ಬೆಂಗಳೂರು: ಮುಡಾ ಪ್ರಕರಣ ತನಿಖೆಗೆ ಕೋರ್ಟ್ ಆದೇಶ ಹಿನ್ನೆಲೆ ಮುಡಾ ಪ್ರಕರಣ ತನಿಖೆಗೆ ಕೋರ್ಟ್ ಆದೇಶ ಹಿನ್ನೆಲೆ ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿತು.ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಬಿಜೆಪಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಶಾಸಕರು ಭಾಗಿಯಾಗಿದ್ದರು. ಇನ್ನು ಅನಾರೋಗ್ಯದ ಕಾರಣದಿಂದ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೈರಾಗಿದ್ದರು. ನಾಯಕರು ಪ್ರತಿಭಟನೆಯ ಉದ್ದಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಇನ್ನು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ಎರಡು ಕೋರ್ಟ್ ಗಳ ಆದೇಶ ಬಂದಿದೆಈಗ ಸಿದ್ದರಾಮಯ್ಯ ಏನ್ ಹೇಳ್ತಾರೆ?.ನಮ್ಮ ಆರೋಪ ರಾಜಕೀಯ ಪ್ರೇರಿತ ಆಗಿದ್ರೆ ಕೋರ್ಟ್ ಗಳು ಯಾಕೆ ಆದೇಶ ಮಾಡ್ತವೆ?ಇದು ರಾಜಕೀಯ ಆರೋಪ ಅಂತ ಹೇಳಿಕೊಂಡು ಸಿದ್ದರಾಮಯ್ಯ ದೊಂಬರಾಟ ಆಡ್ತಿದ್ದಾರೆ.ಸೂಕ್ತ ತನಿಖೆ ಆಗಲು ಸಿದ್ದರಾಮಯ್ಯ ರಾಜೀನಾಮೆ ಕೊಡಲಿ.ಕಾಂಗ್ರೆಸ್ ನಲ್ಲಿ ಗೊಂದಲ ಶುರುವಾಗಲಿದೆ. ಭಿನ್ನಮತ ಶುರುವಾಗಲಿದೆ, ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ.ಶಾಸಕರು ಗುಂಪು ಗುಂಪು ಸಭೆ ಮಾಡಲಿದ್ದಾರೆ.ಕಾಂಗ್ರೆಸ್ ನಲ್ಲಿ ದಂಗೆ ಏಳಲಿದೆ ಎಂದರು.
ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ ಸಂವಿಧಾನದ ಪುಸ್ತಕ ಹಿಡಿದಾಗ ಅದರಲ್ಲಿ ಎಷ್ಟು ಪೇಜ್ ಇದೆ ಅಂತಾ ಕೇಳಿದಾಗ ತಬ್ಬಿಬ್ಬಾದ ನಾಯಕನ, ವಿದೇಶದಲ್ಲಿ ದೇಶವನ್ನು ತೆಗಳುವ ನಾಯಕನ ಕೆಳಗೆ ಇರುವ ನಾಯಕನಿಗೆ ಎಷ್ಟು ಘನತೆ ಇದೆ ಅಂತಾ ಹೇಳಬೇಕಿಲ್ಲ.ಈಗ ಸಿದ್ದರಾಮಯ್ಯ ಮಾತು ಒಂದು ಕೃತಿ ಒಂದು ಅಂತಾ ಗೊತ್ತಾಗಿದೆ.ಕೋರ್ಟ್ ಆದೇಶ ನೀಡಿದರೂ ಪಾಲಿಸದೇ ಇದ್ದಾಗ ಕೋರ್ಟ್ ಗಳು ಕೂಡಾ ಪ್ರಯೋಜನಕ್ಕೆ ಬರುತ್ತಿಲ್ವಾ ಅಂತಾ ಅನುಮಾನ ಬರುತ್ತದೆ.