ಮನೆ Latest News ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ; ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ; ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

0

ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,  ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಶಾಸಕರಾದ ಕೆ. ಗೋಪಾಲಯ್ಯ, ಸಿಮೆಂಟ್ ಮಂಜುನಾಥ್, ಭೈರತಿ ಬಸವರಾಜು, ಸಿ.ಕೆ. ರಾಮಮೂರ್ತಿ, ಭಾರತಿ ಶೆಟ್ಟಿ, ಎನ್. ರವಿಕುಮಾರ್, ಎಸ್. ಮುನಿರಾಜು, ಎಂ. ಕೃಷ್ಣಪ್ಪ, ರವಿಸುಬ್ರಮಣ್ಯ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಜೂನ್ 4 ರಂದು ಸಿಎಂಗೆ ಸಲಹೆ ಬರುತ್ತದೆ. ಸಿದ್ದರಾಮಯ್ಯನವರೇ ರಾಜ್ಯದಲ್ಲಿ ನಿಮ್ಮ ಜನಪ್ರಿಯತೆ ಪಾತಾಳಕ್ಕೆ ಹೋಗುತ್ತಿದೆ. ಆರ್ ಸಿಬಿ ಜನಪ್ರಿಯತೆ ಕಿತ್ತುಕೊಂಡರೆ ನಿಮ್ಮ ಇಮೇಜ್ ಜಾಸ್ತಿಯಾಗುತ್ತದೆ ಅಂತಾ ಸಲಹೆಗಾರರು ಸಲಹೆ ಕೊಟ್ಟಿದ್ದಾರೆ. ಸಂಭ್ರಮಾಚರಣೆಗೆ ಸಿಎಂ ಮತ್ತು ಡಿಸಿಎಂ ನಡುವೆ ಹುಚ್ಚಾಟ ಪ್ರಾರಂಭವಾಯಿತು. ಇವರ ಹುಚ್ಚಾಟದ ಪರಿಣಾಮ ಹನ್ನೊಂದು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಿಎಂ, ಡಿಸಿಎಂ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹುಚ್ಚಾಟಕ್ಕೆ ಬಿದ್ದರು. ಆರ್ ಸಿಬಿ ವಿಜಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟರು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹನ್ನೊಂದು ಜನರ ಸಾವು ರಾಜ್ಯ ಸರ್ಕಾರದ ಪ್ರಾಯೋಜಿತ ಕೊಲೆ. ಸಿಎಂ, ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿದಷ್ಟೂ ರಾಜ್ಯಕ್ಕೆ ಒಳಿತು. ಇದಕ್ಕೆ ಬಿಜೆಪಿ ಬೀದಿಗೆ ಇಳಿದು ಹೋರಾಟ ಮಾಡಬೇಕಿದೆ ಎಂದರು. ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಹನ್ನೊಂದು ಜನರ ಸಾವಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಹನ್ನೊಂದು ಜನರ ಕೊಲೆಯ ಶಾಪ ಈ ಸರ್ಕಾರಕ್ಕೆ ತಟ್ಟುತ್ತಿದೆ. ರೈತರ ಶಾಪ ತಟ್ಟಿ ಹಲವು ಸರ್ಕಾರಗಳು ಹೋಗಿವೆ. ಅದೇ ರೀತಿ ಯುವಕರ ಶಾಪದಿಂದ ಈ ಸರ್ಕಾರ ಜಾಸ್ತಿ ದಿನ ಉಳಿಯುವುದಿಲ್ಲ. ಈ ಕಾರ್ಯಕ್ರಮ ಯಾತಕ್ಕಾಗಿ ಮಾಡಿದ್ರಿ?. ಅಲ್ಲಿ ಆರ್ ಸಿ ಬಿ ಗೆದ್ದಿದ್ದು ಕೊಹ್ಲಿ ಟೀಮ್ ಅಥವಾ ಸಿದ್ದರಾಮಯ್ಯ, ಡಿ.ಕೆ.  ಟೀಮ್  ಅಂತಾ ಗೊತ್ತಿಲ್ಲ. ಗವರ್ನರ್ ಗೆ ಈ ಕಾರ್ಯಕ್ರಮದ ಬಗ್ಗೆ ಗೊತ್ತೇ ಇರಲಿಲ್ಲ. ಗವರ್ನರ್ ರನ್ನು ಕರೆದುಕೊಂಡು ಹೋದವರು ಸಿಎಂ, ಡಿಸಿಎಂ. ಈಗ ಕಾರ್ಯಕ್ರಮ ಯಾರು ಮಾಡಿದರು ಗೊತ್ತೇ ಇಲ್ಲ ಅಂತಾರೆ. ಈ ಕಾರ್ಯಕ್ರಮ ಸಿದ್ದರಾಮಯ್ಯ ಅನುಮೋದನೆ ಬಿದ್ದ ಬಳಿಕವೇ ಮಾಡಿದ್ದು. ನಾಚಿಕೆ ಆಗಲ್ಲವೇ ನಿಮಗೆ? .ಅರ್ ಸಿ ಬಿ, ಎಸಿಬಿ ಅಂತ ಮಾಡಿದ್ರಲ್ಲಾ.ಕಾರ್ಯಕರ್ತರು ಎಲ್ಲರೂ ಇವತ್ತು ಅರೆಸ್ಟ್ ಆಗಲೇಬೇಕು. ಯಾಕೆಂದರೆ ಪೊಲೀಸರು ಈಗ ಸಸ್ಪೆಂಡ್ ಆಗಿದ್ದಾರೆ.ನಾನೊಬ್ಬ ಅಧಿಕಾರಿಗೆ ಕೇಳಿದ್ದೆ, ಅವರು ನಿಮ್ಮದೇ ಅಣ್ಣ ಏನು ಬೇಕಾದರೂ ಮಾಡಿ ಈ ಮನೆಹಾಳರು ನಮ್ಮನ್ನೇ ಸಸ್ಪೆಂಡ್ ಮಾಡಿದ್ದಾರೆ ಅಂತಾ ಹೇಳಿದರು.

