ಬೆಂಗಳೂರು: ಬಿಜೆಪಿ ನಿಯೋಗ ಇಂದು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರನ್ನು ಭೇಟಿ ಮಾಡಿತು. ನಿಯೋಗದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ. ಅಶ್ವಥ್ ನಾರಾಯಣ, ಎಸ್. ಮುನಿರಾಜು, ರವಿಸುಬ್ರಮಣ್ಯ, ಸಿ.ಕೆ. ರಾಮಮೂರ್ತಿ, ಕೆ. ಗೋಪಾಲಯ್ಯ, ಎಸ್. ರಘು ಭಾಗಿಯಾಗಿದ್ದರು.
ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ತುಷಾರ್ ಗಿರಿನಾಥ್ ಮತ್ತು ಮಹೇಶ್ವರ ರಾವ್ ಭೇಟಿ ಮಾಡಿ ಬೆಂಗಳೂರು ವಿಭಜನೆ ಮಾಡದಂತೆ, ಕಸದ ಸೆಸ್ ಮತ್ತು ಬೆಲೆ ಏರಿಕೆ ಕೈಬಿಡುವಂತೆ, ಬಿಬಿಎಂಪಿ ಚುನಾವಣೆ ನಡೆಸುವಂತೆ ಮನವಿ ಸಲ್ಲಿಕೆ ಮಾಡಿದ್ರು.
ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ್ ಇಡೀ ದೇಶದಲ್ಲಿ ಅತೀ ಹೆಚ್ಚು ಕಸ ವಿಲೇವಾರಿಗೆ ತೆರಿಗೆ ಹಾಕಿದ ಪುಣ್ಯಾತ್ಮರು ಕಾಂಗ್ರೆಸ್ ನವರು.ಇವರು ಮನೆ ಕಟ್ಟುವವರಲ್ಲ, ಮನೆ ಹಾಳು ಮಾಡುವವರು.ಯಾರ ಮನೆ ಹಾಳು ಮಾಡಲು ಇಷ್ಟು ಸೆಸ್ ಸಂಗ್ರಹ ಮಾಡುತ್ತಿದ್ದೀರಾ?. ನಾವು ಇವತ್ತು ಆಡಳಿತಾಧಿಕಾರಿಗೆ ಮನವಿ ಮಾಡಿದ್ದೇವೆ. ತೆರಿಗೆ ಜಾಸ್ತಿ ಮಾಡಿರುವುದಕ್ಕೆ ಕಾರಣ ಕೊಡಿ ಎಂದು ಕೇಳಿದ್ದೇವೆ. ಇಲ್ಲದಿದ್ದರೆ ಬೆಂಗಳೂರಿನ ಜನರ ಶಾಪ ನಿಮಗೆ ತಟ್ಟುತ್ತದೆ. ತೆರಿಗೆ ಹಾಕಿರುವುದನ್ನು ವಾಪಸ್ ಪಡೆಯಲು ಆಗ್ರಹ ಮಾಡಿದ್ದೇವೆ.ಇಡೀ ಬೆಂಗಳೂರಿನ ಜನತೆ ತೆರಿಗೆ ಕಟ್ಟಲ್ಲ ಎಂಬ ಅಭಿಯಾನಕ್ಕೆ ಕೈ ಜೋಡಿಸಬೇಕು. ಎಂದರು.
ಅರ್ಹರಿಗೆ ಮಾತ್ರ ಗ್ಯಾರಂಟಿ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಎಲ್ಲರಿಗೂ ಫ್ರೀ ಅಂತಾ ಹೇಳಿ ಬಿಪಿಎಲ್ ನವರಿಗೆ ಮಾತ್ರ ಅಂತಾ ಹೇಳಿದರು. ಈಗ ಅರ್ಹರು ಅಂತಾ ಹುಡುಕಿ ಕಾಂಗ್ರೆಸ್ ಮತದಾರರಿಗೆ ಮಾತ್ರ ಕೊಡುತ್ತಾರೆ. ಗ್ಯಾರಂಟಿ ಕೊಡಲು ಅವರಿಗೆ ಆಗುತ್ತಿಲ್ಲ ಎಂಬುದು ಸ್ಪಷ್ಟ ಆಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದೆ.ಐದು ಗ್ಯಾರಂಟಿಗಳು ಗ್ಯಾರಂಟಿ ಕಳೆದುಕೊಳ್ಳುತ್ತಿವೆ . ಕರ್ನಾಟಕ ಪಾಪರ್ ಆಗಲಿದೆ ಎಂದರು.
