ಮನೆ Latest News ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ನಾಗೇಂದ್ರ ಆಪ್ತನ ಖಾತೆಯಿಂದಲೇ ಹಣ...

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಚಿವ ನಾಗೇಂದ್ರ ಆಪ್ತನ ಖಾತೆಯಿಂದಲೇ ಹಣ ವರ್ಗಾವಣೆ

0

ರಾಯಚೂರು: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾಜಿ ಸಚಿವ ನಾಗೇಂದ್ರ ಅವರನ್ನು ಅರೆಸ್ಟ್ ಮಾಡಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ವಿಚಾರಣೆ ವೇಳೆ ಇಡಿ ಅಧಿಕಾರಿಗಳಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗಿದೆ.

 

ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಚಿವ ನಾಗೇಂದ್ರ ಅವರ ಆಪ್ತನ ಅಕೌಂಟ್ ನಿಂದಲೇ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಮಾಜಿ ಸಚಿವ ನಾಗೇಂದ್ರನ ಆಪ್ತ ಸಹಾಯಕ ನೆಕ್ಕಂಟಿ‌ ನಾಗರಾಜ್ ಅಕೌಂಟ್ ಮೂಲಕ ಇತರರ ಖಾತೆಗಳಿಗೆ ಹಣ ಜಮಾ ಆಗಿದೆ ಎನ್ನಲಾಗಿದೆ.

ಸಿಂಧನೂರನ ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮಿ, ರತ್ನಕುಮಾರಿ, ಹಾಗೂ ಮೊಮ್ಮಗ‌ ಎಲ್. ಸುನೀಲನ ಅಕೌಂಟಿಗೆ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಕೋನಾ ವೆಂಕಟರಾವ್ ರೆಡ್ಡಿ ಅಕೌಂಟಿಗೆ 12 ಲಕ್ಷ, ಪುತ್ರಿ ಲಕ್ಕಂಸಾನಿ ಲಕ್ಷ್ಮಿ ಅಕೌಂಟಿಗೆ 25 ಲಕ್ಷ, ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ, ಮೊಮ್ಮಗ ಸುನೀಲ್ ಅಕೌಂಟಿಗೆ 36 ಲಕ್ಷ ವರ್ಗಾವಣೆ ಮಾಡಲಾಗಿದೆ.

ಇನ್ನು ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ ಇವರ ಇಡೀ ಕುಟುಂಬಕ್ಕೆ ಒಟ್ಟು 98 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಬೂದಿಹಾಳ ಕ್ಯಾಂಪ್ ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿವೆ ವೆಂಕಟರಾವ್ ರೆಡ್ಡಿ ಕುಟುಂಬದವರ ಅಕೌಂಟ್ ಗಳಿವೆ.

ಇದೇ ವಿಚಾರವಾಗಿ ಈ ನಾಲ್ವರ ಅಕೌಂಟ್ ಗಳು ಸದ್ಯಕ್ಕೆ ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದಲೇ ಇಡಿ ಅಧಿಕಾರಿಗಳಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ನಾಲ್ವರ ಅಕೌಂಟ್ ಸೀಜ್ ಮಾಡಲಾಗಿದೆ. ಕಮಿಷನ್ ಆಸೆ ತೋರಿಸಿ ಕಳೆದ ಮಾ.8ರಂದು ಈ ನಾಲ್ವರ ಅಕೌಂಟ್ ಗೆ ಹಣ ವರ್ಗಾವಣೆ ಮಾಡಲಾಗಿದೆ. ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡದಂತೆ ಇಡಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ.

ಜುಲೈ 18ರವರೆಗೆ ಮಾಜಿ ಸಚಿವ ಬಿ ನಾಗೇಂದ್ರಗೆ ಇಡಿ ಕಸ್ಟಡಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಶದಲ್ಲಿರುವ ಮಾಜಿ ಸಚಿವ ಬಿ ನಾಗೇಂದ್ರಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಮೊನ್ನೆ  ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆತಂದಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶ ಗಜಾನನ ಭಟ್‌, ನಾಗೇಂದ್ರ ಅವರನ್ನು ಜುಲೈ 18 ರ ವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿ ಬಳಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಮಾಜಿ ಸಚಿವ ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದಿದ್ದಾರೆ.