ಬೆಂಗಳೂರು; ನಮಲ್ಲಿ ಸಮಸ್ಯೆಯೇ ಇಲ್ಲ, ಯಾರೋ ಯಾರದ್ದೋ ಮನೆಗೆ ಊಟಕ್ಕೆ ಹೋದ್ರೂ ತಪ್ಪಾ? ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿ ಇಲಾಖಾವಾರು ಚರ್ಚೆ ಮಾಡ್ತೀವಿ. ಏನೂ ಮಾತಾಡೋದೇ ಬೇಡವಾ?.ಹೌದು ಹಾಗೆ ಸೇರಿದಾಗ ರಾಜಕೀಯನೂ ಮಾತಾಡಿರ್ತೀವಿ. ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಇಲ್ಲಿವರೆಗೂ ಲೀಡರ್ ಶಿಪ್ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಬೇರೆಯವರು ಮಾತಾಡೋದಕ್ಕೆ ಬೆಲೆ ಇಲ್ಲ. ಸಿಎಂ ಅವರೇ ಐದು ವರ್ಷ ಸಿಎಂ ಆಗ್ತೀರ್ತೀನಿ ಅಂತ ಹೇಳಿದ್ದಾರಲ್ಲ. ಎರಡೂವರೆ ವರ್ಷದ ಹಿಂದೆ ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಆಯ್ಕೆ ಆಗಿದ್ರು.ಮಧ್ಯದಲ್ಲಿ ಬದಲಾವಣೆ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಈಗ ಬದಲಾವಣೆ ಮಾಡ್ತಾರೆ ಅಂತ ನನಗೇನೋ ಅನಿಸ್ತಿಲ್ಲ ಎಂದಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಸಿಎಂ ಆಕಾಂಕ್ಷಿ ಇದ್ದೇನೆ.ನಾನು ಮೊದಲಿನಿಂದಲೇ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಬದಲಾವಣೆ ವಿಚಾರ ಬಂದಾಗ ನೋಡೋಣ ಎಂದಿದ್ದಾರೆ. ನೀವು ರೇಸ್ ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಪರಮೇಶ್ವರ್ ಪ್ರತಿಕ್ರಿಯಿಸಿ ನಾವು ಯಾವಾಗಲೂ ರೇಸ್ನಲ್ಲಿರ್ತೀನಿ ಕಣ್ರೀ, ಅದೇನೂ ದೊಡ್ಡ ವಿಚಾರ ಅಲ್ಲ. 2013ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. ಸರ್ಕಾರ ಅಧಿಕಾರಕ್ಕೆ ತಂದ್ವಿ. ನಾನೇ ಮಾಡಿದೆ, ನಾನೇ ಸರ್ಕಾರ ತಂದೆ ಅಂತ ಎಲ್ಲೂ ನಾನು ಹೇಳಿಕೊಳ್ಳಿಲ್ಲಪ್ಪ. ಎಲ್ರೂ ಸೇರಿ ಕೆಲಸ ಮಾಡಿದ್ವಿ, ಜನ ಕೈ ಹಿಡಿದ್ರು. ಆ ಸಂದರ್ಭದಲ್ಲಿ ನಾನು ಪರಾಭವ ಆದೆ. ಒಂದು ವೇಳೆ ನಾನು ಗೆದ್ದಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಸಂದರ್ಭದಲ್ಲೂ ನನ್ನ ಹೆಸರು ಇತ್ತು. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಿಎಂ ಆಗೋದಿಕ್ಕೆ ಒಂದು ಅವಕಾಶ ಕೊಡ್ತಾರೆ. ಅದು ಕೆಲವು ಸಂದರ್ಭಗಳಲ್ಲಿ ಆಗೋದಿಲ್ಲ.ಈಗ ಆ ಕನಸು ನನಸಾಗುತ್ತಾ ಎಂಬ ಪ್ರಶ್ನೆಗೆ , ಗೊತ್ತಿಲ್ಲಪ್ಪ, ನನಗೆ ಕನಸೇ ಬೀಳಲ್ಲ ಅಂದಿದ್ದಾರೆ.
ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಮೇಲೆ ಏನಾದರೂ ಅಂತ ಬೆಳವಣಿಗೆ ಇದ್ರೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಎಐಸಿಸಿ ಅಧ್ಯಕ್ಷರು ನಮ್ಮವರೇ ಇದ್ದಾರೆ.ಅವರಿಗೆ ರಾಜ್ಯದ ರಾಜಕಾರಣ ಗೊತ್ತಿದೆ.ಏನಾದರೂ ಇದ್ದರೆ ಅವರು ರಾಹುಲ್ ಗಾಂಧಿಯವರ ಜತೆ ಚರ್ಚಿಸಿ ತೀರ್ಮಾನ ಮಾಡ್ತಾರೆ. ದಲಿತರು ಸಿಎಂ ಆಗಬೇಕು ಅಂತ ಬಹಳ ದಿನಗಳಿಂದ ಕೇಳ್ತಿದ್ದಾರೆ. ನಾವೆಲ್ಲ ಸಮಾನ ಮನಸ್ಕರು ಸೇರಿ ಚರ್ಚಿಸಿದ್ವಿ ಅಂದ್ರೆ ಆಗಿಬಿಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಬದಲಾವಣೆಗೆ ನಿರ್ಧಾರ ಮಾಡಿದರೆ ನಿಮ್ಮನ್ನೂ ಸಿಎಂ ಮಾಡಿ ಎಂಬ ಬೇಡಿಕೆ ಇಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆ ಸಂದರ್ಭ ಬಂದಾಗ ಹೇಳ್ತೇನೆ. ಆ ಸಂದರ್ಭ ಬರಲಿ, ಇನ್ನೂ ಬಂದಿಲ್ಲವಲ್ಲ. ನನ್ನ ಹೆಸರು ಕೇಳಿಬರ್ತಿರೋದು ನೀವೇ ಮಾಡಿದ ಕೆಲಸ ಅಂತ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ಖರ್ಗೆಯವರು ಬಂದಿದ್ದಾರೆ. ಅವರು ನಾನು ಯಾವಾಗ ಬೇಕಾದರೂ ಭೇಟಿ ಮಾಡ್ತೇನೆ.ಸಣ್ಣ ವಯಸ್ಸಿಂದಲೂ ಅವರನ್ನು ನೋಡಿದ್ದೀನಿ, ಅದೇನೂ ಹೊಸದಲ್ಲ ಎಂದಿದ್ದಾರೆ.











