ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಬಾಸ್ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.ಈಗಾಗಲೇ ಜೈಲಿನಲ್ಲಿರು ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷೀ, ಪುತ್ರ ವಿನೀಶ್ ಎರಡು ಬಾರಿ ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲದೇ ದರ್ಶನ್ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್ ತೂಗುದೀಪ ಅವರು ಕೂಡ ಮೊನ್ನೆ ದರ್ಶನ್ ಅವರನ್ನು ಭೇಟಿಯಾಗಿದ್ದರು.
ಇದರ ಬೆನ್ನಲ್ಲೇ ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಪೊಲೀಸ್ ಕಮೀಷನರ್ ಬಿ ದಯಾನಂದ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರ ಸಾರಾಂಶ ಈ ರೀತಿಯಿದೆ.
ನಿಮ್ಮ ಇಲಾಖೆ ನನ್ನ ಪತಿ ದರ್ಶನ್ ಮತ್ತು ಕೆಲವರನ್ನು ಬಂಧಿಸಿ ಎರಡು ವಾರಗಳು ಕಳೆದಿವೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮತ್ತು ಎ 1 ಆರೋಪಿಯಾಗಿರುವ ಶ್ರೀಮತಿ ಪವಿತ್ರ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾಗಿ ಮಾಹಿತಿ ದಾಖಲಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅವರು ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರ ಸ್ನೇಹಿತೆ ಅನ್ನೋದು ನಿಜ. ಆದರೆ ಅವರು ದರ್ಶನ್ ಪತ್ನಿಯಲ್ಲ ಎಂಬುವುದನ್ನು ನೀವು ದಯವಿಟ್ಟು ಗಮನಿಸಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. 19.05.2003 ರಂದು ಧರ್ಮಸ್ಥಳದಲ್ಲಿ ನಮ್ಮ ವಿವಾಹವು ನೆರವೇರಿತು.
ನೀವು, ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವಾಗ ಆರಂಭದಲ್ಲಿ ತಾವು ತಪ್ಪಾಗಿ ಪವಿತ್ರಗೌಡ ಅವರನ್ನು ದರ್ಶನ್ ಪತ್ನಿ ಎಂದು ಸಂಬೋಧಿಸಿದ್ದೀರಿ. ಆ ನಂತರ ಗೃಹ ಸಚಿವರು ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಸಹ ದರ್ಶನ್ ಶ್ರೀನಿವಾಸ್ ಹಾಗೂ ಅವರ ಪತ್ನಿಯ ಬಂಧನ ಎಂದು ಸುದ್ದಿ ಪ್ರಸಾರ ಮಾಡಲು ಆರಂಭಿಸಿದವು.
ನಾನು ಅವರ ಏಕೈಕ ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮತ್ತು ನಮ್ಮ ಮಗ ವಿನೀಶ್ ದರ್ಶನ್. ದಾಖಲೆಗಳಲ್ಲಿ ತಪ್ಪಾಗಿ ನಮೂದಿಸೋದರಿಂಗ ನನಗೆ ಹಾಗೂ ನನ್ನ ಮಗನಿಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಅಥವಾ ಗೊಂದಲ ಆಗಬಾರದು.
ಶ್ರೀಮತಿ. ಪವಿತ್ರಾ ಅವರು ಶ್ರೀ ಸಂಜಯ್ ಸಿಂಗ್ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಮಗಳಿದ್ದಾಳೆ. ಈ ಕುರಿತಾಗಿ ಪೊಲೀಸ್ ಫೈಲ್ಗಳಲ್ಲಿ ಎಲ್ಲಾ ದಾಖಲೆಗಳು ಹಾಗೂ ಮಾಹಿತಿಗಳನ್ನು ಸರಿಯಾಗಿ ಹೊಂದಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ವಿಜಯಲಕ್ಷ್ಮೀ ಬರೆದಿದ್ದಾರೆ.
ಆ ಮೂಲಕ ಪವಿತ್ರ ಗೌಡ ದರ್ಶನ್ ಅವರ ಪತ್ನಿ ಅನ್ನೋದನ್ನು ಬಹಳ ಸ್ಪಷ್ಟವಾಗಿ ವಿಜಯಲಕ್ಷ್ಮೀ ದರ್ಶನ್ ಅಲ್ಲಗಳೆದಿದ್ದಾರೆ. ಅಲ್ಲದೇ ಹರಿದಾಡುತ್ತಿದ್ದ ಹಲವು ಸುಳ್ಳು ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ. ಪರೋಕ್ಷವಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.