ಬೆಂಗಳೂರು : ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ ದಯಾನಂದ್ ಅವರು ಹಲವು ಮಾಹಿತಿಗಳನ್ನು ಶೇರ್ ಮಾಡಿದ್ದಾರೆ. ಈ ವೇಳೆ ಹಲವು ಸ್ಫೋಟಕ ವಿಚಾರಗಳನ್ನು ಅವರು ತಿಳಿಸಿದ್ದಾರೆ.
ಅಂದ್ಹಾಗೆ ಸೆಪ್ಟಂಬರ್ 3 ರಂದು ವಯಾಲಿಕಾವಲ್ ನ ಮಹಾಲಕ್ಷ್ಮೀ ಮನೆಗೆ ಬಂದಿದ್ದ ಆರೋಪಿ ಮುಕ್ತಿ ರಂಜನ್ ರಾಯ್ ಹಾಗೂ ಮಹಾಲಕ್ಷ್ಮೀ ಮಧ್ಯೆ ಗಲಾಟೆಯಾಗಿ ಆತ ಆಕೆಯನ್ನು ಕೊಲೆ ಮಾಡಿದ್ದ. ಹೀಗೆ ಕೊಲೆ ಮಾಡಿದ ಮುಕ್ತಿ ರಂಜನ್ ರಾಯ್ ನೇರವಾಗಿ ಹೆಬ್ಬಗೋಡಿಯಲ್ಲಿರುವ ತನ್ನ ಸಹೋದರ ಮನೆಗೆ ಬಂದಿದ್ದ. ಅಲ್ಲಿ ತಾವು ಕೊಲೆ ಮಾಡಿರುವ ವಿಚಾರವನ್ನು ತಿಳಿಸಿ ನೀನು ಕೂಡ ರೂಂ ಖಾಲಿ ಮಾಡು ಎಂದು ಹೇಳಿದ್ದ. ಬಳಿಕ ಮುಕ್ತಿ ರಂಜನ್ ರಾಯ್ ತನ್ನ ಬಜಾಜ್ ಪ್ಲಾಟಿನಂ ಬೈಕ್ನಲ್ಲೇ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ ಬರೋಬ್ಬರಿ 1,550 ಕಿಮೀ ಕ್ರಮಿಸಿ ತನ್ನ ಹುಟ್ಟೂರು ಒಡಿಶಾದ ಭದ್ರಕ್ ಬಳಿಯ ಬೋನಿಪುರ ತಲುಪಿದ್ದಾನೆ. ಅಲ್ಲಿ ತನ್ನ ತಾಯಿ ಹಾಗೂ ತಂದೆಯನ್ನು ಭೇಟಿಯಾಗಿ ಮುಕ್ತಿ ರಂಜನ್ ರಾಯ್ ಒರಿಸ್ಸಾದ ಭದ್ರಪ್ ಜಿಲ್ಲೆಯ ದುಸ್ತ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಟ್ ಕೂಡ ದೊರೆತಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ. ಇನ್ನು ಮುಕ್ತಿ ರಂಜನ್ ರಾಯ್ ಸಹೋದರ ಬೆಂಗಳೂರಿನಲ್ಲೇ ಇದ್ದಾರೆ. ಅವರ ಹೇಳಿಕೆಯನ್ನು ಕೂಡ 164 ಅಡಿಯಲ್ಲಿ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಗೆದಷ್ಟು ಬಗೆದಷ್ಟು ಬಯಲಾಗುತ್ತಿದೆ ಮಹಾಲಕ್ಷ್ಮೀ ಕೊಲೆ ರಹಸ್ಯ; ಡೆತ್ ನೋಟ್ ಬರೆದಿಟ್ಟು ಆರೋಪಿ ನೇಣಿಗೆ ಶರಣು
ಬೆಂಗಳೂರಿನ ವಯಾಲಿಕಾವಲ್ ನಲ್ಲಿ ನಡೆದ ಮಹಾಲಕ್ಷ್ಮೀ ರಣ ಭೀಕರ ಕೊಲೆ ಪ್ರಕರಣ ಬೆಂಗಳೂರಿಗರು ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ.ಮಹಾಲಕ್ಷ್ಮೀ ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಮೊದಲಿಗೆ ಅನುಮಾನ ಬಂದಿದ್ದು ಆಕೆಯ ಸ್ನೇಹಿತ ಅಶ್ರಫ್ ನ ಮೇಲೆ. ಆರಂಭದಲ್ಲಿ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಆತನ ಮೇಲೆಯೇ ಅನುಮಾನವನ್ನು ವ್ಯಕ್ತಪಡಿಸಿದ್ದ. ಅದರಂತೆ ಆತ ಸೇರಿದಂತೆ ಮಹಾಲಕ್ಷ್ಮೀಯ ಇತರೆ ಇಬ್ಬರು ಸಹೋದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯಲ್ಲಿ ಅವರ ಪಾತ್ರ ಇಲ್ಲ ಅನ್ನೋದು ಗೊತ್ತಾಗಿದೆ.
ಇದಾದ ಮೇಲೆ ಹಾಗಾದ್ರೆ ಇನ್ನ್ಯಾರು ಕೊಲೆ ಮಾಡಿರಬಹುದು ಎಂದು ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಮುಕ್ತಿ ರಂಜನ್ ರಾಯ್ ಜೊತೆ ಮಹಾಲಕ್ಷ್ಮೀ ಕ್ಲೋಸ್ ಆಗಿದ್ದಳು ಅನ್ನೋ ವಿಚಾರ. ಅದರಂತೆ ಆತನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಕರಾಳ ಮುಖ ಬಯಲಾಗಿದೆ. ಕೊಲೆಗಾರ ಆತನೇ ಅನ್ನೋದು ಕನ್ಫರ್ಮ್ ಆಗಿದೆ. ಅಂದ್ಹಾಗೆ ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಜಾಗದಲ್ಲೇ ಮುಕ್ತಿ ರಂಜನ್ ರಾಯ್ ಕೂಡ ಕೆಲಸ ಮಾಡುತ್ತಿದ್ದ. ಆತನಿಗೆ ಮಹಾಲಕ್ಷ್ಮೀ ಜೊತೆ ಸ್ನೇಹ ಬೆಳೆದಿತ್ತು. ಆದರೆ ಕೆಲವು ದಿನಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು.
ಇದರ ನಡುವೆ ಸೆಪ್ಟಂಬರ್ 3 ರಂದು ಮುಕ್ತಿ ರಂಜನ್ ರಾಯ್ ಮಹಾಲಕ್ಷ್ಮೀಯ ವಯಾಲಿಕಾವಲ್ ನಿವಾಸಕ್ಕೆ ಬಂದಿದ್ದ. ಬಂದ ವೇಳೆ ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳ ನಡೆದಿದೆ. ಜಗಳ ನಡೆದಾಗ ಮಹಾಲಕ್ಷ್ಮೀ ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮುಕ್ತಿ ರಂಜನ್ ರಾಯ್ ಆಕೆಯನ್ನು ಕೊಲೆ ಮಾಡಿದ್ದಾನೆ. ಹೀಗೆ ಕೊಲೆ ಮಾಡಿ 59 ಪೀಸ್ ಗಳಾಗಿ ಮಾಡಿ ಆಕೆಯ ಫ್ರಿಡ್ಜ್ ನಲ್ಲಿಟ್ಟು ಅಲ್ಲಿಂದ ನೇರವಾಗಿ ತನ್ನ ಮನೆಗೆ ಬಂದಿದ್ದಾನೆ. ಬಂದವನು ಎಲ್ಲಾ ತನ್ನ ತಮ್ಮನಿಗೆ ಹಾಗೇ ತಾಯಿಗೆ ಹೇಳಿದ್ದಾನೆ. ಈ ವೇಳೆ ಮಗನನ್ನು ರಕ್ಷಿಸಲು ಆತನಿಗೆ ಪರಾರಿಯಾಗಲು ಆತನ ತಾಯಿ ಕುಂಜಲತಾ ರಾಯ್ ಸಹಾಯ ಮಾಡಿದ್ದಾರೆ. ಅದರಂತೆ ಮುಕ್ತಿ ರಂಜನ್ ರಾಯ್ ನೇರವಾಗಿ ಓಡಿಶಾದ ಭದ್ರಾಕ್ ಜಿಲ್ಲೆಯ ಪಂಡಿ ಗ್ರಾಮದ ಬೂತಕಪುರಕ್ಕೆ ತೆರಳಿದ್ದಾನೆ.
