ಮನೆ Latest News ದರ್ಶನ್ ಹೈಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ; ಸರ್ಕಾರದಿಂದ ಆಕ್ಷೇಪಣೆ ಅರ್ಜಿ...

ದರ್ಶನ್ ಹೈಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ; ಸರ್ಕಾರದಿಂದ ಆಕ್ಷೇಪಣೆ ಅರ್ಜಿ ಸಲ್ಲಿಕೆ

0

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದಾಗಿನಿಂದ ಸರಿ ನಿದ್ದೆ ಮಾಡ್ತಿಲ್ಲ. ಊಟ ಮಾಡ್ತಿಲ್ಲ.  ನಟ ದರ್ಶನ್ ಅವರು ಜೈಲಿನ  ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಜೈಲಿನ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಭೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಲಗಲು ಹಾಸಿಗೆ ಇಲ್ಲದ ಕಾರಣ ನೆಲದಲ್ಲೇ ಮಲಗುತ್ತಿದ್ದು ನಿದ್ದೆಯಿಲ್ಲದೇ ಬಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಪರವಾಗಿ ಅವರ ವಕೀಲರು ದರ್ಶನ್ ಗೆ ಮನೆಯೂಟ, ಮಲಗಲು ಹಾಸಿಗೆ ಹಾಗೂ ಸಮಯ ಕಳೆಯಲು ಓದಲು ಪುಸ್ತಕ ಒದಗಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

 

ಮೊನ್ನೆ ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ  ಇದೇ ವಾದ ಮಂಡಿಸಿದ ದರ್ಶನ್‌ ಪರ ವಕೀಲರು ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್‌ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು.  ಆಗ ನ್ಯಾಯಾಧೀಶರು ಈ ಪ್ರಕರಣವನ್ನು ಕೂಡ ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು ಎಂದು ಹೇಳಿ ನಟ ದರ್ಶನ್ ಅವರ  ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಮುಂದೂಡಿದ್ದರು.ಅದರಂತೆ ಇಂದು ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು ನಾಳೆ ಮಧ್ಯಾಹ್ನ 2-30ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

ಇನ್ನು ನಟ ದರ್ಶನ್ ಅವರ ರಿಟ್ ಅರ್ಜಿಗೆ ಸರ್ಕಾರ ಹಾಗೂ ತನಿಖಾಧಿಕಾರಿ ಆಕ್ಷೇಪಣೆ ಸಲ್ಲಿಸಿದ್ದಾರೆ.ಈ ವೇಳೆ ಸರ್ಕಾರ ಆಕ್ಷೇಪಣೆ ಸಲ್ಲಿಸಬಹುದು. ಆದರೆ ತನಿಖಾಧಿಕಾರಿ ಅಲ್ಲ ಎಂದು ದರ್ಶನ್ ಪರ ಹಿರಿಯ ವಕೀಲ ಕೆಎನ್ ಫಣಿಂದ್ರ ವಾದ ಮಂಡಿಸಿದರು. ಈ ವೇಳೆ ನ್ಯಾಯಾಧೀಶರು ನಾಳೆ ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

ನಟ ದರ್ಶನ್ ಸೇರಿದಂತೆ 17 ಆರೋಪಿಗಳಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಅವರನ್ನು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ  ನ್ಯಾಯಾಧೀಶರ ಮುಂದೆ ಮಧ್ಯಾಹ್ನದ ಬಳಿಕ ಹಾಜರುಪಡಿಸಲಾಯಿತು.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರಿನ ಕೇಂದ್ರ ಕಾರಾಗೃಹದಲ್ಲಿರುವ 4 ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ  ಜೈಲಾಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ  ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು ಆರೋಪಿಗಳಿಗೆ ಆಗಸ್ಟ್ 1 ರವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶವನ್ನು ನೀಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮತ್ತೆ ಒಂದಷ್ಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪವಿತ್ರ ಗೌಡ ಸ್ನೇಹಿತ ಸಮತಾ ಗೌಡ, ಆರೋಪಿ ಪ್ರದೂಶ್ ಸ್ನೇಹಿತ ಕಾರ್ತಿಕ್ ಪುರೋಹಿತ್, ದರ್ಶನ್ ಅವರಿಗೆ ಹಣದ ಸಹಾಯ ಮಾಡಿದ ಮಾಜಿ ಉಪಮೇಯರ್ ಮೋಹನ್ ರಾಜ್, ದರ್ಶನ್ ಅವರ ಡೆವಿಲ್ ಸಿನಿಮಾದ ನಿರ್ದೇಶಕರಾದ ಮಿಲನ ಪ್ರಕಾಶ್ ಇವರಿಗೆಲ್ಲಾ ನೋಟಿಸ್ ನೀಡಿ ತನಿಖಾಧಿಕಾರಿ ಚಂದನ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅದರಂತೆ ಅವರೆಲ್ಲಾ ವಿಚಾರಣೆಗೆ ಹಾಜರಾಗಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದುವರೆಗೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳು ಬೇಲ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾಗಿ ಸದ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗದೇ ಆರೋಪಿಗಳು ಬೇಲ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಪಿಗಳ ಪರವಾದ ವಕೀಲರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಅಲ್ಲಿಯವರೆಗೆ ಆರೋಪಿಗಳೇ ಜೈಲೇ ಗತಿ.