆದಿವೆ, ಕೊಲೆಗಳು ನಡೆದಿವೆ.ಇದನ್ನೆಲ್ಲ ನಿಲ್ಲಿಸಬೇಕು.ಬಿಜೆಪಿಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಇದನ್ನು ತಂದಿಲ್ಲ.ಇದರಲ್ಲಿ ಬಿಜೆಪಿ ರಾಜಕಾರಣ ಮಾಡಲು ಹೊರಟಿದ್ದಾರೆ.ಅಧಿವೇಶನದಲ್ಲಿ ಮಸೂದೆ ಪಾಸ್ ಆಗಿದೆ.ರಾಜ್ಯಪಾಲರಿಗೆ ಮಸೂದೆ ಕಳಿಸ್ತೇವೆ. ರಾಜ್ಯಪಾಲರು ಮಸೂದೆ ಬಗ್ಗೆ ವಿವರಣೆ ಕೇಳಿದ್ರೆ ಸ್ಪಷ್ಟನೆ ಕೊಡ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದೇ 27 ರಂದು ಸಿಡಬ್ಲ್ಯೂಸಿ ಸಭೆ ಇದೆ. ಸಿಎಂ ಡಿಸಿಎಂ ಆಗ ದೆಹಲಿಗೆ ಹೋಗ್ತಾರೆ. ಆ ಸಂದರ್ಭದಲ್ಲಿ ಹೈಕಮಾಂಡ್ ಭೇಟಿ ಮಾಡಬಹುದು. ಬೈರತಿ ಬಸವರಾಜುಗೆ ಲುಕ್ ಔಟ್ ನೊಟೀಸ್ ಕೊಡುವ ಸಾಧ್ಯತೆ ವಿಚಾರದ ಬಗ್ಗೆ ಮಾತನಾಡಿ ಯಾವ ಕ್ರಮ ತಗೋಬೇಕು ಅಂತ ಸಿಐಡಿಯವ್ರು ನಿರ್ಧಾರ ತಗೋತಾರೆ. ಅವರು ಲುಕ್ ಔಟ್ ನೊಟೀಸ್ ಕೊಡ್ತಾರೋ ಬೇರೇನು ನೊಟೀಸ್ ಕೊಡ್ತಾರೋ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ. ನಾನು ಖರ್ಗೆಯವ ಜೊತೆಗೆ ರಾಜಕೀಯ ಮಾತಾಡಿಲ್ಲ. ನನ್ನ ಅವರ ಸಂಬಂಧವೇ ಬೇರೆ. ನಮ್ಮ ಮನೆಯ ವಿಷಯಗಳನ್ನು ಮಾತಾಡಿದ್ದೇವೆ ಹೊರತು ರಾಜಕೀಯ ಮಾತಾಡಿಲ್ಲ. ಇಲ್ಲಿ ಈಗ ರಾಜಕೀಯ ಚರ್ಚೆ ಬೇಡ. ನಾನು ಹೇಳಿದೆನಲ್ಲ ರಾಜಕೀಯ ಚರ್ಚೆಯನ್ನು ಮಾಡಿಲ್ಲ ಎಂದಿದ್ದಾರೆ.











