ಬೆಂಗಳೂರು: ಸರ್ಕಾರಕ್ಕಾಗಿ ಕೆಲಸ ಮಾಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು 2023 ರಲ್ಲಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆದಾಗ ಮತ ಕೊಟ್ಟ ಜನ ಸಂಭ್ರಮ ಪಟ್ಟಿದ್ದರು. ಗ್ಯಾರಂಟಿಗಳ ಮೂಲಕ ನಮ್ಮ ಉದ್ಧಾರ ಆಗುತ್ತದೆ ಎಂದು ಜನ ನಂಬಿದ್ದರು.ಆದರೆ ಗ್ಯಾರಂಟಿ ಕೊಡುವಲ್ಲಿ ಒಂದೇ ವರ್ಷದಲ್ಲಿ ಸರ್ಕಾರ ವಿಫಲವಾಗಿದೆ. ಗುತ್ತಿಗೆದಾರರು ಆಗಾಗ ಬಿಲ್ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಸರ್ಕಾರಕ್ಕಾಗಿ ಕೆಲಸ ಮಾಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಮಕ್ಕಳು ಆಚೆ ಹೋದರೆ ಮನೆಗೆ ಬರುತ್ತಾರೆ ಎಂಬ ವಿಶ್ವಾಸವಿಲ್ಲ. ಬೆಂಗಳೂರಿನಲ್ಲಿ ಬೈಕ್ ನಲ್ಲಿ ಹೋದರೆ ಯಾವ ಗುಂಡಿಯಲ್ಲಿ ಬಿದ್ದು ಸಾಯ್ತಾರೆ ಅಂತಾನೇ ಗೊತ್ತಾಗಲ್ಲ. ಮೆಷಿನರಿಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಹೋದರೆ ಅದರ ಬಿಡಿ ಭಾಗಗಳು ಸಡಿಲವಾಗುತ್ತವಂತೆ. ಕಿರಣ್ ಮಜುಂದಾರ್ ಶಾ ರಸ್ತೆ ಗುಂಡಿ, ಸ್ವಚ್ಛತೆ ಬಗ್ಗೆ ಕೇಳಿದ್ದೆ ತಪ್ಪಾಯಿತು. ಎಲ್ಲಾ ಮಂತ್ರಿಗಳು ಅವರ ವಿರುದ್ಧ ಮುಗಿ ಬಿದ್ದಿದ್ದಾರೆ. ಪ್ರಶ್ನೆ ಮಾಡಿದವರ ವಿರುದ್ಧ ಮುಗಿ ಬೀಳುವ ಕೆಲಸವನ್ನು ಎಲ್ಲಾ ಮಂತ್ರಿಗಳು ಮಾಡುತ್ತಿದ್ದಾರೆ . ಒಬ್ಬನೇ ಒಬ್ಬ ಮಂತ್ರಿ ಜಿಲ್ಲೆಗಳಿಗೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ಅವರದ್ದೇ ಶಾಸಕರ ಅಹವಾಲು ಕೇಳುತ್ತಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಜಿಲ್ಲೆಗಳಲ್ಲಿ ಕಾರಿಗಳಲ್ಲಿ ತಿರುಗಿಕೊಂಡು ಮಜಾ ಮಾಡುತ್ತಿದ್ದಾರೆ. ಸಿಎಂ ಒಂದು ದಿನವೂ ಜಿಲ್ಲೆಗಳಿಗೆ ಹೋಗಿ ಕುಳಿತು ಸಭೆ ಮಾಡಿಲ್ಲ. ಸಿಎಂ ಜಿಲ್ಲೆಯಲ್ಲೇ ಬಲೂನು ಮಾರಲು ಬಂದ ಹುಡುಗಿಯ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ.ಜನರ ಗಮನ ಬೇರೆಡೆಗೆ ತಿರುಗಿಸಲು ಪ್ರಿಯಾಂಕ್ ಖರ್ಗೆಯನ್ನು ಛೂ ಬಿಟ್ಟಿದ್ದಾರೆ ಎಂದಿದ್ದಾರೆ.
