ಬೆಂಗಳೂರು; ಇದು ಪಕ್ಷದ ಕಾರ್ಯಕ್ರಮ, ಯಾವುದೇ ಬಣವಿಲ್ಲ ಎಂದು ಹಾಸನ ಸಮಾವೇಶದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸ್ವಾಭಿಮಾನಿ ಒಕ್ಕೂಟಗಳನ್ನು ಮಾಡಿಕೊಂಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಸಿಂಪಥೈಸರ್ಸ್. ಅವರೊಂದಿಗೆ ಪಕ್ಷ ಎಲ್ಲ ಒಟ್ಟಿಗೆ ಸೇರಿ ಸಮಾವೇಶ ಮಾಡ್ತಿದ್ದೇವೆ. ಚುನಾವಣೆ ಸಂಧರ್ಭದಲ್ಲಿ ರಾಜಕೀಯವಾಗಿ ಮಾತಾಡಿದ್ದೆವು, ಅದನ್ನ ಜನರಿಗೆ ಹೇಳಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರ ಪ್ರಸ್ತಾಪ ಮಾಡಲು ಆಗಲ್ಲ ಎಂದಿದ್ದಾರೆ.
ರಾಜಕೀಯವಾಗಿ ಉತ್ತರ ಕೊಡಲು ಸಮಾವೇಶ ಮಾಡ್ತಿದ್ದೇವೆ.ಜನರಿಗೆ ಸತ್ಯಾಂಶವನ್ನು ತಿಳಿಸಬೇಕು. ವಿಪಕ್ಷಕ್ಕೆ ರಾಜಕೀಯವಾಗಿ ಉತ್ತರ ಕೊಡಬೇಕು ಎಂದ ಅವರು ಸಿಎಂ, ಡಿಸಿಎಂ ಶಕ್ತಿ ಪ್ರದರ್ಶನ ವಿಚಾರವಾಗಿ ಮಾತನಾಡಿ ಸಮಾವೇಶ ಪಕ್ಷದ ಕಾರ್ಯಕ್ರಮ, ಯಾವುದೇ ಬಣವಿಲ್ಲ. ಬಿಜೆಪಿಯಲ್ಲಿ ಮೂರು ಬಣವಿದೆ.ನಮ್ಮಲ್ಲಿ ಬಣವನ್ನು ಸೃಷ್ಟಿಸಲು ಬಿಜೆಪಿ ಯತ್ನಿಸಬಹುದು ಅಷ್ಟೇ ಎಂದಿದ್ದಾರೆ.
ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಹುನ್ನಾರ ನಡೆದಿದೆ, ಹಾಗಾಗಿ ಸಮಾವೇಶ ಮಾಡಿದ್ದಾರೆ; ದೆಹಲಿಯಲ್ಲಿ ಸಂಸದ ಗೋವಿಂದ್ ಕಾರಜೋಳ ಹೇಳಿಕೆ
ನವದೆಹಲಿ; ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆದಿದೆ, ಹಾಗಾಗಿ ಸಮಾವೇಶ ಮಾಡಿದ್ದಾರೆ ಎಂದು ನವದೆಹಲಿಯಲ್ಲಿ ಸಂಸದ ಗೋವಿಂದ್ ಕಾರಜೋಳ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಿಂದ ಜನ ಕಲ್ಯಾಣ ಸಮಾವೇಶ ಆಯೋಜನೆ ಮಾಡಿದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಿಗೆ ಭಯ ಕಾಡ್ತಿದೆ. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಹುನ್ನಾರ ನಡೆದಿದೆ. ಅವರಿಗೆ ಹೈಕಮಾಂಡ್ ಸೂಕ್ಷ್ಮವಾಗಿ ಹೇಳಿದ ಕಾರಣ ಈ ಜನ ಕಲ್ಯಾಣ ಸಮಾವೇಶ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಮಾಡದೆ, ಹಗರಣದಲ್ಲಿ ಸಿಕ್ಕಿ ಹಾಕಿಕೊಂಡ ಹಿನ್ನಲೆ ಕುರ್ಚಿಕಳೆದುಕೊಳ್ಳುವುದು ಖಾತರಿಯಾಗಿದೆ ಎಂದರು.
ಹೀಗಾಗೀ ಜನರನ್ನು ತೋರಿಸಿ ಹೈಕಮಾಂಡ್ ಅನ್ನು ಬ್ಲಾಕ್ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡ್ತಿದ್ದಾರೆ ಗೊತ್ತಿಲ್ಲ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಈ ಉತ್ಸವಕ್ಕೆ ಹಣ ಖರ್ಚು ಮಾಡುವ ಬದಲು ಮೃತ ಸರ್ಕಾರಿ ನೌಕರರ ಕುಟುಂಬಕ್ಕೆ ಆ ಹಣ ನೀಡಲಿ ಆಗ ನಿಜ ಕಲ್ಯಾಣವಾಗಲಿದೆ ಎಂದರು.