ಹಾಸನ; ಅವರಿಬ್ಬರು ಪ್ರೀತಿಸಿ ಹೆತ್ತವರ ವಿರೋಧದ ಮಧ್ಯೆ ಅಂತರ್ಜಾತಿ ವಿವಾಹವಾದರು. ಹೆತ್ತವರ ಮುಂದೆ ಚೆನ್ನಾಗಿ ಬದುಕಿ ತೋರಿಸುತ್ತೇವೆ ಎಂಬ ಛಲದೊಂದಿಗೆ ಸತಿಪತಿಗಳಾದವರು. ಆದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾದ ಪತಿಯೇ ತನ್ನ ಪತ್ನಿಯನ್ನು ಉಸಿರು ನಿಲ್ಲಿಸಿದ್ದಾನೆ.
ಹೌದು.. ಅಂದ್ಹಾಗೆ ಇಂತಹದ್ದೊಂದು ಭೀಕರ ಘಟನೆ ಸಾಕ್ಷಿಯಾಗಿದ್ದು ಘಟನೆ ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ. ಹದಿನೇಳು ವರ್ಷಗಳ ಹಿಂದೆ ಹಾಸನ ಹೊರವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್.ಪುರಂ ನಿವಾಸಿಯಾಗಿದ್ದ ವೃತ್ತಿಯಲ್ಲಿ ಪೊಲೀಸ್ ಆಗಿದ್ದ ಲೋಕನಾಥ್ ಪರಸ್ಪರ ಪ್ರೀತಿಸಿ ಪೋಷಕರು ವಿರೋಧದ ನಡುವೆಯೂ ಅಂತರ್ಜಾತಿ ಮದುವೆ ಆಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ದಂಪತಿಗೆ ಇಬ್ಬರೂ ಮುದ್ದಾದ ಗಂಡು ಮಕ್ಕಳು. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ಲೋಕನಾಥ್ ಯಾಕೋ ಸ್ವಲ್ಪ ಚೇಂಜ್ ಆಗಿ ಬಿಟ್ಟಿದ್ದ. ತಾನು ಪ್ರೀತಿಸಿ ಮದುವೆಯಾಗಿದ್ದೇನೆ ಅನ್ನೋದೇ ಮರೆತು ಹೋದಂತೆ ವರ್ತಿಸೋಕೆ ಆರಂಭಿಸಿದ್ದ. ಲೋಕನಾಥ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಇದೇ ವಿಚಾರಕ್ಕೆ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದಲ್ಲದೇ ಹಲ್ಲೆ ಸಹ ನಡೆಸಿದ್ದ. ಪತಿಯ ಕಿರುಕುಳದಿಂದ ಮಮತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಅಲ್ಲದೇ ಸಹಿಸೋಕೆ ಆಗದೆ ತನ್ನ ಹೆತ್ತವರ ಮುಂದೆ ಎಲ್ಲವನ್ನು ಬಾಯ್ಬಿಟ್ಟಿದ್ದಳು.
ಇನ್ನು ಕಳೆದ ಮೂರು ನಾಲ್ಕು ದಿನಗಳಿಂದ ಮಮತಾ – ಲೋಕನಾಥ್ ಮಧ್ಯೆ ಗಲಾಟೆ ತಾರಕ್ಕೇರಿತ್ತು. ಪತಿಯ ಹಿಂಸೆ ತಾಳಲಾರದೇ ಮಮತಾ ಪತಿಗೆ ಹೇಳಿ ದೂರು ಕೋಡ್ತೀನಿ ಅಂತಾ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ಬಂದಿದ್ದಾಳೆ. ಆಕೆಯನ್ನು ಫಾಲೋ ಮಾಡಿಕೊಂಡು ಬಂದ ಲೋಕನಾಥ್ ಮೊದಲೇ ರೆಡಿ ಮಾಡಿಕೊಂಡು ಬಂದಿದ್ದ ಚಾಕುವಿನಿಂದ ಆಕೆಗೆ ಇರಿದಿದ್ದಾನೆ. ಮಮತಾ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದು ಇರಿದ ರಭಸಕ್ಕೆ ಬೆನ್ನಿನಿಂದ ಚಾಕು ಹೊರಗೆ ಬಂದಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಮತಾಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ಅಲ್ಲೇ ಪಕ್ಕದಲ್ಲಿದ್ದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಲೋಕನಾಥ್ನನ್ನು ಹಾಸನ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಗೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಮಾಹಿತಿ ಪಡೆದರು.
ಲೋಕನಾಥ್ ವರದಕ್ಷಿಣೆ ಹಣ, ಸೈಟ್ ಹಾಗೂ ಒಡವೆಗಳನ್ನು ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ದೈಹಿಕವಾಗಿ ಹಲ್ಲೆ ಕೂಡ ನಡೆಸಿದ್ದ. ನನ್ನ ಮಗಳು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಹತ್ತಾರು ಬಾರಿ ಮಾತುಕತೆ ನಡೆಸಿ ಸಂಧಾನ ಮಾಡಿದ್ದರು ಲೋಕನಾಥ್ ತನ್ನ ನೀಚ ಬುದ್ದಿ ಬಿಟ್ಟಿರಲಿಲ್ಲ. ಪತಿಯ ಕಿರುಕುಳದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದರು ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದಂಪತಿ ನಡುವೆ ಏನು ನಡೆದಿದಿಯೋ ಗೊತ್ತಿಲ್ಲ. ಇಂದು ಮಮತಾಳನ್ನು ಕೊಲೆ ಮಾಡಿದ್ದಾನೆ. ಆತನಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಮಮತಾ ತಂದೆ ಶಾಮಣ್ಣ ಹಾಗೂ ಸಹೋದರ ಧರ್ಮಶೇಖರ್ ಆಗ್ರಹಿಸಿದ್ದಾರೆ. ಹಾಡುಹಗಲೇ ಎಸ್ಪಿ ಕಚೇರಿಯಲ್ಲಿ ಆವರಣದಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆದಿರುವುದು ಹಾಸನ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಾಸನ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೇ ಅತ್ತ ಅಮ್ಮ ಸಾವನ್ನಪ್ಪಿದ್ರೆ ಇತ್ತ ಅಪ್ಪ ಜೈಲು ಸೇರಿದ್ದಾನೆ. ಹಾಗಾಗಿ ಮಕ್ಕಳಿಬ್ಬರು ಹೆತ್ತವರಿಲ್ಲದೇ ಅನಾಥರಾಗಿದ್ದಾರೆ.