ನೆಹರೂ, ಇಂದಿರಾಗಾಂಧಿಗೆ ಹೆದರದ ಆರ್ ಎಸ್ ಎಸ್ ಪ್ರಿಯಾಂಕ್ ಖರ್ಗೆಯಂತಹ ಚಮಚಾ ನಿಗೆ ಹೆದರುವ ಪ್ರಶ್ನೆಯೇ ಇಲ್ಲ. ಆರ್ ಎಸ್ ಎಸ್ ನಿಷೇಧಿಸುತ್ತೇವೆ ಅಂದರೆ ಅದು ಮೂರ್ಖತನ . ನೀವೇನೂ ಮಾಡಲು ಆಗಲ್ಲ, ಆರ್ ಎಸ್ ಎಸ್ ಹೆಮ್ಮರವಾಗಿದೆ. ನೆಹರು, ಇಂದಿರಾ ಗಾಂಧಿ ಮಾಡಲು ಸಾಧ್ಯವಾಗದ್ದನ್ನು ಕೇವಲ ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಬಂದಿರುವ ಪ್ರಿಯಾಂಕ್ ಖರ್ಗೆ ಮಾಡಲು ಆಗುತ್ತಾ?. ಸಿದ್ದರಾಮಯ್ಯ ಅವರಿಂದ ನಿಷೇಧ ಮಾಡಲು ಸಾಧ್ಯವಾಗುತ್ತಾ?. ನೀವು ಇನ್ನೊಂದು ಸಲ ಹುಟ್ಟಿ ಬಂದರೂ ನಿಷೇಧ ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಕನ್ನೇರಿ ಮಠದ ಸ್ವಾಮೀಜಿಗೆ ವಿಜಯಪುರಕ್ಕೆ ನಿರ್ಬಂಧ ಹಾಕಿದ್ದಾರೆ. ಇದು ವಿನಾಶ ಕಾಲೇ ವಿಪರೀತ ಬುದ್ದಿ. ಒಬ್ಬ ಕನ್ನೇರಿ ಮಠದ ಸ್ವಾಮೀಜಿ ಮಾತಾಡಿದ್ದಕ್ಕೆ ನೀವು ಹೆದರಿದ್ದೀರಿ. ಒಂದು ದಿನ ಆರ್ ಎಸ್ ಎಸ್ ಪಥಸಂಚಲನ ಮಾಡಿದ್ದಕ್ಕೆ ಹೆದರಿದ್ದೀರಿ. ಕನ್ನೇರಿ ಮಠದ ಸ್ವಾಮೀಜಿ ಏನು ತಪ್ಪು ಮಾತಾಡಿದ್ದಾರೆ?. ಅವರು ಏನು ಭಯೋತ್ಪಾದಕ ಕೆಲಸ ಮಾಡಿದ್ದಾರಾ?. ಆಯೋಗಗಳನ್ನು ಮಾಡಿ ನಿಮ್ಮ ಚಮಚಾ, ಚೇಲಾಗಳಿಗೆ ದುಡ್ಡು ತಿನ್ನಲು ದಾರಿ. ಲಿಂಗಾಯತರನ್ನು ಒಡೆಯಬೇಡಿ ಎಂದು ಹೇಳಿದ್ದೇ ತಪ್ಪಾ?. ಸಿದ್ದರಾಮಯ್ಯನವರೇ ನಿಮ್ಮ, ಸರ್ಕಾರದ ವಿನಾಶ ಹತ್ತಿರ ಆಗುತ್ತಿದೆ. ಸರ್ಕಾರ ಕನ್ನೇರಿ ಮಠದ ಸ್ವಾಮೀಜಿಗೆ ಹಾಕಿದ ನಿರ್ಬಂಧ ತಕ್ಷಣ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ದೊಡ್ಡಮಟ್ಟದ ಹೋರಾಟ ಆಗುತ್ತದೆ. ಈಗ ಸ್ವಾಮೀಜಿಗಳನ್ನು ಹಿಡಿದುಕೊಂಡಿದ್ದೀರಿ. ನಿಷೇಧ ವಾಪಸ್ ಪಡೆಯದಿದ್ದರೆ ನಾನೇ ಸ್ವಾಮೀಜಿ ಕರೆದುಕೊಂಡು ವಿಜಯಪುರಕ್ಕೆ ಹೋಗುತ್ತೇನೆ. ಅವರ ಜೊತೆ ನನ್ನನ್ನೂ ಅರೆಸ್ಟ್ ಮಾಡಿ ಇದು ತಾಲಿಬಾನ್ ಆಡಳಿತ ಅಲ್ಲ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯನವರೇ ಹೆಲಿಕಾಫ್ಟರ್ ಬಿಟ್ಟು ನೆಲದಲ್ಲಿ ಓಡಾಡಿ. ಸರ್ಕಾರ ಸತ್ಯ ಮಾತಾಡುವುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಖಾಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಹೋದ ಖಾಲಿ ತಲೆಗಳು ಇವು. ಅಂಬೇಡ್ಕರ್ ರನ್ನು ಸೋಲಿಸಿದವರು ಯಾರು ಪ್ರಿಯಾಂಕ್ ಖರ್ಗೆಯವರೇ?. ಯಾವ ಸ್ವಾಮೀಜಿ, ಧರ್ಮ, ಜಾತಿಯನ್ನೂ ಇವರು ಒಪ್ಪಲ್ಲ .
