ಬೆಂಗಳೂರು; ಬಾಂಧವ್ಯ ಕೆಡಿಸಬೇಕು ಅಂತಾನೇ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಾವಿರಾರು ವರ್ಷಗಳಲ್ಲಿ ದೇಶದಲ್ಲಿ ಹೆಣ್ಣಿಗಾಗಿ, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ನಡೆದಿವೆ. ಆದರೆ ಭಾಷೆಗಾಗಿ ಯುದ್ಧ ನಡೆದಿಲ್ಲ. ಚಾಲುಕ್ಯರು, ಚೋಳರು ಭಾಷೆಯನ್ನು ಕನ್ನಡದ ಮೇಲೆ ಹೇರಲಿಲ್ಲ.ಇಲ್ಲಿರುವುದು ಭಾಷಾ ಬಾಂಧವ್ಯ. ಭಾಷೆ ಬೆಂಕಿ ಹಚ್ಚಲು ಕಾರಣ ಆಗಬಾರದು. ಕಿಡಿಗೇಡಿಗಳು ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗಂತ ನಾವು ಇನ್ನೊಂದು ಭಾಷೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಇನ್ನೊಂದು ಭಾಷೆಯನ್ನು ಪ್ರೀತಿಸಿ, ಗೌರವಿಸೋಣ.ಅದು ಕೂಡಾ ಸಹೋದರ ಭಾಷೆ ಎಂದು ಅರ್ಥ ಮಾಡಿಕೊಂಡು ಭಾಷಾ ಬಾಂಧವ್ಯ ಗಟ್ಟಿಗೊಳಿಸೋಣ. ಬಾಂಧವ್ಯ ಕೆಡಿಸಬೇಕು ಅಂತಾನೇ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಾಗ ಬೆಂಬಲಿಸಿ ಎಂಬ ಡಿಸಿಎಂ ಹೇಳಿಕೆ ಮತ್ತು ರಾಜೀನಾಮೆ ಕೊಡಬೇಕಾ ಎಂಬ ಗೃಹ ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಿ ಟಿ ರವಿ, ನಾನು ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕತ್ವ ವಹಿಸುತ್ತಾರೆ ಎಂಬ ಬಗ್ಗೆ ಚರ್ಚೆ ಮಾಡಲು ಬಯಸಲ್ಲ. ನಾಯಕತ್ವ ಎನ್ನುವುದು ಜನ ಕೊಡಬೇಕಾಗಿರುವುದು. ಜನಪರ ಕಾರ್ಯ ಮತ್ತು ಜನಪರ ಹೋರಾಟದ ಮೂಲಕ ನಾಯಕತ್ವ ರೂಪುಗೊಳ್ಳುತ್ತದೆ. ಯಾರು ಜನಪರ ಕಾರ್ಯ ಮಾಡುತ್ತಾರೋ ಅವರು ಜನ ನಾಯಕರಾಗುತ್ತಾರೆ. ಅವರ ಪಕ್ಷದಲ್ಲಿ ಯಾರು ನಾಯಕತ್ವ ವಹಿಸಬೇಕು ಎಂಬುದು ನನಗೆ ಸಂಬಂಧಪಟ್ಟಿದ್ದಲ್ಲ.ಕಿಡಿಗೇಡಿಗಳು, ಕ್ರಿಮಿನಲ್ ಗಳು ನಿರ್ಭಯರಾಗಿದ್ದಾರೆ, ಸಜ್ಜನರು ಭಯ ಭೀತರಾಗಿದ್ದಾರೆ. ಯಾವಾಗಲೂ ಒಳ್ಳೆಯ ಆಡಳಿತದಲ್ಲಿ ಸಜ್ಜನರು ನಿರ್ಭಯರಾಗಿರಬೇಕು.ಕಾಂಗ್ರೆಸ್ ಆಡಳಿತದಲ್ಲಿ ದುಷ್ಟರು, ಅತ್ಯಾಚಾರಿಗಳು, ಕೊಲೆಗಡುಕರು, ದುರಾಚಾರಿಗಳು, ಭ್ರಷ್ಟರು ನಿರ್ಭಯರಾಗಿದ್ದಾರೆ. ಭ್ರಷ್ಟರು, ಕೊಲೆಗಡುಕರಿಗೆ ನಮ್ಮನ್ನು ಇಲ್ಲಿ ರಕ್ಷಣೆ ಮಾಡುವವರು ಇದ್ದಾರೆ ಎಂಬ ಭಾವನೆ ಅಪಾಯಕಾರಿ. ಅಂತಹವರಿಗೆ ರಾಜಕೀಯ ರಕ್ಷಣೆ ಕೊಡುವುದನ್ನು ನಿಲ್ಲಿಸಬೇಕು.ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ತೆಗೆದುಕೊಂಡ ಕಠಿಣ ಕ್ರಮಗಳಿಂದ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತಹಬದಿಗೆ ಬಂತು ಎಂದಿದ್ದಾರೆ.
