ಬೆಂಗಳೂರು: ಶಿಸ್ತು ಸಮಿತಿ ಭೇಟಿ ಮಾಡಿದ ಬಳಿಕ ಯತ್ನಾಳ್ ಮಾತಿನ ರೀತಿ ಕೂಡಾ ಸ್ವಲ್ಪ ಬದಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ನವ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾನು ನಡ್ಡಾ ಅವರಿಗೆ ಸಮಯ ಕೇಳಿದ್ದೆ. ಹಿಂದಿನ ದಿನ ರಾತ್ರಿ 11.30 ಕ್ಕೆ ಬೆಳಗ್ಗೆ 10.30 ಕ್ಕೆ ಬರುವಂತೆ ಮೆಸೇಜ್ ಬಂದಿತ್ತು. ಎಲ್ಲರೂ ಒಟ್ಟಾಗಿ ಹೋಗಬೇಕು ಅಂತಾ ಹೇಳಿ ಬಂದಿದ್ದೇನೆ. ಅದಕ್ಕೆ ನನ್ನ ಸಲಹೆಯನ್ನೂ ಹೇಳಿದ್ದೇನೆ. ಮರು ದಿನ ಮತ್ತೆ ಕೂಡಾ ನಡ್ಡಾ ಭೇಟಿ ಮಾಡಿದ್ದೇನೆ.ಇನ್ನೊಂದು ಸಲ ಬನ್ನಿ ವಿಸ್ತ್ರತ ವಾಗಿ ಮಾತಾಡೋಣ ಎಂದಿದ್ದಾರೆ. ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಎಂಬುದು ನಮ್ಮ ಅಭಿಪ್ರಾಯ.ಯಡಿಯೂರಪ್ಪ ಕೂಡಾ ಅದನ್ನೇ ಹೇಳಿದ್ದಾರೆ. ಯಡಿಯೂರಪ್ಪನವರು ಹೇಳಿದ ಮೇಲೆ ಮುಗಿಯಿತು ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಶಿಸ್ತು ಸಮಿತಿ ಭೇಟಿ ಮಾಡಿದ ಬಳಿಕ ಯತ್ನಾಳ್ ಮಾತಿನ ರೀತಿ ಕೂಡಾ ಸ್ವಲ್ಪ ಬದಲಾಗಿದೆ. ನಾನು ಮತ್ತೊಂದು ಸಲ ದೆಹಲಿಗೆ ಹೋಗಬೇಕಾಗಿ ಬರಬಹುದು. ಸದನದ ಒಳಗೆ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತೇನೆ. ಯತ್ನಾಳ್ ಕೂಡಾ ಸದನದಲ್ಲಿ ಪಕ್ಷದೊಂದಿಗೆ ನಿಲ್ಲುತ್ತಾರೆ ಎಂದಿದ್ದಾರೆ..
ಇನ್ನು ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ಪಕ್ಷದ ಜಗಳಕ್ಕೆ ಮನೆಯೊಂದು ಮೂರು ಬಾಗಿಲು ಅಂತಾ ಇದ್ದರು. ಕಾಂಗ್ರೆಸ್ ನದ್ದು ಊರು ಬಾಗಿಲು ಆಗಿದೆ. ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಅಂದಿದ್ದಾರೆ. ಪರಮೇಶ್ವರ್ ನಾವು ಏನಕ್ಕೆ ಇರುವುದು ಎಂದು ಪ್ರಶ್ನೆ ಮಾಡಿದ್ದಾರೆ.ಪರಮೇಶ್ವರ್ ರನ್ನು ಸಿದ್ದರಾಮಯ್ಯ ಕಳೆದ ಬಾರಿ ಸೋಲಿಸಿದರು. ಪರಮೇಶ್ವರ್ ಏಳು ವರ್ಷ ಕೆಪಿಸಿಸಿ ಅಧ್ಯಕ್ಷ. ಡಿ.ಕೆ. ಶಿವಕುಮಾರ್ ಬರೀ ಎರಡು ವರ್ಷ ಆಗಿದ್ದು.ಏಳು ವರ್ಷ ಅಧ್ಯಕ್ಷ ಆದವರಿಗೆ ಸಿಎಂ ಸ್ಥಾನ ನೀಡಬೇಕೊ ಅಥವಾ ಎರಡು ವರ್ಷ ಆದವರಿಗೆ ಕೊಡಬೇಕೋ? ಎಂದು ಪ್ರಶ್ನೆ ಮಾಡಿದ್ದಾರೆ.
