ಬೆಂಗಳೂರು; ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರಂತೆ ನೋಡೋದು ಕಾಂಗ್ರೆಸ್ ಪ್ರವೃತ್ತಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಉದಾಹರಣೆ. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರಂತೆ ನೋಡೋದು ಕಾಂಗ್ರೆಸ್ ಪ್ರವೃತ್ತಿ. ಇಂದು ಹೋಗಿ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಸಭೆ ಮಾಡಿದ್ದಾರೆ. 8 ಜನರನ್ನು ಬಂಧಿಸಲಾಗಿದೆ, ಚಿಕ್ಕಮಗಳೂರಿನ 2 ಹಿಂದೂಗಳು ಕೂಡಾ ಇದ್ದಾರೆ .ನನಗೆ ಗೊತ್ತಿರುವ ಮಟ್ಟಿಗೆ ಅಲ್ಲಿನ ಸ್ಥಳೀಯ ಶಾಸಕರನ್ನು ಕರೆದು ಮಾತಾಡಿಲ್ಲ. ಕೇವಲ ಮುಸ್ಲಿಂ ಮುಖಂಡರನ್ನು ಮಾತ್ರ ಕರೆದು ಸಭೆ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ 25 ಜನ ಕಾಣಿಸುತ್ತಾರೆ. ಆದರೆ ಅಶ್ರಫ್ ಪ್ರಕರಣದಲ್ಲಿ ಸಿಸಿ ಕ್ಯಾಮೆರಾ ಇಲ್ಲದಿದ್ದರೂ 25 ಜನರನ್ನು ಬಂಧಿಸಿದ್ದಾರೆ. ಅಲ್ಪಸಂಖ್ಯಾತರ ಪರ ಇದ್ದೇವೆ ಎಂಬ ಸಂದೇಶ ರವಾನೆಯಾಗಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನ ಬೀದಿಗೆ ಇಳಿಯಬೇಕು. ಹೀಗೆಯೇ ಆದರೆ ಕರಾವಳಿಯಲ್ಲಿ ಕ್ರಾಂತಿಗಳಾಗುತ್ತವೆ. ಪ್ರಕರಣವನ್ನು ಎನ್ ಐಎಗೆ ವಹಿಸಬೇಕು. ಕರಾವಳಿಯಲ್ಲಿ ಎನ್ ಐಎ ಘಟಕ ಸ್ಥಾಪಿಸಬೇಕು. ಮಾತು ಎತ್ತಿದ್ರೆ ಆರ್ ಎಸ್ ಎಸ್, ಬಿಜೆಪಿ. ಇದು ಬಿಟ್ಟರೆ ಬೇರೆ ಮಾತುಗಳಿಲ್ಲ. ಬಿಜೆಪಿ 25 ಪಕ್ಷ ಪರಿಹಾರ ಘೋಷಣೆ ಮಾಡಿರುವುದು ಕುಟುಂಬಸ್ಥರಿಗೆ ಸಹಾಯ ಮಾಡುವುದು ಕರ್ತವ್ಯ ಎಂಬ ಕಾರಣಕ್ಕೆ. ಸೂಕ್ತ ರಕ್ಷಣೆ ಕೊಡಬೇಕು ಎನ್ನುವುದು ಪೊಲೀಸರ ಜವಾಬ್ದಾರಿ. ಹಿಂದೂ ಕಾರ್ಯಕರ್ತನಿಗೆ ರಕ್ಷಣೆ ಕೊಟ್ಟರೆ ಮುಸಲ್ಮಾನರಿಗೆ ಬೇಜಾರಾಗಬಾರದು ಎಂಬುದು ಸರ್ಕಾರದ ನಿಲುವು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ನ ಓಲೈಕೆ ರಾಜಕಾರಣ ದುರದೃಷ್ಟಕರ . ದ.ಕ., ಉಡುಪಿ ಭಾಗದಲ್ಲಿ ಎಲ್ಲಾ ಹಿಂದೂಗಳು ಬೀದಿಗೆ ಇಳಿದರೆ ಪರಿಸ್ಥಿತಿ ಏನಾಗಬಹುದು, ಜಸ್ಟ್ ಊಹಿಸಿ.ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡುವುದಲ್ಲ, ಬಹುಸಂಖ್ಯಾತರಿಗೆ ಕೂಡ.ಎಸ್ಪಿಗೆ ಸಾರ್ವಜನಿಕ ಸಭೆಯಲ್ಲಿ ಹೊಡೆಯಲು ಹೋದ ಸಿದ್ದರಾಮಯ್ಯರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ?. ಕಾಂಗ್ರೆಸ್ ನವರು ಸತ್ಯ ಹರಿಶ್ಚಂದ್ರನ ಮಕ್ಕಳಂತೆ ಮಾತನಾಡುತ್ತಾರೆ, ಆದರೆ ಮಾಡುವುದು ದುರ್ಯೋಧನನ ಕೆಲಸ ಎಂದಿದ್ದಾರೆ.
ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಹೋಗುವ ಬಗ್ಗೆ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಪಾಕಿಸ್ತಾನಕ್ಕೆ ಹೋಗಿ ಆತ್ಮಾಹುತಿ ಬಾಂಬ್ ಬ್ಲಾಸ್ಟ್ ಮಾಡುವುದು ಬೇಡ. ಇಲ್ಲಿಯೇ ಅವರ ಕ್ಷೇತ್ರದಲ್ಲೇ ಆತ್ಮಾಹುತಿ ಮಾಡಿಕೊಳ್ಳಲಿ. ಜಗತ್ತಿಗೆ ಒಂದು ಸಂದೇಶ ಹೋಗಲಿ. ಪಾಕಿಸ್ತಾನದ ವಿರುದ್ಧ ಆತ್ಮಾಹುತಿ ಮಾಡಿಕೊಂಡ ಧೀರೋದ್ಧಾತ ನಾಯಕ ಜಮೀರ್ ಎಂಬ ಸಂದೇಶ ಹೋಗಲಿ. ಸುಮ್ಮನೆ ಇವರೆಲ್ಲರೂ ಪ್ರಚಾರಕ್ಕೆ ಮಾತಾಡುತ್ತಾರೆ ಅಷ್ಟೇ. ಜಮೀರ್ ಮಾತು ಕರಾವಳಿಯಲ್ಲಿ ಯಕ್ಷಗಾನದಲ್ಲಿ ಬರುವ ಹಾಸ್ಯಗಾರನಿಗಿಂತಲೂ ಕೆಳಮಟ್ಟದಲ್ಲಿರುವವರು. ಅದು ಮನರಂಜನೆಗಾಗಿ ಜನರನ್ನು ರಂಜಿಸುವವರು.ಇವರು ಹೇಳಿಕೆಗಾಗಿ ಮಾತಾಡುವವರು ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಒತ್ತಾಯಕ್ಕೆ ಮಣಿದು ಜಾತಿಗಣತಿಗೆ ಒಪ್ಪಿಗೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಈಗ ಅವರು ಬಾಯಿ ಮುಚ್ಚಿ ಕುಳಿತುಕೊಳ್ಳಲಿ. ಅವರು ಹೇಳಿದ್ದು ಆಗಿದೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.