ಬೆಂಗಳೂರಿನಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಸಭೆ ರಾಜಭವನ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ ಚುನಾವಣೆಗಳ ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಒಂದೂವರೆ ವರ್ಷಗಳ ಬಳಿಕ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಿದ್ದರು. ಸಭೆಗೆ ಪರಾಜಿತ ಅಭ್ಯರ್ಥಿಗಳಾದ ಬಿ. ಶ್ರೀರಾಮುಲು, ಕುಮಾರ್ ಬಂಗಾರಪ್ಪ, ಸೋಮಶೇಖರ್ ರೆಡ್ಡಿ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಕೆಲವರು ಗೈರಾಗಿದ್ದರು.
ಸಭೆ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಚುನಾವಣೆ ಆಗಿ ಒಂದೂವರೆ ವರ್ಷ ಆಗಿದೆ. ಚುನಾವಣಾ ಸೋಲು ಅನುಭವಿಸಿದವರು ಮೋಡ ಕವಿದ ವಾತಾವರಣದಲ್ಲಿ ಇರುತ್ತಾರೆ. ಅವರನ್ನು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಎಲ್ಲರನ್ನೂ ತೊಡಗಿಸಿಕೊಳ್ಳಲು ಅಧ್ಯಕ್ಷ ವಿಜಯೇಂದ್ರ ಇಂದು ಅವರ ಜೊತೆ ಮಾತುಕತೆಗೆ ಕರೆದಿದ್ದಾರೆ. ಇದು ಪಕ್ಷದ ಚಟುವಟಿಕೆಗೆ ಎಲ್ಲರನ್ನೂ ಕೂಡಿಸುವ ಪ್ರಯತ್ನ. ಸೋತ ಮೇಲೆ ತಟಸ್ಥರಾಗಿ ಇರುವವರನ್ನು ಪಕ್ಷದ ಚಟುವಟಿಕೆಯಲ್ಲಿ ತೊಡಿಗಿಸುವ ಪ್ರಯತ್ನ ಅಷ್ಟೇ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಮಾಜಿ ಶಾಸಕರು, ಪರಾಜಿತರ ಸಭೆ ನಡೆಸಿದ್ದೇವೆ. ನಾನು ಅಧ್ಯಕ್ಷನಾದ ಮೇಲೆ ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿ.ಪಂ., ತಾ.ಪಂ. ಚುನಾವಣೆ ಎದುರಿಸಬೇಕು ಅಂತಾ ಚರ್ಚೆ ಮಾಡಿದ್ದೇವೆ. ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳು ಇರುತ್ತವೆ. ಅದೆಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ.ಯಡಿಯೂರಪ್ಪ ಸೇರಿ ಹಿರಿಯರು ಎಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇವತ್ತಿನ ಸಭೆ ಯಾವುದೇ ಬಲ ಪ್ರದರ್ಶನ, ಯಾರನ್ನೋ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಅಂತಾ ಮಾಡಿರುವುದಲ್ಲ. ಪಕ್ಷವನ್ನು ಬಲಪಡಿಸಲು ನಾನು ಚರ್ಚೆ ಮಾಡಿದ್ದೇವೆ. ರಾಜ್ಯದ ಅಧ್ಯಕ್ಷನಾಗಿ ಪಕ್ಷವನ್ನು ಬಲಪಡಿಸಬೇಕು ಅಂತಾ ನನಗೂ ಇದೆ ಎಂದರು.
ಕಾಂಗ್ರೆಸ್ ನಲ್ಲಿ ಡಿನ್ನರ್ ಪೊಲಿಟಿಕ್ಸ್ ವಿಚಾರದ ಬಗ್ಗೆ ಮಾತನಾಡಿ ಯಾವಾಗ ಸಚಿವರ ಮನೆಯಲ್ಲಿ ಶಾಸಕರ ಮನೆಯಲ್ಲಿ ಊಟಕ್ಕೆ ಸೇರಿಸಿದರೋ ಆಗಲೇ ಸಿದ್ದರಾಮಯ್ಯನವರ ಆಟ ಪ್ರಾರಂಭವಾಗಿದೆ. ಡಿ.ಕೆ. ಶಿವಕುಮಾರ್ ಅವರು ಬೆಳಗಾವಿ ಅಧಿವೇಶನದಲ್ಲಿ, ಅಧಿಕಾರ ಸಿಗದಿದ್ದರೆ ಒದ್ದು ಕಿತ್ತುಕೊಳ್ಳಬೇಕು ಎಂದು ಅವರ ಗುರು ಹೇಳಿದ್ದರು ಎಂದು ಹೇಳಿದ್ದರು. ಪವರ್ ಶೇರಿಂಗ್ ಬಗ್ಗೆ ಅವರೇ ಹೇಳಬೇಕು. ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆ. ಹೈಕಮಾಂಡ್ ಬೇಡ ಅಂದರೂ ಅವರ ಡಿನ್ನರ್ ಪಾಲಿಟಿಕ್ಸ್ ಮುಂದುವರಿಯುತ್ತದೆ. ಡಿ.ಕೆ. ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮುಂದುವರೆಸುತ್ತಾರೆ ಎಂದು ತಿಳಿಸಿದ್ರು.
ಅಧಿಕಾರ ಒದ್ದು ಕಿತ್ತುಕೊಳ್ಳಬೇಕು ಎಂಬ ಡಿ.ಕೆ. ಶಿವಕುಮಾರ್ ಮಾತಿನ ಮರ್ಮ, ಅರ್ಥ ಏನು ಅಂತ ಅರ್ಥ ಮಾಡಿಕೊಳ್ಳಿ. ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಅಂತ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೇ ಹೇಳಬೇಕು. ಆದರೆ ನಮಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವಧಿ ಮುಗಿಯುತ್ತಿದೆ. ಅಧಿಕಾರ ಒದ್ದು ಕಿತ್ತುಕೊಳ್ಳಬೇಕು ಎನ್ನುವ ದಾಳವನ್ನೇ ಸಿದ್ದರಾಮಯ್ಯ ಮುಂದುವರೆಸಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದರು.