ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ನವದೆಹಲಿಯಲ್ಲಿ ಬಸವ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಸಂಸತ್ತಿನಲ್ಲಿ ಬಸವ ಜಯಂತಿ ಆಚರಣೆ ನಡೆಯಲಿದೆ. ಏಪ್ರಿಲ್ 30 ರಂದು ಆಚರಣೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ.ಬಸವ ಅಭಿಮಾನಿಯಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದರು.
ಕರ್ನಾಟಕದಲ್ಲಿ ಬಸವಣ್ಣನವರ ಹೆಸರಿನ ಒಂದು ವಿಶ್ವವಿದ್ಯಾಲಯ ಇರಬೇಕು. ಕಲ್ಬುರ್ಗಿ ವಿವಿಗೆ ಬಸವಣ್ಣನ ಹೆಸರು ಇಟ್ಟರೆ ಸೂಕ್ತ. ಇದು ಸುಮಾರು 10 ವರ್ಷಗಳ ಬೇಡಿಕೆ. ಬಸವ ಜಯಂತಿ ಆಚರಣೆ ಇಂದಿನ ದಿನದಲ್ಲಿ ಬಹಳ ಪ್ರಸ್ತುತ. ಬಸವಣ್ಣನವರನ್ನು ಇಂದು ಒಂದು ಜಾತಿಗೋ, ಧರ್ಮಕ್ಕೋ ಸೀಮಿತಗೊಳಿಸುವ ಪ್ರಯತ್ನ ನಡೆದಿದೆ. ನಾವು ಅದನ್ನು ಭೇದಿಸಬೇಕಿದೆ.ಸಂಸತ್ತಿನಲ್ಲಿ ಬಸವ ಜಯಂತಿ ಆಚರಣೆ ಆ ದಿಕ್ಕಿನಲ್ಲಿ ಒಂದು ಸಣ್ಣ ಪ್ರಯತ್ನವಷ್ಟೇ ಎಂದು ತಿಳಿಸಿದ್ರು.
ನನಗೆ ದೇಶಕ್ಕೆ ಅಲ್ಪ ಸ್ವಲ್ಪ ಸೇವೆ ಮಾಡಲು ಅವಕಾಶ ಇದೆ. ಇದು ಕೊನೆಯ ಸಂದರ್ಭದಲ್ಲಿ ಒಳ್ಳೆಯ ಇನ್ಸಿಂಗ್ಸ್.ಬಹಳ ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ. ರೈಲ್ವೇ ಇಲಾಖೆಯಲ್ಲಿ ಕೂಡಾ ಪ್ರಾಮಾಣಿಕ, ಚಿನ್ನದಂತಹ ಅಧಿಕಾರಿಗಳಿದ್ದಾರೆ.ನಾವು ಅವರನ್ನು ಉಪಯೋಗಿಸಿಕೊಳ್ಳಬೇಕು ಅಷ್ಟೇ. ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಕರ್ನಾಟಕದಲ್ಲಿ ರೈಲ್ವೇ ಇಲಾಖೆ ಹೊಸ ಶಕೆಯನ್ನು ತೆಗೆದುಕೊಳ್ಳುತ್ತಿದೆ. ಯಶವಂತಪುರ ರೈಲ್ವೇ ನಿಲ್ದಾಣ, ಕಂಟೋನ್ಮೆಂಟ್ ನಿಲ್ದಾಣ ಒಂದು ಹಂತಕ್ಕೆ ಬಂದಿದೆ. ಏರ್ ಪೋರ್ಟ್ ಬಳಿ ಒಳ್ಳೆಯ ಟರ್ಮಿನಲ್ ಮಾಡಬೇಕು ಎಂದುಕೊಂಡಿದ್ದೇವೆ. ವೀರಪ್ಪ ಮೊಯ್ಲಿ ಸಿಎಂ ಇದ್ದಾಗ ಬೆಂಗಳೂರಿಗೆ ಮೆಟ್ರೋ ಅವಶ್ಯಕತೆ ಇಲ್ಲ ಎಂದಿದ್ದರು. ನನಗೆ ಎಲ್ಲದಕ್ಕೂ ಸ್ಫೂರ್ತಿ ಬಸವಣ್ಣ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕಕ್ಕೆ ರಾಜ್ಯಪಾಲರ ಸಹಿ ವಿಚಾರದ ಬಗ್ಗೆ ಮಾತನಾಡಿದ ಅವರು ಅವಶ್ಯಕತೆ ಇಲ್ಲದಿರುವುದನ್ನು ಇದೆ ಅಂತಾ ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ನಮಗೆಲ್ಲರಿಗೂ ಮಾಸ್ಟರ್. ಇರುವುದಕ್ಕೇ ನೀರು ಕೊಡಲು ಆಗುತ್ತಿಲ್ಲ, ಗುಂಡಿ ಮುಚ್ಚಲು ಆಗುತ್ತಿಲ್ಲ. ಚುನಾವಣೆ ಮುಂದೂಡಲು ಏನೆಲ್ಲಾ ಬೇಕೋ ಅದನ್ನು ಮಾಡುತ್ತಿದ್ದಾರೆ. ಸ್ವಲ್ಪ ದಿನ ಅಷ್ಟೇ, ಆಮೇಲೆ ನಾವೇ ಬರುತ್ತೇವೆ.ಆಗ ಇದು ಯಾವುದೂ ಇರುವುದಿಲ್ಲ. ಮಾಮೂಲಿ ಕಾರ್ಪೋರೇಷನ್ ಗೆ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.
