ಬೆಂಗಳೂರು;ಬಿಹಾರಿಗಳಿಗೆ ಕರ್ನಾಟಕದಲ್ಲಿ ಜಾಗ ಕೊಡುವುದು ಅಪರಾಧವಲ್ಲ, ಆದರೆ ಚುನಾವಣೆಗಾಗಿ ಕೊಡುವುದು ಸಣ್ಣತನ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಗೋವಾದಲ್ಲಿ ಕನ್ನಡ ಸಂಘಕ್ಕೆ ಜಾಗ ಕೇಳಿದ್ದೇವೆ. ಮಹಾರಾಷ್ಟ್ರದಲ್ಲಿ ಕನ್ನಡ ಭವನ ಇದೆ. ದೆಹಲಿಯಲ್ಲಿ ಕನ್ನಡ ಭವನ ಇದೆ. ಬಿಜೆಪಿ ಪ್ರಾದೇಶಿಕ ಅಸ್ಮಿತೆಯನ್ನು ಆಧರಿಸಿ ರಾಷ್ಟ್ರೀಯತೆ ಒಪ್ಪಿಕೊಂಡಿರುವ ಪಕ್ಷ. ಆದರೆ ಚುನಾವಣೆಗೆ ಆಸೆ ತೋರಿಸುವುದು ಸಣ್ಣತನ ಎಂದಿದ್ದಾರೆ.
ಸತಿವ ಸಂಪುಟ ಪುನಾರಚನೆ ಬಗ್ಗೆ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಲೆ ಏರಿಕೆಯ ಕಾರಣಕ್ಕೆ ಜನ ಸಂಕಷ್ಟಕ್ಕೀಡಾಗಿರುವುದು ನಿಮ್ಮ ಗಮನಕ್ಕಿಲ್ಲವೇ?. ಅಕ್ಟೋಬರ್ ತಿಂಗಳೊಳಗೆ ಗುಂಡಿ ಮುಚ್ಚುವ ನಿಮ್ಮ ಡೆಡ್ ಲೈನ್ ಡೆಡ್ ಆಗಿದೆ. ಯಾಕೆ ಗುಂಡಿ ಮುಚ್ಚಿಲ್ಲ, ಇದರ ಬಗ್ಗೆ ಮಾತಾಡಿ. ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಕರ್ನಾಟಕ ನಂಬರ್ 2 . ರೈತರ ಸಂಕಷ್ಟಕ್ಕೆ ಪರಿಹಾರ ನಿಮ್ಮ ಸರ್ಕಾರದಲ್ಲಿ ಇಲ್ಲವೇ?. ಮಟ್ಕಾ ಮತ್ತು ಗಾಂಜಾದ ರಾಜಧಾನಿಯಾಗಿ ಕರ್ನಾಟಕ ಬದಲಾಗುತ್ತಿದೆ. ಮಟ್ಕಾ ಮತ್ತು ಗಾಂಜಾ ಹಾವಳಿ ಎಲ್ಲಾ ಕಡೆ ಇದೆ. ಮಟ್ಕಾ ಮತ್ತು ಗಾಂಜಾಗೆ ರಾಜಾಶ್ರಯ ಸಿಗುತ್ತಿದೆ ಎನ್ನುವ ಅನುಮಾನ ನಮಗಿದೆ . ರಾಜ್ಯದಲ್ಲಿ ಥರ್ಡ್ಸ್ ಹಾವಳಿ ಹೆಚ್ಚಾಗಿದೆ . ಥರ್ಡ್ಸ್ ಹಾವಳಿ ಹೆಚ್ಚಾಗಿದೆ ಎಂದರೆ ಆಡಳಿತದಲ್ಲಿರುವವರು ರಾಜಾಶ್ರಯ ಕೊಡುತ್ತಿದ್ದಾರೆ ಎಂಬುದು ನಮ್ಮ ಅನುಮಾನ ಮತ್ತು ಆರೋಪ ಎಂದಿದ್ದಾರೆ.
