ಬೆಂಗಳೂರು; ಅಮಾನತು ಕುರಿತ ಸ್ಪೀಕರ್ ನಿರ್ಧಾರ ಹಿಟ್ಲರ್ ಸಂಸ್ಕೃತಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಬಿಜೆಪಿ ಶಾಸಕರ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು ಸ್ಪೀಕರ್ ನಡೆ ನೋಡಿದರೆ ತುಘಲಕ್ ದರ್ಬಾರ್ ರೀತಿ ಕಾಣುತ್ತಿದೆ. ನಿನ್ನೆ ಘಟನೆ ಸ್ಪೀಕರ್ ಪ್ರಚೋದನೆಯಿಂದಲೇ ಅಗಿರುವುದು.ನಾನು ಇದನ್ನು ನೇರವಾಗಿ ಆರೋಪ ಮಾಡುತ್ತೇನೆ. ನಿನ್ನೆ ಶಾಸಕರನ್ನು ಮಾರ್ಷಲ್ ಗಳು ತಡೆಯುತ್ತಿದ್ದರೂ ಸ್ಪೀಕರ್ ಬರಲಿ ಬರಲಿ ಬಿಡಿ ಎಂದು ಹೇಳಿದ್ದಾರೆ.ಇದು ಪ್ರಚೋದನೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹಿಂದೆ ಸಿದ್ದರಾಮಯ್ಯ ವಿಧಾನಸಭೆ ಬಾಗಿಲಿಗೆ ಬೂಟುಗಾಲಿನಿಂದ ಒದ್ದಿದ್ದು, ಜಮೀರ್ ಅಹಮದ್ ಸ್ಪೀಕರ್ ಮೇಲೆ ಹಲ್ಲೆ ಯತ್ನ ಮಾಡಿದ್ದು ಎಲ್ಲವನ್ನೂ ನೋಡಿದ್ದೇವೆ. ಇದು ದ್ವೇಷ, ಅಸೂಯೆಯಿಂದ ಮಾಡಿರುವುದು ಎಂದ್ರು. 4% ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿ ಇದು ಹಿಂದೂಗಳಿಂದ ಕಸಿದು ಕೊಡುತ್ತಿರುವ ಹಕ್ಕು.ಈಗ ಅವರು ಜನರಲ್ ನಲ್ಲೂ ಸ್ಫರ್ಧೆ ಮಾಡುತ್ತಾರೆ, ಮೀಸಲಾತಿಯಲ್ಲೂ ಸ್ಪರ್ಧೆ ಮಾಡುತ್ತಾರೆ. ಮಂಗಳೂರು ಭಾಗದಲ್ಲಿ ಈಗಾಗಲೇ ಅವರು 50% ಇದ್ದಾರೆ.ಈಗ ಅವರು ಅಲ್ಲಿ 70% ಗೆ ಹೋಗುತ್ತಾರೆ. ಕಾಂಗ್ರೆಸ್ ಜೊತೆ ಸ್ಪೀಕರ್ ಒಪ್ಪಂದ ಮಾಡಿಕೊಂಡ ರೀತಿ ಕಾಣಿಸುತ್ತಿದೆ.ಮೀಸಲಾತಿ ವಿಚಾರವನ್ನು ಇಲ್ಲಿಗೇ ಬಿಡಲ್ಲ.ಶಾಸಕರ ಅಮಾನತು ಬಗ್ಗೆ ಬೆಳಗ್ಗೆ ನಾನು ಸ್ಪೀಕರ್ ಜೊತೆ ಮಾತಾಡಿದ್ದೇನೆ. ರಂಜಾನ್ ಬಳಿಕ ಬರುತ್ತೇನೆ ಎಂದು ಅವರು ಹೇಳಿದ್ದಾರೆ. ಬಳಿಕ ಸ್ಪೀಕರ್ ಜೊತೆ ಚರ್ಚೆ ಮಾಡುತ್ತೇನೆ.
