ಬೆಂಗಳೂರು:ನಮ್ಮ ಬಳಿ ದುಡ್ಡಿಲ್ಲ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿರುಗೇಟು ಕೊಟ್ಟಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿದ್ದೀರಿ, ಎಲ್ಲದರ ಬೆಲೆ ಏರಿಕೆ ಮಾಡಿದ್ದೀರಿ. ಈ ಹಣ ಎಲ್ಲಾ ಎಲ್ಲಿಗೆ ಹೋಗುತ್ತಿದೆ.ಈ ಹಣ ಎಲ್ಲಾ ದೊಡ್ಡ ದೊಡ್ಡ ಹೆಗ್ಗಣಗಳೇ ಖಜಾನೆ ಲೂಟಿ ಹೊಡೆಯಲು ನಿಂತಿರುವಂತಿದೆ. ಆಡಳಿತದ ಮೇಲೆ ಸಿದ್ದರಾಮಯ್ಯ ಆಸಕ್ತಿ ಕಳೆದುಕೊಂಡಿದ್ದಾರೋ ಅಥವಾ ನಿಯಂತ್ರಣ ಕಳೆದುಕೊಂಡಿದ್ದಾರೋ. ಬಿ.ಆರ್. ಪಾಟೀಲ್, ರಾಜೂ ಕಾಗೆ ಕರೆದು ಮಾತಾಡುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಕರೆದು ಮಾತಾಡಲು ಇದೇನು ಖಾಸಗಿ ಸಮಸ್ಯೆಯೇ?. ಜಮೀರ್ ಅಹಮದ್ ರಾಜೀನಾಮೆ ಪಡೆಯಿರಿ ಇಲ್ಲಾ ವಜಾ ಮಾಡಿ. ಅಧಿಕಾರಿಗಳಿಗೆ ಮಾತ್ರ ಅಲ್ಲ, ಮಂತ್ರಿಗಳದ್ದೂ ರೇಟ್ ಕಾರ್ಡ್ ಹಾಕಿ ಎಂದಿದ್ದಾರೆ.
ಲಂಚವನ್ನು ವಿಕೇಂದ್ರೀಕರಣ ಮಾಡುವುದು ಸಮಾಜವಾದವೇ?. ನೀವು ಕ್ರಮ ತಗೊಳ್ರೀ, ಕರೆದು ಮಾತಾಡೋದೇನ್ರೀ ನೀವು?. ನೀವು ಕ್ರಮ ತೆಗೆದುಕೊಳ್ಳದಿದ್ದರೆ ನೀವೂ ಪಾತ್ರಧಾರಿ, ಸೂತ್ರಧಾರಿ ಎನ್ನಬೇಕಾಗುತ್ತದೆ. ನಿಮಗೆ ಇದೆಲ್ಲಾ ಅರಿವಿಲ್ಲದಿದ್ದರೆ ನೀವು ಸಿಎಂ ಸ್ಥಾನಕ್ಕೆ ಅನ್ ಫಿಟ್. ಕಳೆದ ಎರಡು ವರ್ಷಗಳಲ್ಲಿ ಯಾವ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದೀರಿ?. ಬಿಜೆಪಿಗೆ ಯಾರು ಬರುತ್ತಾರೋ ಬಿಡುತ್ತಾರೋ ನಮಗೆ ಈಗ ಆಸಕ್ತಿ ಇಲ್ಲ. ಭ್ರಷ್ಟಾಚಾರದ ಪಾತ್ರಧಾರರಿಗೆ ಶಿಕ್ಷೆ ಆಗಬೇಕು, ಇದು ನಮಗೆ ಇರುವ ಆಸಕ್ತಿ ಎಂದಿದ್ದಾರೆ.
ಬಿಜೆಪಿ ಕಚೇರಿಗೆ ಯಡಿಯೂರಪ್ಪ ಭೇಟಿ ವಿಚಾರದ ಬಗ್ಗೆ ಮಾತನಾಡಿ ಯಡಿಯೂರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು.ಅವರ ಮಾರ್ಗದರ್ಶನವನ್ನು ಎಲ್ಲಾ ಕಾಲಕ್ಕೂ ನಾವು ಪಡೆಯುತ್ತೇವೆ. ನಮ್ಮ ಶಕ್ತಿ ಮೀರಿ ನಾವು ಹೋರಾಟ ಮಾಡುತ್ತಿದ್ದೇವೆ.ಈ ಸರ್ಕಾರದ ಭಂಡತನಕ್ಕೆ ಯಾರ ಹತ್ತಿರ ಉತ್ತರ ಇದೆ. ಸಾರ್ವಜನಿಕವಾಗಿ ಬೆತ್ತಲಾದ ಮೇಲೂ ಮರ್ಯಾದೆ ಇಲ್ಲದವರ ತರಹ ಓಡಾಡುತ್ತಿರುವವರಿಗೆ ಏನು ಹೇಳೋದು?. ಸಿಎಂ ಕರೆದು ಮಾತಾಡೋದಕ್ಕೆ ಇದೇನು ಹೆಣ್ಣು ಕೊಟ್ಟು ತರೋದಾ?.ಬಿಜೆಪಿ ಯಾವತ್ತೂ ದುರ್ಬಲ ಆಗುವುದಿಲ್ಲ ಎಂದರು.ಯಡಿಯೂರಪ್ಪನವರ ರಾಜ್ಯ ಪ್ರವಾಸ ವಿಚಾರದ ಬಗ್ಗೆ ಮಾತನಾಡಿ ಪಕ್ಷ ಏನು ನಿರ್ಧಾರ ಮಾಡುತ್ತದೋ ಅದು, ಪಕ್ಷ ಬಿಟ್ಟು ನಾವು ಇಲ್ಲ. ಯಡಿಯೂರಪ್ಪನವರ ಪಕ್ಷದ ಕಚೇರಿಗೆ ಬರುವುದಕ್ಕೆ ಬಂದ ಟೀಕೆಗಳಿಗೆ ನಾನು ಉತ್ತರಿಸಲ್ಲ. ಸರ್ಕಾರಕ್ಕೆ ನಾವು ಮಾತಿನಲ್ಲಿ ಹೊಡೆಯುತ್ತಿದ್ದೇವೆ. ಜನ ಕಾಲಿನಲ್ಲಿ ಇರುವುದನ್ನು ತೆಗೆದುಕೊಂಡು ಹೊಡೆಯುವ ದಿನ ದೂರ ಇಲ್ಲ. ಮೈತ್ರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಶೈಲಿ ಭಿನ್ನವಾಗಿದ್ದರೂ ಉದ್ದೇಶ ಒಂದೇ ಇದೆ.ಕೆಲವು ಸಲ ಒಟ್ಟಾಗಿ ಹೋರಾಟ ಮಾಡಿದ್ದೇವೆ, ಸಂಘಟನಾತ್ಮಕವಾಗಿಯೂ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.