ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಟನ್ ಪೇಟೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಿಹಾರ ಮೂಲದ ಶೇಖ್ ನುಸ್ರು (30) ಬಂಧಿತ ಆರೋಪಿ.
ಮೊನ್ನೆ ಮಧ್ಯರಾತ್ರಿ ಆರೋಪಿ ಬಿಹಾರ ಮೂಲದ ಶೇಖ್ ನುಸ್ರು ಚಾಮರಾಜ ಪೇಟೆಯಲ್ಲಿ ರಸ್ತೆ ಬದಿಯ ಶೆಡ್ ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಅದರಂತೆ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಬಿಹಾರದ ಚಂಪಾರಣ್ ಜಿಲ್ಲೆಯವನಾದ ಶೇಖ್ ನುಸ್ರು ಪ್ಲಾಸ್ಟಿಕ್ ಬ್ಯಾಗ್ ಹೊಲೆಯುವ ಕೆಲಸ ಮಾಡಿಕೊಂಡಿದ್ದ. ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕುಯ್ದಿರೋದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಗೆ ನ್ಯಾಯಾಧೀಶರು ಜನವರಿ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.