ಬೆಂಗಳೂರು; ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕೆ.ಆರ್. ಪುರಂನ ಭೈರತಿಯಲ್ಲಿರುವ ಶಾಸಕ ಭೈರತಿ ಬಸವರಾಜ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಮಾಜಿ ಸಚಿವ ವರ್ತೂರು ಪ್ರಕಾಶ್ ಮತ್ತು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ರು.
ಭೇಟಿ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾನು ಕುಟುಂಬಸ್ಥರನ್ನು ಭೇಟಿ ಮಾಡಿ ಫೋಟೋ ಹಾಕಿಸಿಕೊಳ್ಳಲು ಬಂದಿಲ್ಲ.ಯಡಿಯೂರಪ್ಪ ಸಿಎಂ ಆಗುವ ಸಮಯದಲ್ಲಿ ಸಮಯ ಮುಗಿದು ಹೋಗುತ್ತದೆ ಅಂತಾ ಬಸವರಾಜಣ್ಣ ಯಾವ ರೀತಿ ಓಡೋಡಿ ಬಂದಿದ್ದರು ಅಂತಾ ಜನ ನೋಡಿದ್ದಾರೆ. ಅಂದು ಬಸವರಾಜ ಅವರು ಅಂತಹ ಧೈರ್ಯ ಮಾಡಿದ್ದರು. ನಾವುಗಳಿದ್ದರೂ ಅಂತಹ ಧೈರ್ಯ ಮಾಡಲು ಸಾಧ್ಯ ಇರಲಿಲ್ಲ. ಯಡಿಯೂರಪ್ಪನವರ ಬಗ್ಗೆ ಅವರು ಇಟ್ಟ ವಿಶ್ವಾಸಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲವೂ ಕೂಡಾ ನಮ್ಮ ಪರೀಕ್ಷೆಯ ಸಮಯ.ತಂದೆಯ ಮೇಲೆ, ಕುಟುಂಬದ ಮೇಲೆ 25-30 ಕೇಸ್ ಗಳನ್ನು ನಾನೂ ಕೂಡಾ ಎದುರಿಸಿದ್ದೇನೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ನಮಗೆಲ್ಲಾ ಗೊತ್ತಿದೆ. ಯಾರೂ ಕೂಡಾ ತಾಳ್ಮೆ ಕಳೆದುಕೊಳ್ಳಬಾರದು. ಭಗವಂತನ ಬಗ್ಗೆ ನಂಬಿಕೆ, ವಿಶ್ವಾಸ ಇರಬೇಕು. ಒಳ್ಳೆಯ ವಕೀಲರ ತಂಡವೂ ಇದೆ.ಎಲ್ಲಾ ಪ್ರಕ್ರಿಯೆ ಸಮಯ ತೆಗೆದುಕೊಂಡೇ ತೆಗೆದುಕೊಳ್ಳುತ್ತದೆ. ಯಾರೂ ಕೂಡಾ ಆತಂತ, ತಾಳ್ಮೆ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ನಾನು, ಯಡಿಯೂರಪ್ಪ, ಪಕ್ಷ ಅವರ ಜೊತೆ ಇದ್ದೇ ಇರುತ್ತೇವೆ. ಎಲ್ಲವೂ ಒಳ್ಳೆಯದು ಆಗಿಯೇ ಆಗುತ್ತದೆ. ರಾಜಕೀಯವಾಗಿಯೂ ಯಾರೂ ಆತಂಕ ಪಡುವ ಅಗತ್ಯವಿಲ್ಲ ಅವರು ಈ ವೇಳೆ ತಿಳಿಸಿದ್ರು.











