ಬೆಂಗಳೂರು; ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ ಎಂದು ಬಿಜೆಪಿಯವರ ವಿರುದ್ಧ ಮಾಜಿ ಸಚಿವ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಇನ್ನೇನು ಕೆಲಸ ಇದೆ ಹೇಳಿ?. ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ.ಸಿದ್ದರಾಮಯ್ಯ ಅವರ ನಲವತ್ತು ವರ್ಷದ ರಾಜಕೀಯದಲ್ಲಿ ಅವರು ಒಂದೇ ಒಂದು ಕಪ್ಪು ಚುಕ್ಕೆ ಹೊಂದಿಲ್ಲ. ಹಾಗಿದ್ರೂ ಯಾಕೆ ಅವರ ರಾಜೀನಾಮೆ ಕೇಳಬೇಕು. ಬಿಜೆಪಿಯವರು ಮೊದಲು ಯತ್ನಾಳ್ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ.ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಮುಡಾದಿಂದ ಸಿದ್ದರಾಮಯ್ಯ ಮಾತ್ರ ಸೈಟು ಪಡೆದಿದ್ದಾರಾ?ಬಿಜೆಪಿಯವರು ಯಾರೂ ತಗೊಂಡಿಲ್ವಾ?ಬಿಜೆಪಿಯ ಶಾಸಕರು, ಮುಖಂಡರು ಯಾರೂ ತಗೊಂಡಿಲ್ವಾ?ಸಿದ್ದರಾಮಯ್ಯ ಕಾನೂನು ವ್ಯಾಪ್ತಿಯಲ್ಲೇ ಬದಲಿ ನಿವೇಶನ ಪಡೆದಿದ್ದಾರೆ.ಬಿಜೆಪಿ ಕಾಲದಲ್ಲಿ ಸೈಟು ಕೊಟ್ಟಿರೋದು, ಆಗಲೇ ಪರಿಶೀಲಿಸಿ ವಾಪಸ್ ಪಡ್ಕೋಬಹುದಿತ್ತಲ್ಲಾ ಎಂದು ಎಸ್ ಟಿ ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರ ರಾಜೀನಾಮೆ ಬಿಟ್ಟು ಅಭಿವೃದ್ಧಿ ಬಗ್ಗೆ ಬಿಜೆಪಿ ಯಾವತ್ತಾದರೂ ಮಾತನಾಡಿದ್ದಾರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ.50:50 ಅನುಪಾತದಲ್ಲಿ ಸೈಟುಗಳನ್ನು ಮುಡಾದಿಂದ ಸಿಎಂ ಧರ್ಮಪತ್ನಿ ಗೆ ಒಬ್ಬರಿಗೇ ಕೊಟ್ಟಿಲ್ಲ. ಅದನ್ನು ನೂರಾರು ಜನಕ್ಕೆ ಆ ರೀತಿ ಕೊಟ್ಟಿದ್ದಾರೆ. ಮುಡಾದಲ್ಲಿ ಸಾವಿರಾರು ಸೈಟುಗಳನ್ನು ಕೊಟ್ಟಿದ್ದಾರೆ.ಕಾನೂನು ವಿರುದ್ಧವಾಗಿ ಇವರೊಬ್ಬರಿಗೇ ಕೊಟ್ಟಿದ್ದಿದ್ರೆ ಟಾರ್ಗೆಟ್ ಮಾಡಬಹುದಿತ್ತು. ಪ್ರತೀ ಬೋರ್ಡ್ ಸಭೆಯಲ್ಲಿ ಸರ್ಕಾರ ಆದೇಶ ಆಗಿದೆ ಕೊಟ್ಟಿದ್ದಾರೆ.ಈ ಸೈಟುಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಆರೋಪಿಸಿದ್ದಾರೆ.