ಇನ್ನು ಅಮಾನತು ಕುರಿತ ಸ್ಪೀಕರ್ ನಿರ್ಧಾರ ಹಿಟ್ಲರ್ ಸಂಸ್ಕೃತಿ ಎಂದ ಅವರು ಸ್ಪೀಕರ್ ಪ್ರಚೋದನೆಯಿಂದ ಈ ಘಟನೆ ಆಗಿದೆ.ಸ್ಪೀಕರ್ ಮತ್ತು ಸರ್ಕಾರ ಒಡಂಬಡಿಕೆ ಮಾಡಿಕೊಂಡು ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುವ ತೀರ್ಮಾನ.ಮೀಸಲಾತಿ ವಿಚಾರದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಲು ತೀರ್ಮಾನ ಮಾಡುತ್ತೇವೆ.ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೇವೇಗೌಡರು ಮೀಸಲಾತಿ ಕೊಟ್ಟವರು.ಆಗ ಅವರು ನಮ್ಮ ಮೈತ್ರಿ ಆಗಿರಲಿಲ್ಲ.ದೇವೇಗೌಡರು ಸಹ ಈಗ ಈ ವಿಚಾರದಲ್ಲಿ ಹೋರಾಟ ಮಾಡಬೇಕು. ಹಿಂದೆ ವಿಧಾನ ಪರಿಷತ್ ನಲ್ಲಿ ಧರ್ಮೇಗೌಡರು ಡೆಪ್ಯುಟಿ ಸ್ಪೀಕರ್ ಆಗಿದ್ದಾಗ ಕಾಂಗ್ರೆಸ್ ನವರು ಹೇಗೆ ನಡೆದುಕೊಂಡಿದ್ದರು ಅಂತ ಗೊತ್ತಿದೆ.ಆಗ ಯಾರನ್ನೂ ಹೀಗೆ ಆರು ತಿಂಗಳ ಕಾಲ ಅಮಾನತು ಮಾಡಿರಲಿಲ್ಲ ಎಂದಿದ್ದಾರೆ,
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ವಿಚಾರದ ಬಗ್ಗೆ ಮಾತನಾಡುತ್ತಾ ಸರ್ಕಾರ ಮುಸಲ್ಮಾನರಿಗೆ 4% ಮೀಸಲಾತಿ ನೀಡುವ ನಿರ್ಧಾರ ಕೈಗೊಂಡು ಹಿಂದೂ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸಿದ್ದರ ವಿರುದ್ಧ ಬಿಜೆಪಿ -ಜೆಡಿಎಸ್ ಹೋರಾಟ ಮಾಡಿತ್ತು. ಸ್ಪೀಕರ್ ಏಕಪಕ್ಷೀಯವಾಗಿ ನಿರ್ಧಾರ ಮಾಡಿ ಅಮಾನತು ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ತೆಗೆದುಕೊಂಡಿರುವ ನಿರ್ಧಾರ ಸರಿಯೇ?. ನಮ್ಮ ಸಂವಿಧಾನದಲ್ಲಿ ಧರ್ಮಾಧಾರಿತ ಯಾವುದೇ ಮೀಸಲಾತಿ ಸಾಧ್ಯವಿಲ್ಲ.ದೇಶದಲ್ಲಿ ಲವ್ ಜಿಹಾದ್ ಗೆ ಬಲಿಯಾಗುತ್ತಿರುವುದು ಹಿಂದೂ ಹೆಣ್ಣು ಮಕ್ಕಳು. ಅಪಮಾನ ಆಗುತ್ತಿರುವುದು ಹಿಂದೂಗಳಿಗೆ.ಹಿಂದೂ ಹೆಣ್ಣುಮಕ್ಕಳಿಗೆ ಹೊರದೇಶಕ್ಕೆ ಹೋಗುವ ಕನಸು ಇರಲ್ವಾ?. ಹಿಂದೂ ಹೆಣ್ಣುಮಕ್ಕಳಲ್ಲಿ ಬಡವರು ಇಲ್ವಾ?.ಇದಕ್ಕಿಂತ ಕಾನೂನು ಬಾಹಿರವಾಗಿ ಒಬ್ಬ ಸಿಎಂ ಯೋಚಿಸಲು ಸಾಧ್ಯವಿಲ್ಲ. ನಿನ್ನೆ ಸ್ಪೀಕರ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎಂದ್ರ.