ಬೂತಕಪುರದ ತನ್ನ ಮನೆಗೆ ತೆರಳಿದ ಮುಕ್ತಿ ರಂಜನ್ ರಾಯ್ ಅದೇ ದಿನ ರಾತ್ರಿ ನಾನು ಭದ್ರಕ್ ಗೆ ಹೋಗ್ತೀನಿ ಅಂತಾ ಮನೆಯವರಿಗೆ ಹೇಳಿ ಸ್ಕೂಟಿಯಲ್ಲಿ ಮನೆಯಿಂದ ಹೋಗಿದ್ದಾನೆ. ಹಾಗೇ ಹೋದವನು ಕುಳೆಪಾದ ಸ್ಮಶಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ತನ್ನ ಲ್ಯಾಪ್ ಟ್ಯಾಪ್ ನ್ನು ಸ್ಕೂಟಿಯಲ್ಲಿಯೇ ಇಟ್ಟು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಇತ್ತ ಆತನನ್ನು ಬಂಧಿಸಲು ಬೆಂಗಳೂರಿನಿಂದ ಹೋದ ಪೊಲೀಸರಿಗೆ ಆತನ ಗ್ರಾಮ ತಲುಪುವ ಮುನ್ನವೇ ಶಾಕ್ ಎದುರಾಗಿದೆ. ಡೆತ್ ನೋಟ್ ನಲ್ಲಿ ಕೊಲೆಗಾರ ನಡೆದ ಘಟನೆಯನ್ನು ಬರೆದಿದ್ದು ನಾನೇ ಕೊಲೆ ಮಾಡಿದ್ದೇನೆ ಎಂದಿದ್ದಾನೆ.
ತಾಯಿಯಿಂದ ಸ್ಫೋಟಕ ಹೇಳಿಕೆ;
ಇನ್ನು ಮುಕ್ತಿ ರಂಜನ್ ರಾಯ್ ಬೆಂಗಳೂರಿನಿಂದ ಎಸ್ಕೇಪ್ ಆಗಲು ಸಹಕರಿಸಿದ್ದ ಆತನ ತಾಯಿ ಕುಂಜಲತಾ ರಾಯ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಹಾಲಕ್ಷ್ಮೀ ನನ್ನ ಮಗನನ್ನು ಹನಿ ಟ್ರಾಫ್ ಮಾಡಿದ್ದಳು. ಅಲ್ಲದೇ ಆ ಫೋಟೋ ವೀಡಿಯೋ ಇಟ್ಟುಕೊಂಡು ಹಣಕ್ಕಾಗಿ ಹಾಗೂ ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದಳು. ಅದಕ್ಕಾಗಿ ಆತ ಆಕೆಯನ್ನು ಕೊಲೆ ಮಾಡಿದ್ದಾಗಿ ನನ್ನ ಬಳಿ ಹೇಳಿದ್ದಾನೆ ಎಂದು ಸ್ಱೋಟಕ ಹೇಳಿಕೆ ನೀಡಿದ್ದಾರೆ.ಇನ್ನು ಪೊಲೀಸರು ನನ್ನ ಅರೆಸ್ಟ್ ಮಾಡಲು ಬರುತ್ತಾರೆ ಅನ್ನೋ ಭಯದಲ್ಲೇ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆಕೆ ತಿಳಿಸಿದ್ದಾರೆ.