ಯಾರು ಭಯೋತ್ಪಾದಕ, ಸಮಾಜ ದ್ರೋಹ ಕೆಲಸ ಮಾಡುತ್ತಾರೋ ಅವರಿಗೆ ಇದನ್ನು ಅನ್ವಯ ಮಾಡಬೇಕು. ಕಾಫೀರರು ಅಂತಾ ಹೇಳುವವರು, ಭಾರತ ಮಾತೆಗೆ ಜೈ ಎನ್ನಬೇಡಿ ಎಂದವರು, ಮದರಸಾಗಳಲ್ಲಿ ದೇಶದ ವಿರುದ್ಧ ಹೇಳಿಕೊಡುವವರಿಗೆ ಅನ್ವಯ ಆಗಬೇಕು. ನಮಸ್ತೇ ಸದಾ ವತ್ಸಲೆ ಹಾಡಿದ ಡಿ.ಕೆ. ಶಿವಕುಮಾರ್ ಬಳಿ ಕ್ಷಮೆ ಕೇಳಿಸಿದ ಪಕ್ಷ ಇದು ಎಂದು ತಿಳಿಸಿದ್ದಾರೆ.
ಡಿಸಿಎಂ ಆಗಬೇಕಾ, ಜೈಲಿಗೆ ಹೋಗಬೇಕಾ ಎಂಬ ಕರೆ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಯಾರು ಕರೆ ಮಾಡಿದ್ದಾರೋ ಅವರನ್ನು ಪತ್ತೆ ಮಾಡಿ ನಿಮ್ಮ ಸರ್ಕಾರ ಇದೆ. ಬಿಜೆಪಿಗೆ ಡಿ.ಕೆ. ಶಿವಕುಮಾರ್ ರನ್ನು ಕರೆದುಕೊಂಡು ಬಂದು ಡಿಸಿಎಂ ಮಾಡಬೇಕಾದ ದರ್ದು ಇಲ್ಲ . ಅವರು ದೊಡ್ಡವರಾಗಲು, ಅವರು ಏನೋ ಕ್ಲೈಮ್ ಮಾಡಲು ಬಿಜೆಪಿ ಬಗ್ಗೆ ಮಾತಾಡುತ್ತಾರೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಡಳಿತ, ಮೂರು ಬಾರಿ ಮೋದಿ ಪ್ರಧಾನಿ ಆಗಿರುವ ಪಕ್ಷ ನಮ್ಮದು.ಮಲ್ಲಿಕಾರ್ಜುನ ಖರ್ಗೆ ಮಗ ಅಂತಾ ಕಲ್ಬುರ್ಗಿಯಲ್ಲಿ ಜನ ಪ್ರಿಯಾಂಕ್ ಖರ್ಗೆಯನ್ನು ಮಾತಾಡಿಸುತ್ತಾರೆ. ಇಲ್ಲದಿದ್ದರೆ ಯಾವೂರ ದಾಸಯ್ಯ ಅಂತಾನೂ ಅವರನ್ನು ಕೇಳಲ್ಲ. ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ನಿಮ್ಮದೇ ಸರ್ಕಾರ ಇದೆ,. ಯಾರು ಕರೆ ಮಾಡಿದರು ಅಂತಾ ಪತ್ತೆ ಹಚ್ಚಿ. ಕರೆ ಮಾಡಿದವರನ್ನು ಒಳಗೆ ಹಾಕಿ. ನಿಮ್ಮ ಕಾರ್ಯಕರ್ತರಿಂದ ಕರೆ ಮಾಡಿಸಿಕೊಂಡು ಬಿಜೆಪಿ ಮೇಲೆ ಹಾಕಬೇಡಿ. ದೆಹಲಿಯಿಂದ ಕರೆ ಮಾಡಿದ್ದು ಯಾರು ಅಂತಾ ಪತ್ತೆ ಹಚ್ಚಿ. ಸುಮ್ಮನೆ ಪ್ರಚಾರ ಪಡೆಯಬೇಡಿ. ಪ್ರಚಾರಕ್ಕೆ ಬಿಜೆಪಿ, ಆರ್ ಎಸ್ ಎಸ್ ಹೆಸರು ಬಳಸಬೇಡಿ.ನಮ್ಮ ಪ್ರಧಾನಿ ಎಲ್ಲರನ್ನೂ ಬಂದಾಗ ಮಾತಾಡಿಸುತ್ತಾರೆ. ಚುನಾವಣೆ ಸಮಯದಲ್ಲಿ ಚುನಾವಣೆ.ಚುನಾವಣೆ ಬಳಿಕ ಒಂದು ಸರ್ಕಾರ. ಮೋದಿ ಬೆಂಗಳೂರು ಬಂದಾಗ ಇವರನ್ನು ಮಾತನಾಡಿಸಿದ್ದೂ ಸಹ ಇವರು ಡಿಸಿಎಂ ಅಂತಾ. ಹೀಗೆ ಎಲ್ಲರನ್ನೂ ಮೋದಿ ಮಾತಾಡಿಸುತ್ತಾರೆ ಎಂದಿದ್ದಾರೆ.










