ಬೆಂಗಳೂರು; ಬೊಮ್ಮಾಯಿ ಅವರು ಉಳಿತಾಯ ಬಜೆಟ್ ಮಾಡಿದ್ರು, ನೀವು ಖೋತಾ ಬಜೆಟ್ ಮಾಡಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಪಕ್ಷ ನಾಯಕ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಅವರಪ್ಪನ ಮನೆ ಆಸ್ತಿ ಆಗಿದ್ರೆ ಅಭಿವೃದ್ಧಿ ಹಣ ಕೇಳಲ್ಲ. ನಾವೂ ಕೂಡ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಕೋಟ್ಯಾಂತರ ಜನ ತೆರಿಗೆ ಕಟ್ತಿದ್ದಾರೆ. ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ರು. ಇವರು ಎಷ್ಟು ಬಿಡುಗಡೆ ಮಾಡಿದ್ದಾರೆ. ಇವರದ್ದು ಪಾಪರ್ ಸರ್ಕಾರ. ಅಲ್ಲ ಅಂತಾದ್ರೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಸಾಲ ಬಿಟ್ಟು ಹೋಗಿದ್ದಾರೆ ಅಂತಾರೆ. 60 ವರ್ಷದಲ್ಲಿ ಕಾಂಗ್ರೆಸ್ ಎಷ್ಟು ಸಾಲ ಬಿಟ್ಟಿದೆ ಹೇಳಿ.ಬಿಜೆಪಿ 9 ವರ್ಷದಲ್ಲಿ ಎಷ್ಟು ಸಾಲ ಮಾಡಿದೆ ನಾವು ಬಿಡುಗಡೆ ಮಾಡ್ತೀವಿ. 2009ರಲ್ಲಿ ನಾವು ಅಧಿಕಾರಕ್ಕೆ ಬಂದಿದ್ದು. ನೀವು ಲಾಭ ಮಾಡಿ ಹೋಗಿದ್ರೆ, ನಾವು ಅದನ್ನ ಮುಂದುವರೆಸ್ತಿದ್ದೋ. ಬೊಮ್ಮಾಯಿ ಅವರು ಉಳಿತಾಯ ಬಜೆಟ್ ಮಾಡಿದ್ರು, ನೀವು ಖೋತಾ ಬಜೆಟ್ ಮಾಡಿದ್ದೀರಿ.ನೀವು ತೆರಿಗೆ ಹಾಕಿ ಬಜೆಟ್ ಮಾಡಿದ್ದೀರಿ, ಬೊಮ್ಮಾಯಿ ತೆರಿಗೆ ಇಲ್ಲದೆ ಬಜೆಟ್ ಮಾಡಿದ್ದಾರೆ ಎಂದರು.
ಒದ್ದು ಅಧಿಕಾರ ತಗೋತೀನಿ ಎಂದ ಡಿಕೆಶಿ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಕೆಶಿ ಅವರ ಜೀವನ ಚರಿತ್ರೆ ನೋಡಿದ್ದೇವೆ. ಎಸ್ಎಂಕೆ ಅವಧಿಯಲ್ಲಿ ಸಚಿವ ಸ್ಥಾನ ಕೊಡದಾಗ ಅವರ ಮನೆ ಬಾಗಿಲು ಒದ್ದೆ ಅಂತ ಹೇಳಿದ್ರು. ಅದು ನಮಗೆ ಹೇಳಿದ್ದಲ್ಲ, ಅವರ ಅಕ್ಕಪಕ್ಕದಲ್ಲಿ ಇದ್ದವರಿಗೆ. ನೀವ್ಯಾವಾಗ ಕಿತ್ಕೋತೀರಿ ಅಂದಾಗ ಪಳಪಳ ಹೊಳೆಯುವ ಹಲ್ಲು ಬಿಟ್ರು. ಸುರ್ಜೆವಾಲ ಸೂಜಿದಾರ ಹಾಕಿ ಹೊಲೆದಿದ್ರು.ಫ್ಲೈಟ್ ಹತ್ತುತ್ತಿದ್ದಂತೆ ಎಲ್ಲಾ ಹೊಲಿಗೆ ಬಿಚ್ಚಿಹೋಯ್ತು.ಬೆಳಗಾವಿಯಲ್ಲಿ ಜಾರಕಿಹೊಳಿ ಇರೋದ್ರಿಂದಲೇ ನಾವು ಇಲ್ಲಿದ್ದೇವೆ ಅಂತ ಹೇಳಿದ್ದಾರೆ. ಅಂದ್ರೆ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂತು ಗೊತ್ತಲ್ಲಾ.? ಎಂದು ಪ್ರಶ್ನೆ ಮಾಡಿದ್ದಾರೆ.
