ಮನೆ Latest News ರಣ ಭೀಕರ ಭೂಕುಸಿತಕ್ಕೆ ನಲುಗಿ ಹೋದ ದೇವರ ನಾಡು; ಏರುತ್ತಲೇ ಇದೆ ಸಾವಿನ ಸಂಖ್ಯೆ

ರಣ ಭೀಕರ ಭೂಕುಸಿತಕ್ಕೆ ನಲುಗಿ ಹೋದ ದೇವರ ನಾಡು; ಏರುತ್ತಲೇ ಇದೆ ಸಾವಿನ ಸಂಖ್ಯೆ

0

ಕೇರಳ; ದೇವರನಾಡು ಎಂದು ಕರೆಸಿಕೊಳ್ಳುವ ಕೇರಳ ರಣ ಭೀಕರ ಭೂಕುಸಿತಕ್ಕೆ ನಲುಗಿ ಹೋಗಿದೆ. ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಮಂಗಳವಾರ ನಸುಕಿನ ಜಾವ ಅಂದರೆ ಸುಮಾರು 2 ಗಂಟೆಯಿಂದ 4 ಗಂಟೆಯ ಮಧ್ಯೆದಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಇದುವೆರಗೂ ಘಟನೆಯಲ್ಲಿ 84 ಜನ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಲೆ ಇದೆ.

ಇನ್ನು ಘಟನೆ ಇದುವರೆಗೂ 116 ಜನರು ಗಾಯಗೊಂಡಿದ್ದಾರೆ . ನೂರಾರು ಜನರು ಕಲ್ಲುಗಳು ಮತ್ತು ಮಣ್ಣಿನ ಅಡಿಯಲ್ಲಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದು ರಕ್ಷಣೆಗಾಗಿ ಅಂಗಲಾಚುತ್ತಿರುವ ದೃಶ್ಯ ಮನಕಲುಕುವಂತಿದೆ.ಮುಂಡಕ್ಕೈ, ಚುರಲ್ಮಾಲಾ, ಅತ್ತಮಾಲಾ ಮತ್ತು ನುಲುಪ್ಪುಳ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಇನ್ನು ಕೇರಳ ಸಿಎಂ ಪಿಣರಾಯ್ ವಿಜಯನ್  ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಅಗತ್ಯ ನೆರವು ನೀಡಲು ಸಿದ್ಧ ಎಂದಿದ್ದಾರೆ. ಅಲ್ಲದೇ ಪ್ರಧಾನಿ ಕಚೇರಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಎರಡು ಲಕ್ಷ ರೂ ಪರಿಹಾರ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಘೋಷಣೆ ಮಾಡಲಾಗಿದೆ.

ಸ್ಥಳದಲ್ಲಿ ಕಾರ್ಯಾಚರಣೆಗಾಗಿ 4 ಹೆಚ್ಚುವರಿ NDRF ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, 200 ಜನ ಯೋಧರನ್ನು ನಿಯೋಜನೆ ಮಾಡಲಾಗಿದೆ.ಸೊಲೂರು ಏರ್ ಫೋರ್ಸ್ ನಿಂದ ಎರಡು ಹೆಲಿಕಾಪ್ಟರ್ ರವಾನಿಸಲಾಗಿದ್ದು, ರಿವರ್ ಕ್ರಾಸಿಂಗ್ ತಂಡ ಎಜಿಮಾಲ್ ಗೆ ತೆರಳಿದೆ. ಇತ್ತ ಬೆಂಗಳೂರಿನಿಂದ ಎಂಇಜಿ ತಂಡವನ್ನು ಕೇರಳಕ್ಕೆ ರವಾನೆ ಮಾಡಲಾಗಿದೆ.ರಕ್ಷಣಾ ಇಲಾಖೆಯ ಎಂಇಜಿ ಯೋಧರು ಬೆಂಗಳೂರಿನಿಂದ ವಯನಾಡ್ ಗೆ ತೆರಳಿದ್ದಾರೆ.

ಕೇರಳದ ವೈನಾಡು ಗುಡ್ಡ ಕುಸಿತ ಕುರಿತು ಕೇಂದ್ರ ಸಚಿವ ಹೆಚ್ಡಿಕೆ ಟ್ವೀಟ್ ಮಾಡಿದ್ದು ಕೇರಳದ ವಯನಾಡು ಬಳಿ ಉಂಟಾಗಿರುವ ಭೀಕರ ಭೂಕುಸಿತದಿಂದ  ಅನೇಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ.ಇನ್ನು ಅನೇಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.ಗೌರವಾನ್ವಿತ ಪ್ರಧಾನಿ ಮೋದಿ ಅವರು ತುರ್ತಾಗಿ ಸ್ಪಂದಿಸಿದ್ದು, ಕೇರಳದ ಸಿಎಂ ಜತೆ ಮಾತನಾಡಿ ರಕ್ಷಣಾ ಕಾರ್ಯಗಳಿಗೆ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಮಾನ್ಯ ಪ್ರಧಾನಿಗಳನ್ನು ನಾನು ಅಭಿನಂದಿಸುತ್ತೇನೆ.ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಸಿಗಲಿ.ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಎಲ್ಲಾ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಕೇರಳ ಸೇರಿ ದೇಶದೆಲ್ಲೆಡೆ ಭಾರೀ ಮಳೆ ಆಗುತ್ತಿದ್ದು  ಭೂಕುಸಿತ, ನೆರೆ ಉಂಟಾಗಿದೆ. ಕರ್ನಾಟಕದಲ್ಲಿಯೂ ಅನೇಕ ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗಿದೆ.ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರಿಕೆ ವಹಿಸಬೇಕು . ರಾಜ್ಯ ಸರಕಾರವೂ 24X7 ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟು, ಅಪಾಯವಿರುವ ಸ್ಥಳಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದು ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದಿದ್ದಾರೆ.ಸದ್ಯ  ಭಾರೀ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದ್ದು ಸಾವಿನ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ.