ಬೆಂಗಳೂರು; ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜ ಅವರನ್ನು ನಿನ್ನೆ ರಾತ್ರಿ 11-30 ರ ಸುಮಾರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಇನ್ನು ತಾಯಿ ನಿಧನರಾಗಿರುವ ಸುದ್ದಿ ಕೇಳಿ ಕಿಚ್ಚ ಸುದೀಪ್ ಅವರು ಓಡೋಡಿ ಆಸ್ಪತ್ರೆಗೆ ಬಂದರು. ತಾಯಿಯನ್ನು ಕಂಡು ಕಿಚ್ಚ ಕಣ್ಣೀರು ಹಾಕಿದ್ರು. ಬಳಿಕ ಸರೋಜ ಅವರ ಪಾರ್ಥೀವ ಶರೀರವನ್ನು ಜೆಪಿ ನಗರದ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ಸಂಜೆ 5 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು, ಇತರೆ ಕ್ಷೇತ್ರದ ಗಣ್ಯರು ಸುದೀಪ್ ನಿವಾಸಕ್ಕೆ ಬಂದು ಕಿಚ್ಚನ ತಾಯಿಯ ಅಂತಿಮ ದರ್ಶನ ಪಡೆದ್ರು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ನಟ ಧ್ರುವ ಸರ್ಜಾ, ರಕ್ಷಿತಾ ಪ್ರೇಮ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ನಟ ದೊಡ್ಡಣ್ಣ, ಅನೂಪ್ ಭಂಡಾರಿ ದಂಪತಿ, ಗುರುಕಿರಣ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್, ರಂಜಿತ್, ಅರ್ಜುನ್ ಜನ್ಯ, ತರುಣ್ ಸುಧೀರ್, ತಾರಾ ಅನುರಾಧ, ನೀತು ವನಜಾಕ್ಷಿ, ಡ್ರೋನ್ ಪ್ರತಾಪ್ ಸೇರಿದಂತೆ ನೂರಾರು ಕಲಾವಿದರು ಅಂತಿಮ ದರ್ಶನ ಪಡೆದ್ರು.
ಅಂತಿಮ ದರ್ಶನದ ಬಳಿಕ ಸರೋಜ ಅವರ ಪಾರ್ಥೀವ ಶರೀರವನ್ನು ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ತಂದು ಅಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ತಾಯಿಯ ಕಾರ್ಯದುದ್ದಕ್ಕೂ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕುತ್ತಲೇ ಇದ್ದರು. ಪತ್ನಿ, ಹಾಗೂ ಪುತ್ರಿ ಸುದೀಪ್ ಅವರನ್ನು ಸಮಾಧಾನ ಮಾಡುತ್ತಿದ್ದ ದೃಶ್ಯ ಮನುಕಲುಕುವಂತಿತ್ತು.