ಮುಸ್ಲಿಮರಿಗೆ 4% ಮೀಸಲಾತಿ ಸಂವಿಧಾನ ವಿರೋಧಿ ನಡೆ ಅಲ್ಲವೇ?. ಇದನ್ನು ನೋಡಿಕೊಂಡು ನಾವು ಸದನದಲ್ಲಿ ಸುಮ್ಮನೆ ಕೂರಬೇಕಾ?. ಸುಪ್ರೀಂ ಕೋರ್ಟ್, ಬೇರೆ ರಾಜ್ಯಗಳ ಹೈಕೋರ್ಟ್ ಗಳು ಕೂಡಾ ಧರ್ಮಾಧಾರಿತ ಮೀಸಲಾತಿ ಬಗ್ಗೆ ತೀರ್ಪು ನೀಡಿವೆ. ಇದು ಯಾವುದು ಕೂಡಾ ರಾಜ್ಯದ ಸಿಎಂಗೆ ತಿಳಿದಿಲ್ಲ ಅಂತಾ ಅಲ್ಲ. ಈ ಎಲ್ಲಾ ಮಾಹಿತಿಗಳೂ ಅವರಿಗೆ ಗೊತ್ತಿದೆ.ಇದು ಅಸಾಂವಿಧಾನಿಕ ಅಂತಾ ಕೂಡಾ ಅವರಿಗೆ ಗೊತ್ತಿದೆ. ಗೊತ್ತಿದ್ದೂ ಕೂಡಾ ಹಿಂದೂಗಳ ಮೇಲೆ ದೌರ್ಜನ್ಯ ರೀತಿಯ ಆಡಳಿತ ಅಕ್ಷಮ್ಯ ಅಪರಾಧ.ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಇತರ ಧರ್ಮದವರನ್ನು ಅವಮಾನಿಸುವ ನಡೆಯನ್ನು ಬಿಜೆಪಿ ವಿರೋಧಿಸುತ್ತದೆ. ಅತೀ ಶೀಘ್ರದಲ್ಲೇ ನಮ್ಮ ಹೋರಾಟದ ಸ್ವರೂಪ ಘೋಷಿಸುತ್ತೇವೆ ಎಂದಿದ್ದಾರೆ.
ಸರ್ಕಾರದ ಅಧಿಕಾರದ ಮದವನ್ನು ಮೆಟ್ಟಿ ನಿಲ್ಲುವ ಹೋರಾಟವನ್ನು ಬಿಜೆಪಿ ಬೀದಿಗಿಳಿದು ಮಾಡುತ್ತದೆ. ಮೀಸಲಾತಿ ವಿರುದ್ಧ ಹಗಲು ರಾತ್ರಿ ಹೋರಾಟದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಿನ್ನೆ ಸದನದಲ್ಲಿ ನಮ್ಮ ರಕ್ಷಣೆಗೆ ಬರುವ ಕರ್ತವ್ಯ ಸ್ಪೀಕರ್ ಅವರದಾಗಿತ್ತು. ಅಮಾನತಾದ ಶಾಸಕರು ವಿಧಾನಸಭೆ ಲಾಬಿಗೆ ಬರುವಂತಿಲ್ಲ ಎಂದು ಅದೇಶ ಮಾಡಿದ್ದಾರೆ.ಹಾಗಾದರೆ ಅವರು ಟೆರರಿಸ್ಟ್ ಗಳಾ?, ನಕ್ಸಲರಾ?. ಜನರು ಅವರನ್ನು ಆರಿಸಿ ಕಳುಹಿಸಿಲ್ವಾ?. ಇವರು ಯಾರು ಅದನ್ನು ಹೇಳುವುದಕ್ಕೆ?.ಇದಕ್ಕಿಂತ ಸಾಂವಿಧಾನಿಕವಾಗಿ ಒಬ್ಬ ಸ್ಪೀಕರ್ ನಡೆದುಕೊಳ್ಳಲು ಸಾಧ್ಯವೇ?.ಈ ಸರ್ಕಾರದ ಯೋಗ್ಯತೆಗೆ ಅಭಿವೃದ್ಧಿಗೆ ಎರಡು ಕಾಸು ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.ಸ್ಪೀಕರ್ ಆದೇಶ ಅಸಾಂವಿಧಾನಿಕ, ಕಾನೂನು ಬಾಹಿರ, ಏಕಪಕ್ಷೀಯ. ಸ್ಪೀಕರ್ ನಿನ್ನೆಯ ಆದೇಶವನ್ನು ಹಿಂಪಡೆಯಬೇಕು. ನಿಮ್ಮ ಆದೇಶ ಕೇವಲ ಶಾಸಕರಿಗೆ ಮಾತ್ರವಲ್ಲ, ಕ್ಷೇತ್ರದ ಮತದಾರರಿಗೂ ಅವಮಾನ.ಆರು ತಿಂಗಳ ಕಾಲ ಅವರು ಕ್ಷೇತ್ರದಲ್ಲಿ ಏನೂ ಕೆಲಸ ಮಾಡಲು ಸಾಧ್ಯವಾಗಲ್ಲ. ಒತ್ತಡಕ್ಕೆ ಮಣಿದು ಸ್ಪೀಕರ್ ಈ ರೀತಿ ಕಾನೂನು ಬಾಹಿರ ಆದೇಶ ಮಾಡಿದ್ದಾರೆ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಸ್ಪೀಕರ್ ಆದೇಶವನ್ನು ಹಿಂಪಡೆಯಬೇಕು.ಅಲ್ಪಸಂಖ್ಯಾತರ ಓಲೈಕೆಯ ಮೂಲಕ ಹಿಂದೂಗಳಿಗೆ ಸರ್ಕಾರ ಮಾಡುತ್ತಿರುವ ಅಪಮಾನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.