ಬೆಂಗಳೂರು; ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪಾರದರ್ಶಕ ತನಿಖೆ ಮುಂದುವರಿಸಿದ್ದಾರೆ. ಇಲ್ಲಿಯವರೆಗೂ ಕೋರ್ಟ್ ಗೆ ಯಾವುದೇ ತನಿಖಾ ವರದಿ ಸಲ್ಲಿಕೆ ಮಾಡಿಲ್ಲ.ಈ ಸಂದರ್ಭದಲ್ಲಿ ಇಡಿ ಲೋಕಾಯುಕ್ತಕ್ಕೆ ಪತ್ರದ ಮೂಲಕ ಅನೇಕ ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರು ತನಿಖೆ ಮಾಡಿರುವ ವಿಚಾರಗಳನ್ನೂ ಲೋಕಾಯುಕ್ತದವರಿಗೆ ಪ್ರಸ್ತಾಪ ಮಾಡಿದ್ದಾರೆ. ಒಂದೇ ವಿಷಯದ ಬಗ್ಗೆ ಎರಡು ಏಜೆನ್ಸಿಗಳು ಏಕಕಾಲದಲ್ಲಿ ತನಿಖೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಡಿಯವರು ಪತ್ರದಲ್ಲಿ ಕೆಲವು ವಿಷಯಗಳನ್ನು ಅಂತಿಮ ನಿರ್ಧಾರದಂತೆ ಹೇಳಿದ್ದಾರೆ. ಎಲ್ಲೋ ಒಂದು ಕಡೆ ಇಡಿ ಲೋಕಾಯುಕ್ತದ ಮೇಲೆ ಪ್ರಭಾವ ಬೀರುತ್ತಿದ್ದೀರಾ?. ಇಡಿ ಲೋಕಾಯುಕ್ತಕ್ಕೆ ಇಂತಹದ್ದೇ ರೀತಿ ತನಿಖೆ ಮಾಡಿ ಅಂತಾ ನಿರ್ದೇಶನ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ರು.
ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಇಡಿ, ಸಿಬಿಐ, ಐಟಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಎಲ್ಲೆಲ್ಲಿ ಬಿಜೆಪಿ ದುರ್ಬಲವಾಗಿದೆ ಆ ರಾಜ್ಯಗಳಲ್ಲಿ ಸಿಬಿಐ, ಐಟಿ, ಇಡಿಯನ್ನು ಇವರು ಛೂ ಬಿಡುತ್ತಾರೆ. ರಾಜ್ಯಪಾಲರ ಕಚೇರಿಯನ್ನೂ ದುರ್ಬಳಕೆ ಮಾಡಿದ್ದಾರೆ. ಇಡಿ ಕೇಂದ್ರ ಸರ್ಕಾರದ ಪೊಲಿಟಿಕಲ್ ಟೂಲ್. ಇಡಿ ಹಣದ ವ್ಯವಹಾರದ ಬಗ್ಗೆ ಮಾತ್ರ ತನಿಖೆ ಮಾಡುತ್ತದೆ. ಆದರೆ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಎಫ್ ಐಆರ್ ಅದ ಮರುದಿನವೇ ಇಡಿ ಇಸಿಐಆರ್ ದಾಖಲಿಸಿದೆ. ಕಾಂಗ್ರೆಸ್ ಇರುವ ಕಡೆ ಮಾತ್ರ ಈ ರೀತಿ ಮಾಡುತ್ತಾರೆ. ಲೋಕಾಯುಕ್ತ ಇಡಿ ಸಹಾಯ ಕೇಳಿಲ್ಲ. ಸೈಟ್ ವಾಪಸ್ ಕೊಟ್ಟಿರುವ ಕಾರಣ ಇಡಿಗೆ ಕೇಸ್ ಇಲ್ಲ. ಇದಕ್ಕೆ ಇಂತಹ ಪತ್ರಗಳನ್ನು ಅವರು ಸೋರಿಕೆ ಮಾಡುತ್ತಿದ್ದಾರೆ. ಲೋಕಾಯುಕ್ತಕ್ಕೆ ತನಿಖೆ ಬಗ್ಗೆ ನಿರ್ದೇಶನ ಮಾಡುತ್ತಿದ್ದಾರೆ ಅಂತಾ ಅನ್ನಿಸುತ್ತದೆ. ಇಡಿಯವರೇ ದೆಹಲಿಯಲ್ಲಿ ಕೆಲವು ಮಾಧ್ಯಮದವರನ್ನು ಕರೆಸಿ ಪತ್ರ ಸೋರಿಕೆ ಮಾಡಿದ್ದಾರೆ. ಇಡಿ ತನಿಖೆ ಆಂತರಿಕವಾಗಿ ಮಾಡಬೇಕು ತಾನೇ? ಎಂದರು.