ಹಲವು ವಿಚಾರಗಳಲ್ಲಿ ನಮ್ಮಲ್ಲಿ ಒಡಂಬಡಿಕೆ ಇಲ್ಲದ ಕಾರಣ ಬ್ಲೇಮ್ ಮಾಡುವುದೇ ಆಗಿದೆ.ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಹೇಳುವುದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಹೇಳುವುದು ಆಗುತ್ತಿದೆ. ಸಿದ್ದರಾಮಯ್ಯ ತಮ್ಮ ಹಳೆಯ ಆಡಳಿತವನ್ನು ಸ್ವಲ್ಪ ಪುನರಾವರ್ತನೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ದೇವರೇ ಕಾಪಾಡಬೇಕು. ಸಬ್ ಅರ್ಬನ್ ರೈಲ್ವೇ ಕೆಲಸ ಆಗುತ್ತಿದೆ. ಎಂ.ಬಿ. ಪಾಟೀಲ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಈ ಯೋಜನೆಗೆ ತುಂಬಾ ಆದ್ಯತೆ ಕೊಟ್ಟಿದ್ದಾರೆ. ರೈಲ್ವೇ ಇಲಾಖೆ ರಕ್ಷಣಾ ಇಲಾಖೆ ಇದ್ದಂತೆ. ಅಷ್ಟು ಸುಲಭವಾಗಿ ನಾವು ಬಿಡುವುದಿಲ್ಲ. ಹಲವಾರು ವರ್ಷಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದರು.
ಜಾತಿ ಜನಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಸಾಮಾನ್ಯ ಜನರ ನಾಡಿಮಿಡಿತವನ್ನು ನಾನು 40 ವರ್ಷದಿಂದ ನೋಡಿದ್ದೇನೆ. ಕಾಂತರಾಜುನೇ ಸಹಿ ಹಾಕದೇ ಓಡಿ ಹೋಗಿ ಬಿಟ್ಟಿದ್ದ. ಇಷ್ಟೆಲ್ಲಾ ಉಪ್ಪು ಖಾರ ಹಾಕುವ ಬದಲು ತಿರಸ್ಕಾರ ಮಾಡಿದರೆ ಒಳ್ಳೆಯದು. ಈ ವರದಿ ತಿರಸ್ಕಾರ ಮಾಡಿ ಹೊಸ ವರದಿ ಮಾಡುವುದು ಸೂಕ್ತ. ಪದೇ ಪದೇ ಇದನ್ನೇ ಇಟ್ಟುಕೊಂಡು ಪೋಸ್ಟ್ ಮಾರ್ಟಂ ಮಾಡುವುದು ಬೇಡ. ಇದು ಯಾವುದೂ ಆಗುವುದಿಲ್ಲ, ಹೀಗೇ ಮುಂದೆ ಹೋಗುತ್ತಾ ಇರುತ್ತದೆ ಅಷ್ಟೇ ಎಂದರು.
ಬೆಂಗಳೂರಿನಲ್ಲಿ ಎರಡನೇ ಏರ್ ಪೋರ್ಟ್ ಸ್ಥಾಪನೆ ವಿಚಾರದ ಬಗ್ಗೆ ಮಾತನಾಡಿ ಔಪಚಾರಿಕವಾಗಿ ಇದರ ಬಗ್ಗೆ ಈಗಾಗಲೇ ಮಾತಾಡಿದ್ದೇವೆ. ಇನ್ನೊಂದು ಸಲ ಕೂಡಾ ಮಾತಾಡುತ್ತೇವೆ.ದೆಹಲಿಯಲ್ಲಿ ಏರ್ ಪೋರ್ಟ್ ಗಳು ಒಂದೇ ಕಡೆ ಇಲ್ಲವೇ?. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದಾಗ ಇಷ್ಟು ಅನುಭವ ಇದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಈಗ ಅನುಭವ ಇದೆ, ಅವಕಾಶ ಕಡಿಮೆ ಇದೆ ಎಂದು ತಿಳಿಸಿದ್ರು.