ಬೆಂಗಳೂರು; ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಎನ್ ಡಿಎ ಚುನಾವಣಾ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಡಾ. ಅಶ್ವಥ್ ನಾರಾಯಣ, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎ. ಮಂಜು ಭಾಗಿಯಾಗಿದ್ದರು.ರಾಮನಗರ ಜಿಲ್ಲೆಯ ಬಿಜೆಪಿ-ಜೆಡಿಎಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಎನ್ ಡಿಎ ಮೈತ್ರಿ ಬಳಿಕ ಮೊದಲ ಬಾರಿಗೆ ಬಿಜೆಪಿ ರಾಜ್ಯ ಕಚೇರಿಗೆ ಜೆಡಿಎಸ್ ಪ್ರಮುಖ ನಾಯಕರು ಭೇಟಿ ನೀಡಿದ್ದು ವಿಶೇಷ.
ಇನ್ನು ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೂರೂ ಉಪಚುನಾವಣಾ ಕ್ಷೇತ್ರಗಳಿಗೆ ರಾಜ್ಯದ ರಾಜಕೀಯ ದಿಕ್ಕು ಬದಲಿಸುವ ಶಕ್ತಿ ಇದೆ. ಈಗಾಗಲೇ ಶಿಗ್ಗಾಂವ್ ಗೆದ್ದಾಗಿದೆ ಎಂಬ ವಾತಾವರಣ ಇದೆ.ಚನ್ನಪಟ್ಟಣ ಕ್ಷೇತ್ರ ಗಂಭೀರ ತೆಗೆದುಕೊಳ್ಳಬೇಕು. ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ರಣೋತ್ಸಾಹ ಇದೆ. ಇದು ನಿಖಿಲ್ ಕುಮಾರಸ್ವಾಮಿ ಗೆಲುವು ಅಲ್ಲ, ಎನ್ ಡಿಎ ಗೆಲುವು. ಬಿಜೆಪಿ ಕಾರ್ಯಕರ್ತರು ಗೆಲುವಿಗೆ ಶ್ರಮ ಹಾಕುತ್ತೇವೆ ಅಂತಾ ನಿಖಿಲ್ ಕುಮಾರಸ್ವಾಮಿಗೆ ಇಂದು ಭರವಸೆ ಕೊಟ್ಟಿದ್ದೇವೆ ಎಂದರು.
ಸಭೆ ಬಳಿಕ ಮಾತನಾಡಿದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣಾ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ಸ್ಪರ್ಧೆಗೆ ನನ್ನಲ್ಲಿ ಯಾವುದೇ ಆಕಾಂಕ್ಷೆ ಇರಲಿಲ್ಲ.ಬದಲಾದ ಸ್ಥಿತಿಯಲ್ಲಿ ತಳಮಟ್ಟದ ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ.ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ರಾಜ್ಯ ಮುಖಂಡರು, ಸ್ಥಳೀಯ ಮುಖಂಡರು ಇಂದು ಸಭೆಯಲ್ಲಿ ಭಾಗಿಯಾಗಿದ್ದರು. ವಿಜಯೇಂದ್ರ ಕಾರ್ಯಕರ್ತರನ್ನು ಹುರಿದುಂಬಿಸಿ ಮೂರೂ ಕ್ಷೇತ್ರಗಳ ಗೆಲುವಿಗೆ ಕಾರ್ಯಕರ್ತರಿಗೆ ಸಂದೇಶ ಕೊಟ್ಟಿದ್ದಾರೆ ಎಂದರು.