ತಮ್ಮ ಯಜಮಾನರಿಗೆ ಕಿರಿಕಿರಿ ಆಗ್ತಿದೆ ಅಂತ ಈ ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ.ಇದು ತಡವಾಗಿರಬಹುದು ,ಆದರೂ ಪರವಾಗಿಲ್ಲ ವಾಪಸ್ ಕೊಟ್ಟಿದ್ದಾರೆ.ಕಾನೂನು ಬಾಹಿರವಾಗಿದ್ದರೆ ಅವತ್ತೇ ಸರ್ಕಾರ ರಿಜೆಕ್ಟ್ ಮಾಡಬಹುದಿತ್ತು.ಬಿಜೆಪಿ ಸರ್ಕಾರ ಇದ್ದಾಗ ಸೈಟ್ ಕೊಟ್ಟಿದ್ದು ಸಿದ್ದರಾಮಯ್ಯ ಅವಾಗ ಸಿಎಂ ಆಗಿರಲಿಲ್ಲ ಕಾಂಗ್ರೆಸ್ ಸರ್ಕಾರ ಇರಲಿಲ್ಲ.ಬಿಜೆಪಿಯವರಿಗೆ ಬೇರೆ ಏನು ಕೆಲಸ ಇಲ್ಲ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ.ಸಿದ್ದರಾಮಯ್ಯನವರ ರಾಜಕೀಯದಲ್ಲಿ ಒಂದೇ ಒಂದು ಕಳಂಕ ಇಲ್ಲ.ಬೇಕು ಅಂತಾನೇ ಸಿದ್ದರಾಮಯ್ಯನವರಿಗೆ ಕಳಂಕ ಮತ್ತು ಅವರ ಧರ್ಮಪತ್ನಿಗೆ ಕಳಂಕ ತರಲು ಇವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.ಸಿದ್ದರಾಮಯ್ಯನವರ ರಾಜೀನಾಮೆ ಬಿಟ್ಟು ಅಭಿವೃದ್ಧಿ ಬಗ್ಗೆ ಬಿಜೆಪಿ ಯಾವತ್ತಾದರೂ ಮಾತನಾಡಿದ್ದಾರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಎಲ್ಲಾ 14 ಸೈಟುಗಳನ್ನು ವಾಪಾಸ್ ಕೊಡೋದಾಗಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಮುಡಾ ಹಗರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ದಯವಿಟ್ಟು ನಿಮ್ಮ ರಾಜಕೀಯ ದ್ವೇಷಕ್ಕೆ ರಾಜಕೀಯದಿಂದ ದೂರವಿರುವಂತ ಕುಟುಂಬದ ಹೆಣ್ಣುಮಕ್ಕಳನ್ನು ವಿವಾದದ ಕಣಕ್ಕೆ ತಂದು ಗೌರವ, ಘನತೆ ಹಾಳು ಮಾಡಬೇಡಿ. ನಾನು ಪಡೆದಿರುವಂತ ಮುಡಾದ 14 ಸೈಟುಗಳನ್ನು ವಾಪಾಸ್ ಕೊಡಲು ನಿರ್ಧರಿಸಿದ್ದೇನೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಘೋಷಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು ಎಂದಿದ್ದಾರೆ.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮುಡಾಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ನಾನು ಯಾವತ್ತೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿಲ್ಲ. ಯಾವುದೇ ಕಾರಣಕ್ಕೂ ನನ್ನಿಂದಾಗಿ ತನ್ನ ಪತಿಯ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ಬರಬಾರದು ಎಂದು ಬಹಳ ಎಚ್ಚರಿಕೆಯಿಂದ ನಡೆದುಕೊಂಡಿದ್ದೇನೆ. ನನ್ನ ಪತಿಗೆ ರಾಜ್ಯದ ಜನತೆ ತೋರಿಸುವ ಪ್ರೀತಿ, ಅಭಿಮಾನವನ್ನು ದೂರದಿಂದಲೇ ನೋಡಿ ನಾನು ಸಂತೋಷ ಹಾಗೂ ಹೆಮ್ಮೆಪಟ್ಟವಳು. ಹೀಗಿರುವಾಗ
ಮುಡಾ ನಿವೇಶನಕ್ಕೆ ಸಂಬಂಧಪಟ್ಟಂತೆ ಕೇಳಿ ಬರುತ್ತಿರುವ ಆರೋಪಗಳು ನನಗೆ ತುಂಬಾ ನೋವು ಉಂಟು ಮಾಡಿದೆ. ನನ್ನ ಸ್ವಂತ ಸಹೋದರ ಅರಿಶಿನ – ಕುಂಕುಮದ ಭಾಗವಾಗಿ ಕೊಟ್ಟ ಜಮೀನು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಇದರಿಂದ ನನ್ನ ಪತಿ ಸುಖಾಸುಮ್ಮನೆ ಆರೋಪಗಳನ್ನು ಎದುರಿಸುವಂತಾಗುತ್ತೆ ಅಂತಾ ನಾನು ಊಹೆ ಕೂಡ ಮಾಡಿರಲಿಲ್ಲ.
ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದ ಅವರಿಂದ ನಾನು ಏನನ್ನೂ ನನಗಾಗಲೀ ಹಾಗೂ ನನ್ನ ಕುಟುಂಬಕ್ಕಾಗಲೀ ಬಯಸಿಲ್ಲ. ಹಾಗಾಗಿ ಈ ನಿವೇಶನಗಳು ತೃಣಕ್ಕೆ ಸಮ. ಹಾಗಾಗಿ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿರುವ ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂಬುದಾಗಿ ಪಾರ್ವತಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಇನ್ನು ನಾನು ಈ ವಿಚಾರದಲ್ಲಿ ಪತಿಯವರ ಅಭಿಪ್ರಾಯ ಏನಿದೆ ಅನ್ನೋದು ನನಗೆ ಗೊತ್ತಿಲ್ಲ. ಈ ಬಗ್ಗೆ ನನ್ನ ಮಗ ಹಾಗೂ ನನ್ನ ಕುಟುಂಬದ ಇತರ ಸದಸ್ಯರ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಇದು ನಾನು ಮನಸಾಕ್ಷಿಗೆ ಅನುಗುಣವಾಗಿ ತೆಗೆದುಕೊಂಡಿರುವ ನಿರ್ಧಾರ ಎಂದಿದ್ದಾರೆ. ಇನ್ನು ಈಗ ಯಾಕೆ ನೀವು ಈ ನಿರ್ಧಾರಕ್ಕೆ ಬಂದಿದ್ದೀರಿ? ಅಂತಾ ಯಾರದಾರೂ ಪ್ರಶ್ನಿಸಬಹುದು. ಆದರೆ ನಾನು ಈ ಆರೋಪ ಕೇಳಿ ಬಂದ ದಿನವೇ ಸೈಟುಗಳನ್ನು ವಾಪಾಸ್ ಕೊಡುವ ನಿರ್ಧಾರ ಮಾಡಿದ್ದೆ. ಈ ನಿವೇಶನ ಹಂಚಿಕೆ ವಿಚಾರವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಪಶುವಾಗಬಾರದು ಎಂದು ಕೆಲವು ಹಿತೈಷಿಗಳು ನನಗೆ ಹೇಳಿದಕ್ಕೆ ನಾನು ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ ಅವರು ಹೇಳಿದ್ದಾರೆ.
ಅಂದ್ಹಾಗೆ ನನ್ನ ಈ ನಿರ್ಧಾರ ಅಚಲವಾಗೆದೆ. ಈ ನಿವೇಶನಗಳನ್ನು ವಾಪಸು ಕೊಡೋದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸುತ್ತೇನೆ. ಕೊನೆಯದಾಗಿ, ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮಾಧ್ಯಮ ಕ್ಷೇತ್ರದ ಬಂಧುಗಳಲ್ಲಿ ನನ್ನವಿನಂತಿ ಎಂದರೆ ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ ಎಂದು ಭಾವನಾತ್ಮಕ ಪತ್ರದ ಮೂಲಕ ಮನವಿ ಮಾಡಿದ್ದಾರೆ.