ಮೆಟ್ರೋ ದರ ಹೆಚ್ಚಿಸೋ ಹುನ್ನಾರ ನಡೆಯುತ್ತಿದೆ. ರಾಜ್ಯದ ಜನರಿಗೆ ಸಿದ್ದರಾಮಯ್ಯ ಅವರು ಬಿಸಿ ಮುಟ್ಟಿಸ್ತಿದ್ದಾರೆ. ಅಣ್ಣಾ ನಿಮಗೆ ಕೈ ಮುಗೀತೀವಿ, ದಿನಾ ಒಂದು ಚುಚ್ಚಬೇಡಿ. ದಿನಾ ಚುಚ್ಚಿಸಿಕೊಂಡು ಗಾಯ ಆಗ್ತಿದೆ. ಏನೇ ಹೆಚ್ಚಿಸಿದ್ರೂ ಒಂದೇ ಸರಿ ಹೆಚ್ಚಿಸಿ. ದಿನಾ ಚುಚ್ಚಿ ಚುಚ್ಚಿ ಸಾಯಿಸಬೇಡಿ. ಇನ್ನೂ ಹಾಲು, ವಿದ್ಯುತ್ ದರ ಹೆಚ್ಚಿಗೆ ಬಾಕಿ ಇದೆ. ಬಜೆಟ್ನಲ್ಲಿ ಹಲವು ತೆರಿಗೆ ದರ ಹೆಚ್ಚಳ ಮಾಡ್ತಿದೆ ಎಂದರು. ರಾಜ್ಯಾಧ್ಯಕ್ಷ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಗೊತ್ತಿರುವ ಪ್ರಕಾರ ಈಗ ಚುನಾವಣೆ ಇಲ್ಲ. ಅಧ್ಯಕ್ಷರ ಚುನಾವಣೆ ಘೋಷಣೆಯಾಗಿಲ್ಲ. ಅವರು ಮಾಡಲು ಪ್ರಾವಿಷನ್ ಆಗಬೇಕಾದ್ರೆ, ನೋಟಿಫಿಕೇಷನ್ ಆಗಬೇಕು. ನಾವಿನ್ನು ತಾಲ್ಲೂಕು ಚುನಾವಣೆಯಲ್ಲಿ ಇದ್ದೇವೆ. ರಾಜ್ಯಾಧ್ಯಕ್ಷ ಚುನಾವಣೆ ನಡೆಯುವಾಗ ಹೇಳ್ತೀನಿ ಎಂದರು.
ಬಂಡಾಯ ನಾಯಕರ ಸಭೆಗಳ ಬಗ್ಗೆ ಮಾತನಾಡಿ ಆ ಬಗ್ಗೆ ಪಕ್ಷ ನಿರ್ಧಾರ ಮಾಡಲಿದೆ. ಯಡಿಯೂರಪ್ಪ, ಅನಂತ್ ಕುಮಾರ್, ನಾನು ಎಲ್ಲರೂ ಪಕ್ಷ ಕಟ್ಟಿದ್ದೆವು.ಪಕ್ಷದಲ್ಲಿ ಏನೇ ಗೊಂದಲ ಇದ್ರೂ, ಹೈಕಮಾಂಡ್ ಎಲ್ಲವನ್ನೂ ಗಮನಿಸಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದ್ರು.