ಕಮಲ್ ಹಾಸನ್ ಹೇಳಿಕೆ ಬಗ್ಗೆ ಮಾತನಾಡಿ ಕಮಲ್ ಹಾಸನ್ ಒಬ್ಬ ತಲೆ ತಿರುಕ, ಹುಚ್ಚ. ಅವನಿಗೆ ಕನ್ನಡ ಸಿನಿಮಾದಲ್ಲಿ ಬಹಳಷ್ಟು ಅವಕಾಶ ಕೊಟ್ಟಿದ್ದಾರೆ. ಅದರ ನ್ಯಾಯ ತೀರಿಸಲಾದರೂ ನ್ಯಾಯಯುತವಾಗಿ ಮಾತಾಡಬೇಕಿತ್ತು. ಅವನೊಬ್ಬ ನಗರ ನಕ್ಸಲ್ ರೀತಿ. ಅವನಿಗೆ ಕರ್ನಾಟಕದ ಜನ ಬಹಿಷ್ಕಾರ ಹಾಕಬೇಕು. ಕರ್ನಾಟಕದೊಳಗೆ ಬರಲು ಬಿಡಬಾರದು.ಅವರ ಎಲ್ಲಾ ಚಿತ್ರಗಳು ರಾಜ್ಯದಲ್ಲಿ ಓಡಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು.ಕನ್ನಡ ಸಂಘಟನೆಗಳು ಒತ್ತಾಯ ಮಾಡಬೇಕು ಎಂದರು.
ಬಂಟ್ವಾಳದಲ್ಲಿ ಕೊಲೆ ವಿಚಾರದ ಬಗ್ಗೆ ಮಾತನಾಡಿ ಕೊಲೆಗೆ ಕೊಲೆ ಮನಸ್ಥಿತಿ ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.ಸರ್ಕಾರ ಕಾನೂನು ಜಾರಿ ದೃಷ್ಟಿಯಿಂದ ಯಾರನ್ನೋ ಓಲೈಕೆ ಮಾಡುವ ದೃಷ್ಟಿಯಿಂದ ಇದೆ.ಇದರಿಂದ ಈ ಗಲಭೆಗಳು ನಡೆಯುತ್ತಿವೆ. ಸರ್ಕಾರ ನಿಸ್ಪಕ್ಷವಾಗಿದ್ದರೆ ಇದಕ್ಕೆಲ್ಲಾ ಅವಕಾಶ ಇಲ್ಲ.ಸರ್ಕಾರ ಮತೀಯವಾದಕ್ಕೆ ಪುಷ್ಠಿ ಕೊಡುತ್ತಿದೆ.ಎಂದ ಅವರು ಆಂಧ್ರಪ್ರದೇಶದ ಹೆಚ್ ಎಎಲ್ ಘಟಕಕ್ಕೆ ಅವಕಾಶ ಕೇಳಿರುವ ವಿಚಾರದ ಬಗ್ಗೆ ಮಾತನಾಡಿ ಹೆಚ್ ಎಎಲ್ ನಮ್ಮದು.ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇನ್ನು ಬರುವ ಕೈಗಾರಿಕೆಗಳ ಬಗ್ಗೆ ನಾವು ನೋಡುತ್ತಿದ್ದೇವೆ. ಹೆಚ್ಎಎಲ್ ಗೆ ಇತಿಹಾಸ ಇದೆ, ಮಹಾರಾಜರ ಕಾಲದಿಂದ ಇದೆ ಎಂದರು,