ಬೆಂಗಳೂರು: ಬೀದರ್ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬ್ಯಾಂಕ್ ದರೋಡೆ ನಡೆದಿದ್ದು ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿದೆ, ಕಾಂಗ್ರೆಸ್ನವರು ಖಜಾನೆ ಲೂಟಿ ಮಾಡುತ್ತಿದ್ದಾರೆ. ಆ ಕಡೆ ಕಳ್ಳರಿಗೆ ಫ್ರೀ ಬಿಟ್ಟಿದ್ದಾರೆ, ಕಳ್ಳರು ದರೋಡೆ ಮಾಡುತ್ತಿದ್ದಾರೆ.ಇಬ್ಬರೂ ಮಾಡುತ್ತಿರುವುದು ದರೋಡೆಯೇ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಸರ್ಕಾರದ ಖಜಾನೆ ಲೂಟಿಗೆ ಇಳಿದಿದೆ ಎಂದರು.
ದರೋಡೆಕೋರರು ಹಣ ಎಲ್ಲಿ ಸಿಗುತ್ತದೋ ಅಲ್ಲಿ ದರೋಡೆ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಯಾರನ್ನು ಹದ್ದುಬಸ್ತಿನಲ್ಲಿಡಬೇಕು ಅಂತ ಈ ಸರ್ಕಾರಕ್ಕೆ ಪಾಠ ಹೇಳಿ ಕೊಡಬೇಕಿದೆ. ಸಿಎಂ ಮಂಗಳೂರಿನಲ್ಲೇ ಇರುವಾಗ ಈ ದರೋಡೆ ನಡೆದಿದೆ. ಸಿಎಂ ಕಳ್ಳರನ್ನು ಹಿಡಿಯಲು ಮಂಗಳೂರಿಗೆ ಹೋಗಿರಬೇಕು ಎಂದು ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ವಿಧಾನ ಪರಿಷತ್ ನಲ್ಲಿ ಸಚಿವೆ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ರವಿ ನಡುವೆ ಜಟಾಪಟಿ ವಿಚಾರದಲ್ಲಿ ಮಾಹಿತಿ ಇಲ್ಲ ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಪ್ರಕರಣದಲ್ಲಿ ಏನಾಗುತ್ತಿದೆ ಅಂತ ಗೃಹ ಸಚಿವರು ಯಾವಾಗಲೂ ತಮ್ಮ ಬಳಿ ಮಾಹಿತಿ ಇಲ್ಲ ಅಂತಾರೆ. ಗೃಹ ಸಚಿವರಿಗೆ ಸರಿಯಾದ ಮಾಹಿತಿಯನ್ನೇ ಈ ಸರ್ಕಾರ ಕೊಡುತ್ತಿಲ್ಲ. ಗೃಹ ಮಂತ್ರಿಯವರನ್ನೇ ಈ ಸರ್ಕಾರ ಕತ್ತಲೆಯಲ್ಲಿ ಇಟ್ಟಿದೆ, ಗೃಹ ಸಚಿವರನ್ನೇ ಮೂಲೆಗೆ ತಳ್ಳಿದೆ ಎಂದು ತಿಳಿಸಿದ್ರು,
ಆರ್ ಎಸ್ ಎಸ್, ಬಿಜೆಪಿ ಸಂವಿಧಾನ ವಿರೋಧಿಗಳು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾತನಾಡಿದ ಅವರು ಎಲ್ಲಾದರೂ ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆ ತೋರಿಸಲಿ. ಮೀಸಲಾತಿ ಪರ, ಸಂವಿಧಾನ ಪರ ಇರುವುದು ಬಿಜೆಪಿ. ಕಾಂಗ್ರೆಸ್ ಸಂವಿಧಾನ ವಿರೋಧಿ ಪಕ್ಷ. ರಾಹುಲ್ ಗಾಂಧಿ ಭಾರತದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಅಂದರು. ಹಾಗಾದ್ರೆ ರಾಹುಲ್ ಗಾಂಧಿಯವರನ್ನು ಉಚ್ಛಾಟಿಸಿ ನೋಡೋಣ?. ರಾಹುಲ್ ಮಾನಸಿಕ ಸ್ಥಿಮಿತ ಸರಿ ಇದೆಯೇ ಅಂತ ಪ್ರಶ್ನೆ ಮಾಡಿ ನೋಡೋಣ? ಎಂದು ಸವಾಲು ಹಾಕಿದ್ದಾರೆ.