ಕರ್ನಾಟಕದಲ್ಲಿ ದಿನನಿತ್ಯ ಹತ್ಯೆ ಮತ್ತು ಅತ್ಯಾಚಾರ ನಡೆಯುತ್ತದೆ.ಇದು ಕರ್ನಾಟಕಕ್ಕೆ ಗೌರವ ತರುವಂತಹದ್ದಲ್ಲ.ಜನರ ಗಮನ ಬೇರೆಡೆ ಸೆಳೆಯಲು ಅಧಿಕಾರ ಹಂಚಿಕೆ, ಸಂಪುಟ ಪುನರಚನೆ ಬಗ್ಗೆ ಮಾತಾಡುತ್ತೀರಿ.ನೀವು ಯಾರನ್ನಾದರೂ ಸಿಎಂ ಮಾಡಿಕೊಳ್ಳಿ, ನಮಗೆ ಸಂಬಂಧ ಇಲ್ಲ. ಆದರೆ ಸಮಸ್ಯೆ ಬಗೆಹರಿಸುವುದಕ್ಕೆ ಏನೂ?. 134 ಪ್ರಣಾಳಿಕೆಯಲ್ಲಿ 9 ಮಾತ್ರ ಕೊಟ್ಟಿದ್ದೀರಿ. ಉಳಿದ 125 ಯಾವಾಗ ಕೊಡುತ್ತೀರಿ, ಅದರ ಬಗ್ಗೆ ಮಾತಾಡಿ .ನೀವು ಯಾರು ದೆಹಲಿ ಹೋಗುತ್ತೀರಿ ಅದು ಸುದ್ದಿ ಆಗಬೇಕಾ?. ಗುತ್ತಿಗೆದಾರರು 60% ಕಮಿಷನ್ ಬಗ್ಗೆ ನಿಮಗೆ ಪತ್ರ ಕೊಟ್ಟಿದ್ದಾರಲ್ವಾ . ಅದನ್ನು ನಿಯಂತ್ರಣ ಮಾಡಲು ಏನು ಕ್ರಮ ಕೈಗೊಂಡಿದ್ದೀರಿ.ಗುತ್ತಿಗೆದಾರರ ಆರೋಪ ಸುಳ್ಳು ಅಂತಾದರೆ ತನಿಖೆ ಮಾಡಿಸಿ. ನೀವು ವಿಪಕ್ಷದಲ್ಲಿದ್ದಾಗ ಏನು ಮಾತಾಡಿದ್ರಿ ನೆನಪಿಸಿಕೊಳ್ಳಿ . ನಿಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಕೆಲವು ಆಡಿಯೋ, ವೀಡಿಯೋ ಹೊರ ಬಂದಿದೆಯಲ್ಲಾ. ಜನ ಐದು ವರ್ಷ ಅಧಿಕಾರ ಕೊಟ್ಟಿರುವುದು ಆಡಳಿತ ಮಾಡಲು ,ಭ್ರಷ್ಟಾಚಾರ ಮಾಡುವುದಕ್ಕಲ್ಲ. ಕೆಲವು ಮಂತ್ರಿಗಳನ್ನು ವಿಷಯಾಂತರ ಮಾಡಲು ನೀವೇ ಬಿಡುತ್ತೀರಿ. ಗೂಗಲ್ ಎಐ ಯಾಕೆ ಆಂಧ್ರಪ್ರದೇಶಕ್ಕೆ ಹೋಯಿತು ಅಂತಾ ಚರ್ಚೆ ಯಾಗದಂತೆ ಬೇರೆ ವಿಷಯ ಬಿಡುತ್ತೀರಿ.ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಎತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ಯಾಗದಂತೆ ನೋಡಿಕೊಳ್ಳಲು ಕುತಂತ್ರಗಾರಿಕೆ ಮಾಡುತ್ತಿದ್ದೀರಿ ಎಂದಿದ್ದಾರೆ.