ಬಹುಶಃ ಅರವಿಂದ ಕೇಜ್ರಿವಾಲ್ ಫೋನ್ ಮಾಡಿ ಹೇಳಿರಬಹುದು.ಹೆದರಿಕೊಳ್ಳಬೇಡಿ, ಜೈಲಿನಲ್ಲೂ ವ್ಯಾಪಾರ ಮಾಡಿಕೊಳ್ಳಬಹುದು ಅಂತಾ ಕೇಜ್ರಿವಾಲ್ ಹೇಳಿರಬಹುದು.ಅವರ ಅಕ್ಕಪಕ್ಕದಲ್ಲಿರುವವರು ಸಿಎಂಗೆ ರಾಜೀನಾಮೆ ಕೊಟ್ಟರೆ ಬಿಜೆಪಿಯವರು ಅಧಿಕಾರಕ್ಕೆ ಬಂದುಬಿಡಬಹುದು ಎಂದು ಹೇಳಿರಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಭಟನಾ ಮಾತನಾಡಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು.ನಾನು ಬಣ್ಣ ಬದಲಾಯಿಸುವವನು, ನನಗೂ ಗೋಸುಂಬೆಗೂ ಸಂಬಂಧ ಇದೆ ಅಂತಾ ನೀವು ಭಾವಿಸುವುದಾದರೆ ಸರಿ.ಅರ್ಕಾವತಿ ಹಗರಣ ನೀವು ಮಿಸ್ಟರ್ ಕ್ಲೀನ್ ಅಲ್ಲಾ ಅಂತಾ ತೋರಿಸುತ್ತಿದೆ.ನೀವು ಎಷ್ಟು ಜನ ಭ್ರಷ್ಟರನ್ನು ಸಾಕಿದ್ದೀರಿ ಪಟ್ಟಿ ಕೊಡಬೇಕಾ?.ಮುಡಾದಲ್ಲಿ ಪರಿಶುದ್ಧವಾಗಿದ್ದರೆ 14 ಸೈಟ್ ಕೊಡುತ್ತಿದ್ರಾ?.ಇನ್ನೆಷ್ಟು ಬೆತ್ತಲಾಗಬೇಕು ಅಂತಾ ಬಯಸಿದ್ದೀರಿ?.ಕೋರ್ಟ್ ಹೇಳಿದ್ದನ್ನೇ ರಾಜ್ಯಪಾಲರು ಹೇಳಿದಾಗ ಅವರ ವಿರುದ್ಧ ಚಳುವಳಿ ಮಾಡಿಸಿದ್ದೀರಿ.ಈಗ ಹೈಕೋರ್ಟ್ ನ್ಯಾಯಾಧೀಶರಿಗೆ ರಾಜ್ಯಪಾಲರಿಗೆ ಹೇಳಿದ್ದನ್ನೇ ಹೇಳುತ್ತೀರಾ?.ಸಿದ್ದರಾಮಯ್ಯನವರೇ ಹೊಗಳು ಭಟ್ಟರ ಮಾತು ಕೇಳಬೇಡಿ.ಹಳ್ಳಕ್ಕೆ ಬಿದ್ದ ಮೇಲೆ ಕಲ್ಲು ಎತ್ತಿ ಹಾಕುವವರು ಅವರೇ.ಜಮೀರ್ ತರಹದ ಹೊಗಳು ಭಟ್ಟರ ಮಾತು ಕೇಳಬೇಡಿ.ನೀವು ಕೆಳಕ್ಕೆ ಬಿದ್ದ ಮೇಲೆ ಅವರು ಇನ್ನೊಬ್ಬರು ಗಟ್ಟಿ ಇರುವವರನ್ನು ಹಿಡಿದುಕೊಳ್ಳುತ್ತಾರೆ ಎಂದರು.
ಇನ್ನು ಇದೇ ವಿಧಾನಸೌಧ ಪ್ರವೇಶಕ್ಕೆ ಅರವಿಂದ್ ಬೆಲ್ಲದ್ ಸೇರಿದಂತೆ ಉಳಿದ ಶಾಸಕರು ಯತ್ನಿಸಿದರು. ಈ ವೇಳೆ ಪಶ್ಚಿಮ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ. ಆಗ ಪೊಲೀಸರ ಜೊತೆ ಶಾಸಕರ ವಾಗ್ವಾದ ನಡೆದಿದೆ.ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.ಶಾಸಕರನ್ನು ವಶಕ್ಕೆ ಪಡೆದು ಬಸ್ ನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.