ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಬಂಧಿಸಿದ ಗುಡ್ಡ ಕುಸಿತದಲ್ಲಿ ಮಣ್ಣಿನ ಅಡಿ ಸಿಲುಕಿದ್ದ 6 ಜನರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಗುಡ್ಡ ಕುಸಿತದಲ್ಲಿ ಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್(11) ಸೇರಿ ಟ್ರಕ್ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ವರ ಮೃತದೇಹಗಳು ಗೋಕರ್ಣ ಸಮೀಪ ಸಿಕ್ಕಿದೆ ಎನ್ನಲಾಗಿದೆ. ಮೃತದೇಹಗಳನ್ನು ಕುಮಟಾ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಅಂದ್ಹಾಗೆ ರಕ್ಷಣಾ ಕಾರ್ಯಾಚರಣೆ ವೇಳೆ ಮೊದಲು ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಬಳಿಕ ಐದು ಜನರ ಮೃತದೇಹ ಪತ್ತೆಯಾಗಿತ್ತು. ಇದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತರಾದರೆ, ಇನ್ನುಳಿದ ಇಬ್ಬರು ಯಾರು ಎಂಬ ಗುರುತು ಪತ್ತೆಯಾಗಿಲ್ಲ. ಸದ್ಯ ಹಿಟಾಚಿ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ಘಟನೆಯಲ್ಲಿ ಎರಡು ಮನೆಯ ಮೇಲೆ ಗುಡ್ಡ ಕುಸಿದಿದೆ. ನದಿಯಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಕೊಚ್ಚಿ ಹೋಗಿವೆ. ಒಂದು ಗ್ಯಾಸ್ ಟ್ಯಾಂಕರ್ ಗುಡ್ಡದ ಪಕ್ಕ ಸುರಕ್ಷಿತವಾಗಿದೆ. ಇನ್ನು ನದಿಯಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್ ಲೀಕ್ ಆಗಿಲ್ಲ. ಈ ಗ್ಯಾಸ್ ಟ್ಯಾಂಕರ್ ಅನ್ನು ಹೊರ ತೆಗೆಯುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಹೇಳಿಕೆ ನೀಡಿದ್ದಾರೆ. ಮಣ್ಣಿನಡಿ 20ಕ್ಕೂ ಹೆಚ್ಚು ಜನರ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆದೆ ಭಾರಿ ಅಡ್ಡಿ ಉಂಟಾಗುತ್ತಿದ್ದು, ಮಳೆಯನ್ನು ಲೆಕ್ಕಿಸಿದೇ ಕಾರ್ಯಾಚರಣೆ ನಡಿತಿದೆ.
ಇನ್ನು ಮೃತ ಲಕ್ಷಣ್ ನಾಯ್ಕ ಅವರ ಮನೆಯಲ್ಲಿ ನಾಯಿಯೊಂದು ವಾಸವಿತ್ತು. ಮನೆಯವರು ಮಣ್ಣು ಪಾಲಾಗೋದನ್ನು ಕಣ್ಣಾರೆ ನೋಡಿದ ನಾಯಿ ಮಣ್ಣು ಕುಸಿತವಾದ ಜಾಗದಲ್ಲೇ ನಿಂತು ಮನೆಯವರಿಗಾಗಿ ರೋಧಿಸುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.
ಉತ್ತರಕನ್ನಡದಲ್ಲಿ ವರುಣನ ರೌದ್ರ ನರ್ತನ; ಅಂಕೋಲಾದಲ್ಲಿ ಗುಡ್ಡ ಕುಸಿದು 7 ಮಂದಿ ಸಾವು
ಉತ್ತರಕನ್ನಡದಲ್ಲಿ ವರುಣನ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುದೊಡ್ಡ ಅನಾಹುತ ಸಂಭವಿಸಿದೆ.
ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಹೆದ್ದಾರಿ ಪಕ್ಕದ ಅಂಗಡಿ, ಮನೆಗಳಲ್ಲಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ. ಅಲ್ಲದೇ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ತೇಲಿ ಹೋಗಿದೆ ಎಂದು ಹೇಳಲಾಗಿದೆ.
ಇನ್ನು ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.ರಸ್ತೆ ಬ್ಲಾಕ್ ಆಗಿ ಬೆಂಗಳೂರಿನಿಂದ ಕರಾವಳಿಗೆ ತೆರಳುವ ಬಸ್ ಗಳು ಸಾಲು ಗಟ್ಟಿ ನಿಂತಿದ್ದು, ಪ್ರಯಾಣಿಕರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ರಸ್ತೆ ಕಾಮಗಾರಿ ನಿರ್ವಹಿಸಿಕೊಂಡ ಆರ್. ಎನ್. ಎಸ್ ಕಂಪನಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಶಿರಸಿ ತಹಶೀಲ್ದಾರ್ ಸೇರಿ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ.