ಬೆಂಗಳೂರು; 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ವಿವರಣೆ ನೀಡಿದರು. ಒಟ್ಟು ಠೇವಣಿಯಲ್ಲಿ ಶೇ.20 ರಷ್ಯನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯವಾಗಿ ಉಳಿಸಿಕೊಂಡು ದುರ್ವಿನಿಯೋಗ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಿರ್ವಹಿಸುವುದು. ರಾಜ್ಯ ಶಾಸನಬದ್ಧ ಮೀಸಲು ದ್ರವ್ಯ ಪದವನ್ನು ಪರಿಭಾಷಿಸುವುದು ಈ ತಿದ್ದುಪಡಿಯಲ್ಲಿದೆ.ಸೌಹಾರ್ದ ಸಹಕಾರಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಲು ಮತ್ತು ಠೇವಣಿಯಿರಿಸಲು, ಮತದಾರರ ವರ್ಗದ ಮೂಲಕ ಸಹಕಾರಿಯಾಗಿದೆ. ಮೀಸಲಿರಿಸಿದ ಸ್ಥಾನಗಳಿಗೆ ಮತ ಚಲಾಯಿಸುವ ವಿಧಾನವನ್ನು ನಿಯಮಿಸುವುದು ತಿದ್ದುಪಡಿ ಮಾಡಲಾಗಿದೆ ಎಂದರು.
ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮಹಿಳೆ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಸದಸ್ಯರ ಪರವಾಗಿ ಮಂಡಲಿಯಲ್ಲಿನ ಸ್ಥಾನಗಳ ಮೀಸಲಾತಿಯನ್ನು ಪುನರೀಕ್ಷಿಸುವುದು. ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಪ್ರತಿ ವರ್ಷದ ಕೊನೆಯಲ್ಲಿ ಆತನ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಘೋಷಣೆ ಮಾಡುವುದು. ಅದೇ ರೀತಿ, ಚುನಾವಣೆ ನಡೆಸುವಲ್ಲಿ ಅನಗತ್ಯ ವೆಚ್ಚ ಮತ್ತು ಸಮಯ ವಿಳಂಬವನ್ನು ತಪ್ಪಿಸುವುದು. ಸಹಕಾರ ಲೆಕ್ಕಪರಿಶೋಧಕ ನಿರ್ದೇಶಕರ ಮುಖಾಂತರ ಲೆಕ್ಕಪರಿಶೋಧನೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಈ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು,
ವಂಚನೆಯ ವರದಿಯಲ್ಲಿರುವ ಅಕ್ರಮ ಅಥವಾ ವಂಚನೆ ಅಥವಾ ದುರ್ವಿನಿಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದು ಜತೆಗೆ, ಇತರೆ ಕೆಲವು ಪ್ರಾಸಂಗಿಕ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದು ಹೇಳಿದರು.
ಇನ್ನು ೨೦೨೫ ನೇ ಸಾಲಿನ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ( ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಹೊಸ ವಿಧೇಯಕವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಧೇಯಕ ತರುವುದಕ್ಕೆ ರಾಹುಲ್ ಗಾಂಧಿ ಪಾತ್ರವಿದೆ. ರಾಹುಲ್ ಗಾಂಧಿ ಪಾದಯಾತ್ರೆ ಸಮಯದಲ್ಲಿ ಕಾರ್ಮಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಇವತ್ತು ನನ್ನ ಅದೃಷ್ಟ.. ನಮ್ಮ ನಾಯಕರ ಕಾಳಜಿ ವಿಷಯ.ಕಾನೂನು ತರುವ ಅವಕಾಶ ನನಗೆ ಸಿಕ್ಕಿದೆ. ಈ ವಿಧೇಯಕ ತರಲು ನಮ್ಮ ಸಚಿವ ಸಂಪುಟ ಹಾಗೂ ಸಿಎಂ, ಡಿಸಿಎಂ ಹಾಗೂ ಪ್ರಿಯಾಂಕ್ ಖರ್ಗೆ ಸಹಕಾರ ಜಾಸ್ತಿ ಇದೆ ಎಂದರು. ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಬಿಲ್ ಪಾಸ್ ಆಗಿದೆ.
2025 ನೇ ಸಾಲಿನ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ( ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ ಸುಧೀರ್ಘ ಚರ್ಚೆ ಬಳಿಕ ಅಂಗೀಕಾರವಾಗಿದೆ.











