ಬೆಂಗಳೂರು: ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವ ಪುರಾವೆ ಇಡಿಗೆ ಸಿಕ್ಕಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಇಡಿ ಆಸ್ತಿ ವಶಪಡಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವ ಪುರಾವೆ ಇಡಿಗೆ ಸಿಕ್ಕಿದೆ. ಸಿಎಂ ಈಗ ಏನು ಹೇಳುತ್ತಾರೆ?. ಭ್ರಷ್ಟಾಚಾರ ನಡೆದಿಲ್ಲ ಅಂತೀರೋ ಅಥವಾ ನಡೆದಿದೆ ಅಂತ ಜವಾಬ್ದಾರಿ ವಹಿಸಿಕೊಳ್ಳುತ್ತೀರೋ .ಇಡಿ 100 ಕೋಟಿ ಆಸ್ತಿ ವಶಪಡಿಸಿಕೊಂಡಿದೆ ಅಂದರೆ ಭ್ರಷ್ಟಾಚಾರ ನಡೆದಿದೆ ಅಂತಾ.ಈಗ ನೈತಿಕ ಪಾಠ ತಮಗೂ ಅನ್ವಯ ಮಾಡಿಕೊಳ್ಳಿ ಎಂದಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಕೋರ್ಟ್ಗೆ ವರದಿ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೇಳಿದ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿ ಆರ್ ಸಿಬಿ ಫ್ರಾಂಚೈಸಿ ಗೆದ್ದಿದ್ದಕ್ಕೆ ನಾ ಮುಂದೆ, ತಾ ಮುಂದೆ ಅಂತಾ ಮುಂದಾಗಿದ್ದೀರಿ. ಎರಡು ನಿಮಿಷ ಕುಳಿತು ಆಲೋಚನೆ ಮಾಡಿದ್ದರೆ 11 ಜನರ ಸಾವು ತಪ್ಪಿಸಬಹುದಿತ್ತು. ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ, ಜನ ಮರೆತು ಹೋಗಲಿ ಅಂತನಾ?. ಎರಡು ದಿನ ಕಾಯ್ದು ಮಾಡಿದ್ದರೆ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿತ್ತು. ಕಾಂಗ್ರೆಸ್ ನವರೇ ಸಿಕ್ಸರ್, ಫೋರ್ ಹೊಡೆದು ಗಲ್ಲಿಸಿದ ರೀತಿ ನಡೆದುಕೊಂಡರು. ಡಿ.ಕೆ. ಶಿವಕುಮಾರ್ ಬೌಲರ್, ಸಿಎಂ ಬ್ಯಾಟ್ಸ್ ಮನ್, ಪರಮೇಶ್ವರ್ ವಿಕೆಟ್ ಕೀಪರ್ ಆಗಿದ್ರಾ?. ನ್ಯಾಯಾಲಯ ಎರಡು ದಿನದಲ್ಲಿ ವರದಿ ಕೊಡಿ ಅಂದಿರುವುದು ಸರಿ ಇದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನವರು ಈಗಲೂ ತುರ್ತು ಪರಿಸ್ಥಿತಿ ಅಮಲಿನಲ್ಲೇ ಇದ್ದಾರೆ. ಆಗ ಘೋಷಿತ, ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪೆಹಲ್ಗಾಮ್ ನಲ್ಲಿ ಘಟನೆ ನಡೆದಾಗ ವೈಫಲ್ಯ ಅಂತ ಕಾಂಗ್ರೆಸ್ನವರು ಹೇಳಿದರು. ಪ್ರಧಾನ ಮಂತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ನುಗ್ಗಿ ಹೊಡೆದರು. ಅವರಿಗೂ, ಇಲ್ಲಿನ ಕಾಲ್ತುಳಿತಕ್ಕೂ ಹೋಲಿಕೆ ಮಾಡಿದ್ದಾರೆ. ಇದೇ ರೀತಿ ಆದರೆ, ಜನ ನುಗ್ಗಿ ಹೊಡೆಯುತ್ತಾರೆ. ಇದೇ ರೀತಿ ಕ್ರಿಮಿನಲ್, ಅಸಮರ್ಥತೆ ನಡೆದರೆ ಜನರೇ ನುಗ್ಗಿ ಹೊಡೆಯುತ್ತಾರೆ. ಜನ ಇವರನ್ನು ಮೆಟ್ಟಿಲ ಮೇಲೆ ಕೂರಿಸುವ ದಿನ ಬರಲಿದೆ ಎಂದರು.
ಮೋದಿಯವರ ಬಗ್ಗೆ ಬಿ.ಕೆ. ಹರಿಪ್ರಸಾದ್ ಟೀಕೆ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ನವರು ಬಾಯಿ ಬಿಟ್ಟರೆ ಬಣ್ಣಗೇಡು . ಮೊದಲು ಅವರ ನಾಯಕರ ಬಗ್ಗೆ ಮಾತಾಡಲಿ. ಹರಿಪ್ರಸಾದ್ ಸೀನಿಯರ್ ಲೀಡರ್, ನೀವು ಯಾಕೆ ರಾಹುಲ್ ಗಾಂಧಿ ತರಹ ಆಡುತ್ತೀರಿ. ರಾಹುಲ್ ತರಹ ಆಡಿ ಯಾಕೆ ನೀವು ಬಣ್ಣಗೇಡಾಗುತ್ತೀರಿ. ಕಾಂಗ್ರೆಸ್ ನವರು ಸಂಪುಟ ಪುನಾರಚನೆ, ಜಾತಿ ಜನಗಣತಿ ಬಿಟ್ಟು ಮೊದಲು ಕಾಲ್ತುಳಿತಕ್ಕೆ ಉತ್ತರಿಸಲಿ. ಜನ ಸಾಯುತ್ತಿದ್ದರೂ ಹೊಟೇಲ್ ಗೆ ಹೋಗಿ ಮಸಾಲೆ ದೋಸೆ ತಿಂದವರು, ಕಪ್ ಗೆ ಮುತ್ತಿಟ್ಟವರು ಮೊದಲು ದುರಂತಕ್ಕೆ ಸ್ಪಷ್ಟನೆ ಕೊಡಲಿ ಎಂದಿದ್ದಾರೆ.