ಸರ್ದಾರ್ ಪಟೇಲ್ ಬಳಿಕದ ಸ್ಟ್ರಾಂಗ್ ಗೃಹ ಸಚಿವ ಅಮಿತ್ ಷಾ ಎಂದು ಬಿಜೆಪಿಯವರು ಹೇಳುತ್ತಾರೆ. ಇಡಿ ಪಾರದರ್ಶಕವಾಗಿ ತನಿಖೆ ಮಾಡುತ್ತದೆ ಅಂತಾದರೆ ಪತ್ರ ಸೋರಿಕೆ ಹೇಗಾಯ್ತು?. ಇವರ ಪ್ರಕಾರ ಬೊಮ್ಮಾಯಿ ಸಿಎಂ ಆಗಿದ್ದಾಗ ಸೈಟ್ ಹಂಚಿಕೆ ಆಗಿದೆ, ಅವರೂ ತಪ್ಪು ಮಾಡಿದ್ದಾರೆ ಅಂತಾಯ್ತಲ್ಲವೇ?. ಬಿಜೆಪಿ ನಾಯಕರ ಪಿಎಂಎಲ್ಎ ಪ್ರಕರಣಗಳು ಯಾಕೆ ಪಬ್ಲಿಕ್ ಡೊಮೈನ್ ನಲ್ಲಿ ಇಲ್ಲ?. ಈ ಪತ್ರ ಮಾತ್ರ ಹೇಗೆ ಲೀಕ್ ಆಗಿಬಿಡುತ್ತದೆ?. ಯಡಿಯೂರಪ್ಪ ಮತ್ತು ವಿಜಯೇಂದ್ರ ಭ್ರಷ್ಟರು, ಅವರ ದುಡ್ಡು ಮಾರಿಷಸ್ ನಲ್ಲಿ ಇದೆ ಅಂತಾ ಯತ್ನಾಳ್ ಹೇಳುತ್ತಾರೆ. ಅದು ಯಾಕೆ ಹೊರಗೆ ಬರುತ್ತಿಲ್ಲ?. ಹಿಮಂತ್ ಬಿಸ್ವಾಸ್ ಸರ್ಮ, ಅಜಿತ್ ಪವಾರ್, ಚಂದ್ರಬಾಬು ನಾಯ್ಡು ವಿಚಾರ ಯಾಕೆ ಹೊರಗೆ ಬರುತ್ತಿಲ್ಲ?. ಹೈಕಮಾಂಡ್ ಗೆ ಕೈಕಾಲು ಹಿಡಿದು ಇದನ್ನು ಮಾಡಿಸಿಕೊಂಡು ಬಂದಿರಬೇಕು. ಇವರು ದೆಹಲಿಗೆ ಹೋಗಿರೋದು ಭಿನ್ನಮತ ಸೆಟಲ್ ಮಾಡಲು ಅಲ್ಲ. ವಿಷಯಾಂತರವನ್ನು ಬಿಜೆಪಿಯವರು ಬಹಳ ಚೆನ್ನಾಗಿ ಮಾಡುತ್ತಾರೆ. ನಾವು ಇದನ್ನು ರಾಜಕೀಯ ಮತ್ತು ಕಾನೂನಾತ್ಮಕವಾಗಿ ತೆಗೆದುಕೊಂಡಿದ್ದಾರೆ
