ಬೆಳ್ತಂಗಡಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಪರವಾಗಿ ವಾದ ಮಂಡನೆ ಮಾಡುತ್ತಿರುವ ವಕೀಲ ನಾರಾಯಣ ಸ್ವಾಮಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ದರ್ಶನ್ ಪರ ವಕೀಲ ನಾರಾಯಣಾ ಸ್ವಾಮಿ ಅವರಿಗೆ ವಕೀಲರಾದ ರಾಕೇಶ್, ಶಶಾಂಕ್, ಮಂಜುನಾಥ್, ಶಿವಕುಮಾರ್ ,ಶೇಷಣ್ಣ , ಸೋಮಶೇಖರ್ ಅವರು ಸಾಥ್ ನೀಡಿದರು.
ಇನ್ನು ಮಂಜುನಾಥನ ದರ್ಶನ ಪಡೆದ ಬಳಿಕ ವಕೀಲ ನಾರಾಯಣ ಸ್ವಾಮಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು. ಇನ್ನು ಜುಲೈ 18 ರಂದು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧರಪಟ್ಟಂತೆ ಚಾರ್ಜ್ ಶೀಟ್ ಕೂಡ ಸಲ್ಲಿಸುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ನಾರಾಯಣಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಜುಲೈ 18 ರಂದು ದರ್ಶನ್ ಅವರ ರಿಟ್ ಅರ್ಜಿಯ ವಿಚಾರಣೆ
ಜೈಲು ಸೇರಿದಾಗಿನಿಂದ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.ಯಾರ ಜೊತೆಯೂ ಮಾತನಾಡದೇ ತಮ್ಮ ಪಾಡಿಗೆ ಸಮಯ ಕಳೆಯುತ್ತಿದ್ದಾರೆ.ಬೇಜಾರಾದರೆ ಹಿಂದಿ ಸಿನಿಮಾ, ಸ್ಫೋರ್ಟ್ಸ್ ಚಾನೆಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಜೈಲಿನ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಭೇದಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಮಲಗಲು ಹಾಸಿಗೆ ಇಲ್ಲದ ಕಾರಣ ನೆಲದಲ್ಲೇ ಮಲಗುತ್ತಿದ್ದು ನಿದ್ದೆಯಿಲ್ಲದೇ ಬಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ಪರವಾಗಿ ಅವರ ವಕೀಲರು ದರ್ಶನ್ ಗೆ ಮನೆಯೂಟ, ಮಲಗಲು ಹಾಸಿಗೆ ಹಾಗೂ ಸಮಯ ಕಳೆಯಲು ಓದಲು ಪುಸ್ತಕ ಒದಗಿಸುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಇಂದು ಈ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಕೃಷ್ಣಕಮಾರ್ ಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ಇದೇ ವಾದ ಮಂಡಿಸಿದ ದರ್ಶನ್ ಪರ ವಕೀಲರು ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದರು. ಆಗ ನ್ಯಾಯಾಧೀಶರು ಈ ಪ್ರಕರಣವನ್ನು ಕೂಡ ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು ಎಂದು ಹೇಳಿ ನಟ ದರ್ಶನ್ ಅವರ ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಮುಂದೂಡಿದರು. ಜುಲೈ 18 ಕ್ಕೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು ಅಂದು ಏನಾಗುತ್ತೆ ಕಾದು ನೋಡ್ಬೇಕು. ಇನ್ನೊಂದು ಕಡೆ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಜುಲೈ 18ಕ್ಕೆ ಮುಕ್ತಾಯವಾಗಲಿದ್ದು ಅಂದೇ ಅವರನ್ನು ನ್ಯಾಯಾಧೀಶರ ಮುಂದೆ ಜೈಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.
ಇದರ ಮಧ್ಯೆ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟನ್ನು ಸಲ್ಲಿಸಿಲ್ಲ. ಹಾಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದನ್ನೇ ಕಾದು ಕೂತಿದ್ದಾರೆ ಆರೋಪಿಗಳ ಪರವಾದ ವಕೀಲರು. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಅದರಲ್ಲಿರುವ ಅಂಶಗಳ ಆಧಾರದ ಮೇಲೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲು ಆರೋಪಿಗಳ ಪರವಾದ ವಕೀಲರು ಪ್ಲ್ಯಾನ್ ಮಾಡಿದ್ದು, ಅದರಂತೆ ಸದ್ಯಕ್ಕೆ ವಕೀಲರು ಕಾದ ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಚಾರ್ಜ್ ಶೀಟ್ ಪೊಲೀಸರು ಸಲ್ಲಿಸುತ್ತಿದ್ದಂತೆ ಆರೋಪಿಗಳ ಪರವಾದ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.