ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಸಿಎ ಸೈಟ್ ಹಂಚಿಕೆ ಕುರಿತು ರಾಜ್ಯಪಾಲರು ವರದಿ ಕೇಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ರಾಜ್ಯಪಾಲರು ವರದಿ ಕೇಳಿರುವುದು ಬಹಳ ಸಂತೋಷ ಎಂದ್ರು.
ಒಂದೇ ಸೈಟ್ ಬಗ್ಗೆ ನಾನು ಪ್ರಶ್ನೆ ಮಾಡಿರಲಿಲ್ಲ.193 ಸೈಟ್ ಗಳ ಬಗ್ಗೆ ನಾನು ಕೇಳಿದ್ದೆ.ಮೊದಲು ಇದನ್ನು ಬಯಲಿಗೆ ತಂದಿದ್ದು ದಿನೇಶ್ ಕಲ್ಲಹಳ್ಳಿ ಎಂಬ ವ್ಯಕ್ತಿ. ವಿಪಕ್ಷ ನಾಯಕನಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ.ಸಚಿವ ಎಂ.ಬಿ. ಪಾಟೀಲ್ ಮಗನಿಗೆ ಕೂಡಾ ಸೈಟ್ ಹಂಚಿಕೆಯಾಗಿದೆ ಎಂಬ ಅನುಮಾನ ಇದೆ.71 ಜನ ದಲಿತ ಸಮುದಾಯದವರಿಗೆ ಸೈಟ್ ಸಿಗಬೇಕಿದ್ದು, ಐದಾರು ವರ್ಷಗಳಿಂದ ಕಾಯುತ್ತಿದ್ದರೂ ಸಿಕ್ಕಿಲ್ಲ.5-10 ಎಕರೆ ರೀತಿಯಲ್ಲಿ ಸಿಎ ಸೈಟ್ ಗಳನ್ನು ಕೊಡಲಾಗಿದೆ.ಇದು ಗಮನಕ್ಕೆ ಬಂದ ಮೇಲೂ ನಾವು ಸುಮ್ಮನೆ ಕುಳಿತಿರಬೇಕಾ?ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಾನು ಒಬ್ಬರ ವಿಷಯ ಅಂತಾ ಹೇಳಿಲ್ಲ.ನಾನು ಹೇಳದೇ ಇದ್ದರೂ ಸಚಿವರು ಕುಪಿತರಾಗಿಬಿಟ್ಟರು.ನಾನು ಶೆಡ್ ನಾರಾಯಣಸ್ವಾಮಿ ಎಂದರು.ನಾನು ಸೈಟ್ ಪಡೆದುಕೊಂಡಿದ್ದು ಶೆಡ್ ಕಟ್ಟುವುದಕ್ಕೊಸ್ಕರವೇ ಎಂದಿದ್ದಾರೆ.ಸಚಿವ ಎಂ.ಬಿ. ಪಾಟೀಲ್ ಚುನಾವಣಾ ವೆಚ್ಚಕ್ಕೆ ಬಾಗಮನೆ ಡೆವಲಪರ್ಸ್ ಬೆಂಗಳೂರು ಅವರಿಂದ ನಾಲ್ಕು ಕೋಟಿ ಸಾಲ ಪಡೆದಿರುವುದಾಗಿ ಅಫಿಡವಿಟ್ ನಲ್ಲಿ ಹೇಳಿದ್ದಾರೆ.ಹೈಟೆಕ್ ಏರೋಸ್ಪೇಸ್ ಪಾರ್ಕ್ ನಲ್ಲಿ ಎಂಟು ಎಕರೆ ಭೂಮಿ ಸಿಎ ನಿವೇಶನ ಕೊಡಲಾಗಿದೆ.ಮೆ// ವೈ ಗೈ ಇನ್ಸ್ ವೆಸ್ಟೆಂಟ್ ಪ್ರೈವೇಟ್ ಲಿ. ಬಾಗಮನೆ, ಸಿ.ವಿ. ರಾಮನ್ ನಗರ ಇವರಿಗೆ ಕೊಡಲಾಗಿದೆ.ರಾಜಾ ಬಾಗಮನೆ, ದಂಡಿಗಾನಹಳ್ಳಿ ವೆಂಕರಮಣಪ್ಪ ರಾಮಕೃಷ್ಣ ಇಬ್ಬರೂ ವೈ ಗೈ ಮತ್ತು ಬಾಗಮನೆ ಡೆವಲಪರ್ಸ್ ಎರಡೂ ಕಂಪನಿಗೂ ನಿರ್ದೇಶಕರು.ಇವರಿಗೂ ಸಚಿವರಿಗೂ ಏನು ಸಂಬಂಧ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಸಚಿವರು ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಹೈಟೆಕ್ ಏರೋ ಸ್ಪೇಸ್ ಪಾರ್ಕ್ ನಲ್ಲಿ 10.69 ಎಕರೆ ಮೆ// ಹರಿತಾ ಲಾಜಿಸ್ಟಿಕ್ಸ್ ವೇರ್ ಹೌಸಿಂಗ್ ಪ್ರೈ. ಲಿ. ಗೆ ಸಿಎ ಸೈಟ್ ಹಂಚಿಕೆ ಮಾಡಲಾಗಿದೆ.ತೆಲಂಗಾಣದವರಿಗೆ ಈ ಭೂಮಿ ಕೊಡಲಾಗಿದೆ.ತೆಲಂಗಾಣದವರಿಗೆ ಸಿಎ ಸೈಟ್ ನಲ್ಲಿ ಇಲ್ಲಿ ಏನು ಕೆಲಸ?ನಾನು ಕೂಡಾ ವೇರ್ ಹೌಸ್ ಗೆ ತಾನೇ ಭೂಮಿ ತೆಗೆದುಕೊಂಡಿದ್ದು?ನಾನು ಸಿಎ ಸೈಟ್ ಪಡೆದುಕೊಂಡಿಲ್ಲ.ವೇರ್ ಹೌಸ್ ಗೆ ಕೈಗಾರಿಕಾ ಭೂಮಿ ಕೊಡುವುದು.ನಾನು ಕೈಗಾರಿಕಾ ಭೂಮಿಯನ್ನೇ ಪಡೆದಿಕೊಂಡಿದ್ದೇನೆ.ನಾನೊಬ್ಬ ಎಸ್ ಸಿ ಆದರೂ ರಿಯಾಯಿತಿಯಲ್ಲೂ ಸೈಟ್ ಪಡೆದುಕೊಂಡಿಲ್ಲ.ಯಾರ್ಯಾರಿಗೋ ಭೂಮಿ ಕೊಟ್ಟಿರುವ ಉದ್ದೇಶ ಏನು ಅಂತಾ ಈಗ ಸಾರ್ವಜನಿಕರಿಗೆ ಹೇಳಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.