ಬೆಂಗಳೂರು ಟನಲ್ ರೋಡ್ ಕುರಿತ ಬಿಜೆಪಿ ನಿಲುವಿಗೆ ಡಿಸಿಎಂ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಟನಲ್ ರೋಡ್ ನಲ್ಲಿ ದುಪ್ಪಟ್ಟು ವೆಚ್ಚ ಇದೆ ಎಂಬ ಮಾಹಿತಿ ಇದೆ. ಡಬಲ್ ವೆಚ್ಚ ಎಂದಾಗ ನಮಗೆ ಕಮಿಷನ್ ವಾಸನೆ ಬರುತ್ತದೆ. ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಬಾಟಲ್ ನೆಕ್ ಬಗ್ಗೆ ಬಗ್ಗೆ ಟೆಕ್ನಿಕಲ್ ಆಗಿ ಉತ್ತರಿಸಿ. ಟನಲ್ ಬಗ್ಗೆ ಪೊಲಿಟಿಕಲ್ ಆಗಿ ಬಹಳ ಮಾತಾಡಿದ್ದೀರಿ. ಯಾವಾಗ ನಿಮಗೆ ಸಮರ್ಥನೆ ಮಾಡಲು ಆಗಲ್ವೋ ಆಗ ನೀವು ಏಕವಚನದಲ್ಲಿಯೇ ಮಾತಾಡುತ್ತೀರಿ. ತೇಜಸ್ವಿ ಸೂರ್ಯ 2019 ಮತ್ತು 2024 ರಲ್ಲಿ ಜನ ಆರಿಸಿರುವ ಸಂಸದರು . ಅವರು ಬಿಜೆಪಿ ಯುವ ಮೋರ್ಛಾ ರಾಷ್ಟ್ರೀಯ ಅಧ್ಯಕ್ಷರು .ಹೋಲಿಕೆ ಮಾಡಿದರೆ ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗಿಂತ ಹೆಚ್ಚು ಜ್ಞಾನ ಇದೆ. ಅವರಿಗೆ ಭಾಷೆಯ ಮೇಲೆ ಹಿಡತ ಇದೆ, ಕಳಕಳಿ ಇದೆ.ಅವರು ಯಾವಾಗಲೂ ದೇಶದ ಹೊರಗೆ ಹೋಗಿ ಮಾನ ಹರಾಜು ಹಾಕುವ ಕೆಲಸ ಮಾಡಿಲ್ಲ.ನಿಮ್ಮ ನಾಯಕರು ದೇಶದ ಹೊರಗೆ ಹೋಗಿ ಭಾರತದ ಮಾನ ಹರಾಜು ಹಾಕುವ ಕೆಲಸ ಮಾಡಿದಂತೆ ತೇಜಸ್ವಿ ಸೂರ್ಯ ಮಾಡಿಲ್ಲ.ಯಾಕೆ ವೆಚ್ಚ ಹೆಚ್ಚು ಎನ್ನುವುದನ್ನು ಟೆಕ್ನಿಕಲ್ ಆಗಿ ಮಾತಾಡಿ. ಬರಿ 600 ಕಾರು ಹೋಗಲು 17 ಸಾವಿರ ಕೋಟಿ ಕೊಡಬೇಕಾ ಎಂಬುದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.
ಕ್ರಾಂತಿಕಾರಿಯಾಗಿ ಬೆಂಗಳೂರು ಟ್ರಾಫಿಕ್ ಕಡಿಮೆ ಆಗುತ್ತದೆ, ಬೆಂಗಳೂರು ಬೆಳವಣಿಗೆಗೆ ವೇಗ ಸಿಗುತ್ತದೆ ಎಂದು ಒಪ್ಪುವಂತೆ ನೀವು ವಿವರಿಸಿದರೆ ನಾವು ಒಪ್ಪಿಕೊಳ್ಳುತ್ತೇವೆ. ನಿತಿನ್ ಗಡ್ಕರಿ ಟನಲ್ ರೋಡ್ ಬಗ್ಗೆ ಮಾತಾಡಿದ್ದಾರೆ ಎನ್ನುತ್ತೀರಿ .ಅವರು ಅರ್ಧ ವೆಚ್ಚದಲ್ಲಿ ಮಾಡಿದ್ದಾರೆ. ಅವರ ಬಳಿ ವೆಚ್ಚ ಹೇಗೆ ಕಡಿಮೆ ಆಯಿತು ಎಂದು ಸಲಹೆ ತೆಗೆದುಕೊಳ್ಳಿ. ನಮಗೊಂದು ಅನುಮಾನ ಎಂದರೆ ಅಟ್ಟ ಹತ್ತಲಾಗದವನು ಬೆಟ್ಟ ಹತ್ತುತ್ತಾನಾ?. ಮೊದಲು ಗುಂಡಿ ಮುಚ್ಚಲಾಗದವರು ಸುರಂಗ ಮಾಡುತ್ತೀರಾ?. ಮೊದಲು ಗುಂಡಿ ಇಲ್ಲದ ಬೆಂಗಳೂರು ಎಂದು ತೋರಿಸಿ. ಆಮೇಲೆ ಸುರಂಗ ಆದರೂ ಮಾಡಿ, ಫ್ಲೈ ಓವರ್ ಆದರೂ ಮಾಡಿ. ಆಮೇಲೆ ಆಕಾಶಕ್ಕೆ ಏಣಿ ಬೇಕಾದರೂ ಹಾಕುವಿರಂತೆ ಎಂದಿದ್ದಾರೆ.