ವಿಜಯೇಂದ್ರ ನಾಯಕತ್ವದ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ದಿನ ಬೆಳಗಾದರೆ ಯತ್ನಾಳ್ ಹಾಗೂ ಇತರರ ಬಗ್ಗೆ ಮಾತಾಡಲು ನಾನು ಸಿದ್ದನಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೋರಾಟ ಮಾಡಲು ಹಲವು ವಿಚಾರಗಳಿವೆ. ಬೆಳಗಾವಿ ಅಧಿವೇಶನದಲ್ಲಿ ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣ, ರೈತರ ಬೆಳೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಿದೆ. ನಾನು ಅದರತ್ತ ಮಾತ್ರ ಗಮನ ಹರಿಸುತ್ತೇನೆ ಎಂದಿದ್ದಾರೆ.
ಬಿಎಸ್ ವೈ ಕುಟುಂಬಕ್ಕೆ ಸಮಾವೇಶದ ಮೂಲಕ ಟಕ್ಕರ್ ಕೊಡಲು ಯತ್ನಾಳ್ ಟೀಂ ಸಿದ್ಧತೆ
ಇತ್ತ ಬಿಜೆಪಿಯಲ್ಲಿ ಎಲ್ಲವೂ ಸರಿ ಅಂತಾ ಬಿಜೆಪಿ ನಾಯಕರು ಹೇಳ್ತಿದ್ರೆ ಅತ್ತ ಬಿಎಸ್ ವೈ ಕುಟುಂಬಕ್ಕೆ ಸಮಾವೇಶದ ಮೂಲಕ ಟಕ್ಕರ್ ಕೊಡಲು ಯತ್ನಾಳ್ ಟೀಂ ಸಿದ್ಧತೆ ಮಾಡಿಕೊಂಡಿದೆ.ಅಧಿವೇಶನದ ಬಳಿಕ ಶಿವಮೊಗ್ಗದಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಂಡಿದೆ. ಸೊರಬ, ಶಿಕಾರಿಪುರದಲ್ಲಿ ಸಮಾವೇಶಕ್ಕೆ ಯತ್ನಾಳ್ ಟೀಂ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಶಿಕಾರಿಪುರದಲ್ಲಿ ಲಿಂಗಾಯತ ಸಮಾವೇಶ ನಡೆಸಲು ಚಿಂತನೆ ನಡೆಸಿದೆ. ಸಾದರ,ಪಂಚಮಸಾಲಿ ಲಿಂಗಾಯತ ಸಮಾವೇಶ ನಡೆಸಲು ಪ್ಲಾನ್ ಮಾಡಿದೆ. ಈ ಮೂಲಕ ಬಿಎಸ್ ವೈ ಕುಟುಂಬಕ್ಕೆ ಸಡ್ಡು ಹೊಡೆಯಲು ಪ್ಲಾನ್ ಮಾಡಿದೆ. ಇನ್ನು ನವದೆಹಲಿಯಲ್ಲಿ 4 ದಿನಗಳಿಂದ ಬೀಡು ಬಿಟ್ಟಿದ್ದ ಬಸನಗೌಡ ಯತ್ನಾಳ್ ದೆಹಲಿಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಯತ್ನಾಳ್ ದೆಹಲಿಯಲ್ಲಿದ್ದರು.