ಒಳ್ಳೆಯದನ್ನು ಎಲ್ಲಿದ್ದರೂ ಸ್ವೀಕರಿಸಬೇಕು ಅಂತಾ ಶಾಸ್ತ್ರ ಹೇಳುತ್ತದೆ. ಕರ್ನಾಟಕದಲ್ಲಿ ಒಳ್ಳೆಯದನ್ನು ಬಿಟ್ಟು ಅವರು ಬೇರೆ ಬೇರೆಯದನ್ನು ಸ್ವೀಕರಿಸಲು ಹೊರಟಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಂತೂ ಅವರು ಕೊಡುತ್ತಿರುವ ಹೇಳಿಕೆಗಳನ್ನು ಗಮನಿಸಿದಾಗ ರಾಷ್ಟ್ರೀಯ ಪಕ್ಷವೋ ಪ್ರಾದೇಶಿಕ ಪಕ್ಷವೋ ಅಂತಾ ಅನುಮಾನ ಶುರುವಾಗುತ್ತದೆ. ಸಮಾಜದ ವಿರುದ್ಧದ ವರ್ತನೆಯನ್ನು ಕೆಲವರ ಜೊತೆ ಸೇರಿ ಕಾಂಗ್ರೆಸ್ ಕೂಡಾ ಮಾಡುವುದು ಶುರುವಾಗಿಬಿಟ್ಟಿದೆ .ಪ್ರಾದೇಶಿಕ ಉನ್ಮಾದವನ್ನು ತಲೆಗೇರಿಸಿಕೊಂಡ ಹಾಗೆ ಕೆಲವು ಪ್ರಾದೇಶಿಕ ಪಕ್ಷಗಳು ನಡೆದುಕೊಳ್ಳುವ ರೀತಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ.ಯಾವುದನ್ನು ವಿರೋಧಿಸಬೇಕು, ಯಾವುದನ್ನು ಸಮರ್ಥಿಸಬೇಕು ಎಂಬ ಪ್ರಜ್ಞೆಯನ್ನೇ ಕಾಂಗ್ರೆಸ್ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಬೇಸರ ಹೊರ ಹಾಕಿದ್ರು.
ನನ್ನನ್ನು ಕಡೆಗಣಿಸಬೇಡಿ ಎಂಬ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಶಿಂಧೆ ನಮ್ಮ ಡಿಸಿಎಂ, ಅವರು ಸಿಎಂ ಆಗಿದ್ದವರು. ಅವರನ್ನು ಕಡೆಗಣಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ?. ಕಡೆಗಣಿಸುವ ಪ್ರಶ್ನೆಯೇ ಉದ್ಭವ ಆಗಲ್ಲ. ಬಿಜೆಪಿಗೆ ಅತೀ ಹೆಚ್ಚು ಶಾಸಕರಿದ್ದಾಗಲೂ ಅವರನ್ನು ನಾವು ಸಿಎಂ ಮಾಡಿದ್ದೆವು, ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗಿದ್ದರು. ಹಾಗಾಗಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಎನ್ ಡಿಎ ಯ ಒಂದು ಭಾಗ.ನಾವು ಅವರನ್ನು ಗೌರವಿಸಲೇಬೇಕು, ಅವರ ಬಗ್ಗೆ ನಮಗೆ ಗೌರವ ಇದೆ ಎಂದ್ರು. ಆ ಗೌರವ ಇಟ್ಟುಕೊಂಡೇ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ರು.