ಇಡಿ ಪತ್ರವನ್ನು ನಾವು ಒಪ್ಪುವುದಿಲ್ಲ. ಇದು ಫ್ಯಾಬ್ರಿಕೇಟೇಡ್ ರಿಪೋರ್ಟ್. ಈ ಪತ್ರದ ಬಗ್ಗೆಯೂ ಒಂದು ತನಿಖೆ ಆಗಬೇಕಾಗುತ್ತದೆ. 2028 ರಲ್ಲೂ ಬಿಜೆಪಿ ಏನೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ. ಬಿಜೆಪಿಯವರ ಹಗರಣಗಳನ್ನು ಮುಚ್ಚಿ ಹಾಕಲು ಹೈಕಮಾಂಡ್ ಕೈ ಕಾಲು ಹಿಡಿದು ಈ ಪತ್ರ ಲೀಕ್ ಮಾಡಿಸಿದ್ದಾರೆ ಎಂದರು.
ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ ಇಡಿಯವರು ಪ್ರಕರಣದಲ್ಲಿ ಮೊದಲನೇ ಹೆಜ್ಜೆಯಿಂದಲೂ ಕಾನೂನು ಬಾಹಿರವಾಗಿ ಮಾಡಿದ್ದಾರೆ. ಸತ್ಯ ಹೊರ ಹಾಕಲು ಇಡಿ ತನಿಖೆ ಮಾಡುತ್ತಿಲ್ಲ. ಬಿಜೆಪಿ-ಜೆಡಿಎಸ್ ಗೆ ಸಹಾಯವಾಗಲು ತನಿಖೆ ಮಾಡುತ್ತಿದ್ದಾರೆ. ಪ್ರಕರಣಕ್ಕೂ ಇಡಿ ಮಾಡುತ್ತಿರುವ ತನಿಖೆಗೂ ಸಂಬಂಧ ಇಲ್ಲ. ಸಿಎಂ ಹಾಕಿರುವ ಅರ್ಜಿ ವಿಚಾರಣೆಗೆ ಬರುತ್ತದೆ. ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವ ರೀತಿ ಪೂರ್ವಾಗ್ರಹಪೀಡಿತರಾಗಿ ಇದನ್ನು ಮಾಡುತ್ತಿದ್ದಾರೆ. ಲೋಕಾಯುಕ್ತಕ್ಕೆ ಇಡಿ ಮಾಹಿತಿ ಕೊಡುವ ಪ್ರಶ್ನೆಯೇ ಉದ್ಭವಿಸಲ್ಲ. ಇಡಿ ಮಾಹಿತಿ ನೋಡಿದರೆ ಅದು ಆತಂಕಕಾರಿಯಾಗಿದೆ. ಮಾಹಿತಿ ಕೊಡಲು ಅವರಿಗೆ ಹಕ್ಕೇ ಇಲ್ಲ. ಸೈಟ್ ವಾಪಸ್ ಕೊಟ್ಟಾಗಿದೆ ಅಂತಾ ಎಲ್ಲೂ ಉಲ್ಲೇಖವೇ ಮಾಡುವುದಿಲ್ಲ. ಇಂದು ಪಾರ್ವತಿ ಅವರ ಬಳಿ ಜಮೀನೂ ಇಲ್ಲ, ಸೈಟ್ ಕೂಡಾ ಇಲ್ಲ. ಹಾಗಿರುವಾಗ ಇಡಿ ಏನು ತನಿಖೆ ಮಾಡುತ್ತಾರೆ?. ತನಿಖಾ ಪಾವಿತ್ರ್ಯತೆಯನ್ನು ಇಡಿ ಹಾಳು ಮಾಡಿದೆ ಎಂದರು.