ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಬರೋಬ್ಬರಿ 6 ತಿಂಗಳ ಡಿ ಬಾಸ್ ದರ್ಶನ್ ಅವರ ವನವಾಸ ಅಂತ್ಯವಾಗಿದೆ. 7 ಆರೋಪಿಗಳಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಎ2 ಪವಿತ್ರಾ, ನಾಗರಾಜು, ಅನುಕುಮಾರ್, ಲಕ್ಷ್ಮಣ, ಜಗದೀಶ್, ಪ್ರದೋಶ್ಗೆ ಜಾಮೀನು ಮಂಜೂರು ಮಾಡಿದೆ. ವಿಶ್ವಜಿತ್ ಶೆಟ್ಟಿ ಪೀಠದಿಂದ ಜಾಮೀನು ಮಂಜೂರಾಗಿದೆ. ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ದರ್ಶನ್ ಗ್ಯಾಂಗ್ ನ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಪರವಾಗಿ ಖ್ಯಾತ ಕ್ರಿಮಿನಲ್ ಲಾಯರ್ ಸಿ.ವಿ. ನಾಗೇಶ್ ವಾದವನ್ನು ಮಂಡಿಸಿದ್ದರು. ಸರ್ಕಾರದ ಪರವಾಗಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ರು.
ಅಕ್ಟೋಬರ್ 29 ರಂದು ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಡಿ ಬಾಸ್ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇಂದು ಅವರಿಗೂ ಪೂರ್ಣ ಪ್ರಮಾಣದ ಬೇಲ್ ಸಿಕ್ಕಿದ್ದು ಮತ್ತೆ ಜೈಲು ಸೇರುವ ಆತಂಕದಲ್ಲಿದ್ದ ಅವರಿಗೆ ರಿಲೀಫ್ ಸಿಕ್ಕಿದೆ.