ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾತಿ ಗಣತಿ ವರದಿ ಸ್ವೀಕಾರ ಹಿನ್ನೆಲೆ, ಬೆಂಗಳೂರಿನಲ್ಲಿ ನೊಳಂಬ ಲಿಂಗಾಯತ ಸಂಘದಿಂದ ಸುದ್ದಿ ಗೋಷ್ಠಿ ನಡೆಯಿತು. ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಮಾತನಾಡಿ ಹಿಂದುಳಿದ ಆಯೋಗದ ವರದಿಯಲ್ಲಿ ನೊಳಂಬ ಲಿಂಗಾಯತ ಜನಸಂಖ್ಯೆ 1 ಲಕ್ಷ 48 ಸಾವಿರ ಎಂದಿದೆ. 11 ಜಿಲ್ಲೆಯಲ್ಲಿ ನೊಳಂಬ ಸಮುದಾಯ ಇದೆ. ಯಾರನ್ನೂ ಭೇಟಿಯಾಗದೇ ಮನಸ್ಸಿಗೆ ಬಂದಂತೆ ಸಮೀಕ್ಷೆ ಮಾಡಲಾಗಿದೆ. 20 ಲಕ್ಷದ 63 ಸಾವಿರ ಜನಸಂಖ್ಯೆ ನೊಳಂಬ ಸಮುದಾಯದಲ್ಲಿದೆ. ಹೀಗಾಗಿ ವರದಿಯನ್ನು ವಿರೋಧಿಸುತ್ತೇವೆ. ಸಂಪುಟ ಸಭೆಯಲ್ಲಿ ನಮಗೆ ವ್ಯತಿರಿಕ್ತ ತೀರ್ಮಾನ ತೆಗೆದುಕೊಂಡರೆ ಖಂಡಿಸುತ್ತೇವೆ ಎಂದರು. ಕೆನೆ ಪದರದಲ್ಲಿ ಹಿಂದುಳಿದ ಸಮುದಾಯವನ್ನು ಅಳವಡಿಸಿಲ್ಲ. ಸಿಕ್ಕಿದ ಸಮುದಾಯಕ್ಕೇ ಸೌಲಭ್ಯ ಸಿಗುತ್ತಿದೆ. ಕೆನೆ ಪದರ ಉಪಯೋಗಿಸಿದರೆ ಎಲ್ಲರಿಗೂ ಅನುಕೂಲ ಆಗತ್ತದೆ. ವರದಿ ಜಾರಿಯಾದರೆ ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದ್ರು.
ಸಂಘದ ಮಾಜಿ ಅಧ್ಯಕ್ಷ ಎಸ್. ಆರ್. ಪಾಟೀಲ್ ಮಾತನಾಡಿ ಹಿಂದುಳಿದವರ ಸಮೀಕ್ಷೆ ಎಂಬ ಮುಸುಕು ಹಾಕಿ ದೊಡ್ಡ ಸಮುದಾಯವನ್ನು ಸಣ್ಣದಾಗಿ ತೋರಿಸಿದ್ದಾರೆ. 2ಎ ಗೆ ನೊಳಂಬರನ್ನು ಸೇರಿಸಲು ಆಯೋಗಕ್ಕೆ ಮನವಿ ಕೂಡಾ ಮಾಡಿದ್ದೆವು. ಈಗ ನಾವೆಲ್ಲಾ ಅದೃಶ್ಯವಾಗಿ ಹೋದೆವಾ?. ನಮ್ಮ ಜನಸಂಖ್ಯೆ ಎಷ್ಟಿದೆ ಎಂದು ಆಯೋಗಕ್ಕೆ ಹೇಳಿದ್ದೆವು. ರಾಜಕೀಯ ಪ್ರೇರಿತ ವರದಿ ಇದು. ವರದಿಯಂತೆ ಹೋದರೆ ಗ್ರಾ.ಪಂ. ಸದಸ್ಯ ಕೂಡ ಆಗಲು ಸಾಧ್ಯವಿಲ್ಲ. ವೀರಶೈವ ಮಹಾಸಭಾಕ್ಕೂ ಮಾಹಿತಿ ನೀಡಿದ್ದೇವೆ. ರಾಜಕಾರಣಿಗಳು ಯಾವುದೇ ಸಮುದಾಯ ನೆಚ್ಚಿ ರಾಜಕಾರಣ ಮಾಡಲ್ಲ. ನೊಳಂಬ ಸಮುದಾಯದಲ್ಲಿ ಇಬ್ಬರು ಶಾಸಕರಿದ್ದಾರೆ. ಲಿಂಗಾಯತ ಸಮುದಾಯದ ಜೊತೆ ನಾವು ಸೇರಿ ಹೋರಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ವ್ಯತಿರಿಕ್ತ ತೀರ್ಮಾನ ಬಂದರೆ ಉಗ್ರ ಹೋರಾಟ. ನೊಳಂಬ ಸಮುದಾಯದ ಆಂತರಿಕ ಸಮೀಕ್ಷೆ ಮಾಡಿದ್ದೇವೆ.1500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಾವಿದ್ದೇವೆ ಎಂದು ತಿಳಿಸಿದ್ರು,
ನೊಳಂಬ ಲಿಂಗಾಯತ ಸಂಘದ ಮುಖಂಡ ಎಸ್.ಎನ್. ನಾಗರಾಜ್ ಮಾತನಾಡಿ ಲಿಂಗಾಯತರಲ್ಲಿ 99 ಪಂಗಡಗಳಿವೆ. ಜನಗಣತಿ ಸಮಂಜಸ ಇಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ನಮ್ಮ ಶಾಸಕರಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಸಮುದಾಯದ ವ್ಯಕ್ತಿ ಆಯ್ಕೆಯಾಗುತ್ತಿದ್ದಾರೆ. ಕಾರಣಾಂತರದಿಂದ ಶಾಸಕರ ಸಂಖ್ಯೆ ಕಡಿಮೆ ಆಗಿದೆ. ಆದರೆ ಜನಸಂಖ್ಯೆ ಇಷ್ಟು ಕಡಿಮೆ ಆಗಿಲ್ಲ. ವೀರಶೈವ, ಲಿಂಗಾಯತರು ನಾವೆಲ್ಲರೂ ಒಂದೇ. ನಮ್ಮೊಳಗೆ ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಆದರೆ ಇಂತಹ ವಿಚಾರ ಬಂದಾಗ ನಾವೆಲ್ಲಾ ಒಂದೇ. ಒಕ್ಕಲಿಗ ಸಮುದಾಯ ಕೂಡಾ ಈಗ ಹೋರಾಟಕ್ಕೆ ಮುಂದಾಗಿದೆ. ಸಣ್ಣ ಸಣ್ಣ ಸಮುದಾಯದ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ ಎಂದರು.
ಯಾರನ್ನು ಓಲೈಕೆ ಮಾಡಲು ಹೊರಟಿದ್ದಾರೆ?. ಅಖಿಲ/ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋರಾಟಕ್ಕೆ ಕರೆ ಕೊಡುತ್ತದೆ. ಅದಕ್ಕೆ ನೊಳಂಬ ಸಮುದಾಯ ಕೂಡ ಬೆಂಬಲಿಸುತ್ತದೆ. ವರದಿ ರದ್ದಾಗುವವರೆಗೆ ಹೋರಾಟ ಆಗಲಿದೆ.ಸ್ವಾಮಿಗಳ ಮೇಲು ಕೀಳು ಭಾವನೆಯಿಂದ ಸಣ್ಣಪುಟ್ಟ ಗೊಂದಲ ಸಮುದಾಯದೊಳಗೆ ಆಗಿದೆ. ಆದರೆ ಇಂತಹ ಸಮಯದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಹೋಗುತ್ತೇವೆ. ಒಕ್ಕಲಿಗ ಸಂಘಟನೆ ಕರೆದರೆ ನಾವೂ ಅವರೊಂದಿಗೆ ಹೋರಾಟಕ್ಕೆ ಹೋಗುತ್ತೇವೆ. ಗೌಡ ಲಿಂಗಾಯತರನ್ನು ಕೇವಲ 22 ಜನ ಎಂದು ತೋರಿಸಿದ್ದಾರೆ ಎಂದರು.