ಅಧಿಕಾರಿಗಳ ಮಕ್ಕಳು ಪಾಪ ಯಾರೂ ಫೋಟೋ ತೆಗೆಸಿಕೊಂಡಿಲ್ಲ. ಫೋಟೋ ತೆಗೆಸಿಕೊಂಡಿದ್ದು ಸಿಎಂ, ಮಂತ್ರಿ ಮಕ್ಕಳು. ಪಾಪ ಅಮಾನತು ಆದವರು ಪೊಲೀಸರು. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅವರ ಹಿಂದೆ ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಟ್ಟು ಮನೆಗೆ ತೊಲಗಬೇಕು. ಇದು ಯಾವುದೋ ಫ್ರಾಡ್ ಕೇಸ್ ಅಲ್ಲ, ಇದೊಂದು ಕೊಲೆ. ಪುಷ್ಪ ಸಿನಿಮಾ‌ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಬಂದಾಗ ಕಾಲ್ತುಳಿತ ಆಗಿತ್ತು. ಪಾಪ ಅವರನ್ನು ಕರೆದುಕೊಂಡು ಹೋಗಿ ಜೈಲಿಗೆ ಹಾಕಿದರು. ಇಲ್ಲಿ ಮಾತ್ರ ಪೊಲೀಸರನ್ನು ಸಸ್ಪೆಂಡ್  ಮಾಡಲಾಗಿದೆ. ನಿಮಗೆ ಒಂದು ನ್ಯಾಯ, ಪೊಲೀಸರಿಗೆ ಒಂದು ನ್ಯಾಯ ಎಂದು ಆಕ್ರೋಶ ಹೊರ ಹಾಕಿದರು.